Sunday, September 8, 2024

ಜೀವನಕ್ಕಾಗಿದ್ದ 2 ಎಕರೆ ಭೂಮಿಯನ್ನೇ ಶಿಕ್ಷಣಕ್ಕಾಗಿ ಶಾಲೆಗೆ ದಾನ ಮಾಡಿದ ಮಹಾತಾಯಿಗೆ ‘ಕಲರ್ಸ್ ಕನ್ನಡಿಗ ಪ್ರಶಸ್ತಿ’

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ 2023 ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕೊಡು ಗೈ ದಾನಿ 75 ವರ್ಷದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಕಲರ್ಸ್ ಕನ್ನಡಿಗೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಈ ತಾಯಿಗೆ ಮಕ್ಕಳು ಇಲ್ಲ. ಜೀವನಕ್ಕಾಗಿದ್ದ ಭೂಮಿಯನ್ನು ತನ್ನೂರಿನ ಶಾಲೆಗೆ ದಾನ ಮಾಡಿದ ಮಹಾತಾಯಿ ಇವರು. ಇದ್ದ ಜಮೀನು ದಾನವಾಗಿ ನೀಡಿದ ನಂತರ ಅದೇ ಶಾಲೆಯಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಮಕ್ಕಳಿಗೆ ಅಡುಗೆ ಮಾಡುವ ಮೂಲಕ ಜೀವನದ ಸಂತೋಷವನ್ನು ಕಂಡು ಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದಲ್ಲಿ ಈ ತಾಯಿ ವಾಸವಾಗಿದ್ದಾರೆ. ಈ ಮಹಾತಾಯಿ ಹೆಸರು ಹುಚ್ಚಮ್ಮ ಚೌದ್ರಿ. ವಯಸ್ಸು 75. ಬಾಲ್ಯದಲ್ಲಿಯೇ ಹುಚ್ಚಮ್ಮ ಅವರನ್ನು ಕುಣಿಕೇರಿಯ ಬಸಪ್ಪ ಚೌದ್ರಿ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚೌದ್ರಿ ದಂಪತಿ ಮಡಿಲು ಮಾತ್ರ ಬರಿದಾಗಿತ್ತು.

ಹುಚ್ಚಮ್ಮನಿಗೆ 75 ವರ್ಷವಾದರೂ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ, ಅವರ ಪರಿಸ್ಥಿತಿ, ತಾನು ತನ್ನದು ಎಂದು ಹೇಳುವ ಜನರ ಮಧ್ಯೆ ಹುಚ್ಚಮ್ಮ ತನ್ನಲ್ಲಿ ಇದ್ದ ಎಲ್ಲವನ್ನೂ ಶಿಕ್ಷಣಕ್ಕಾಗಿ ದಾನ ನೀಡಿ ಕೊಡುಗೈ ದಾನಿ ಎನಿಸಿಕೊಂಡರು. 

ಚಿಕ್ಕ ವಯಸ್ಸಿನಲ್ಲೇ ಕುಣಿಕೇರಿಯ ಬಸಪ್ಪ ಚೌದ್ರಿ ಜೊತೆ ಮದುವೆಯಾದ ಹುಚ್ಚಮ್ಮನಿಗೆ ಮಕ್ಕಳಿರಲಿಲ್ಲ. 30 ವರ್ಷಗಳ ಹಿಂದೆ ಬಸಪ್ಪ ಚೌದ್ರಿ ಅವರು ನಿಧನರಾಗುತ್ತಾರೆ. ಆಗ ಹುಚ್ಚಮ್ಮ ಅವರು ಏಕಾಂಗಿಯಾಗಿದ್ದರು. ಊರ ಪಕ್ಕದಲ್ಲಿಯೇ ಇರುವ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಬದುಕುತ್ತಿದ್ದರು. ಆದರೆ ಇದೇ ಸಮಯದಲ್ಲಿ ಕುಣಿಕೇರಿ ಗ್ರಾಮದಲ್ಲಿರುವ ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕಾಗಿತ್ತು.

ಶಾಲೆ ನಿರ್ಮಾಣಕ್ಕೆ ಭೂಮಿ ಅವಶ್ಯಕತೆ ಇತ್ತು. ಆದರೆ ಊರಿನಲ್ಲಿ ಜಮೀನು ನೀಡುವವರು ಯಾರು ಇರಲಿಲ್ಲ. ಈ ಮಧ್ಯೆ ಹುಚ್ಚಮ್ಮ ತನ್ನೂರಿನ ಶಾಲಾ ಮಕ್ಕಳಿಗೆ ಭೂಮಿಯನ್ನು ದಾನವಾಗಿ ನೀಡಲು ಮುಂದಾಗಿದ್ದರು. ಮೊದಲು ಒಂದು ಎಕರೆ ಭೂಮಿಯನ್ನು ಶಾಲೆಗೆ ನೀಡಿದರು. ಆದರೆ ಮಕ್ಕಳ ಆಟಕ್ಕಾಗಿ ಭೂಮಿ ಅವಶ್ಯವಾಗಿತ್ತು. ಈ ಕಾರಣಕ್ಕಾಗಿ ತಮ್ಮ ಹೆಸರಿನಲ್ಲಿರುವ ಎರಡೂ ಎಕರೆ ಭೂಮಿಯನ್ನು ಶಾಲೆ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ್ದಾರೆ.

ಸದ್ಯ ಹುಚ್ಚಮ್ಮ ಅವರ ಭೂಮಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ.ಈ ಮಧ್ಯೆ ಗಂಡನಿಲ್ಲ, ಮುಂದೇ ನಿನ್ನ ಜೀವನಕ್ಕೇನು ಮಾಡುತ್ತಿ ಎಂದು ಕೇಳಿದಾಗ ಯಾರಾದರೂ ಎರಡು ಹೊತ್ತು ಊಟ ನೀಡಿದರೆ ಸಾಕು ಎಂದಿದ್ದರು. ಇದೀಗ ತಾವೇ ದಾನವಾಗಿ ನೀಡಿದ ಭೂಮಿಯಲ್ಲಿ ಭವ್ಯವಾದ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಈಗ ಹುಚ್ಚಮ್ಮ ಅದೇ ಶಾಲೆಯಲ್ಲಿ ಅಡುಗೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. 

ಕುಣಿಕೇರಿ ಭಾಗದಲ್ಲಿ ಉಕ್ಕಿನ ಕಾರ್ಖಾನೆಗಳು ನಿರ್ಮಾಣವಾಗಿವೆ. ಕಾರ್ಖಾನೆಗಳಿಂದಾಗಿ ಇಲ್ಲಿಯ ಭೂಮಿಯ ಬೆಲೆ ಗಗನಕ್ಕೇರಿದೆ. ಕುಣಿಕೇರಿ ಶಾಲೆಗೆ ಹುಚ್ಚಮ್ಮ ನೀಡಿದ ಭೂಮಿಯ ಬೆಲೆ ಈಗಿನ ಮಾರುಕಟ್ಟೆಯ ದರಕ್ಕೆ ಹೊಲಿಸಿದರೆ ಕನಿಷ್ಠವೆಂದರೂ 1 ಕೋಟಿ ರೂಪಾಯಿ ಬೆಲೆಬಾಳುತ್ತದೆ.

ಶಾಲೆಗೆ ಬರುವ ವಿದ್ಯಾರ್ಥಿಗಳೇ ನನ್ನ ಮಕ್ಕಳು:

ತನಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲ. ಶಾಲೆಯಲ್ಲಿರುವ 300 ಕ್ಕೂ ಅಧಿಕ ಶಾಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡು ನಿತ್ಯ ಕಾಳಜಿಯಿಂದ ಬಿಸಿಯೂಟ ತಯಾರಿ ಮಾಡಿ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ. ಶಾಲೆಯ ಎಲ್ಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡಿದ್ದಾರೆ.

ಕೋಟಿ ಕೋಟಿ ಹಣವಿದ್ದರೂ ಒಂದು ರೂಪಾಯಿ ದಾನ ಮಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ತನ್ನ ತನ್ನಲ್ಲಿದ್ದದ್ದ ಸುಮಾರು ಒಂದು ಕೋಟಿ ಮೌಲ್ಯದ ಭೂಮಿ ದಾನ ಮಾಡಿ, ಶಾಲೆಯ ಮಕ್ಕಳನ್ನೆ ತನ್ನ ಮಕ್ಕಳೆಂದು ತಿಳಿದು ಜೀವಿಸುವ ಹುಚ್ಚಮ್ಮನಿಗೆ ಒಂದು ದೊಡ್ಡ ಸಲಾಮ್. 

ಜಿಲ್ಲೆ

ರಾಜ್ಯ

error: Content is protected !!