Saturday, July 27, 2024

ಗದಗ ಜಿಲ್ಲಾಸ್ಪತ್ರೆ ವೈದ್ಯನ ಗುಂಡಾ ವರ್ತನೆ!

ಗದಗ: ಬಾಣಂತಿ ಹಾಗೂ ನವಜಾತ ಶಿಶುವಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ವೈದ್ಯನೊಬ್ಬ ರೌಡಿಸಂ ರೀತಿ ಅವಾಜ್ ಹಾಕಿರುವ ಘಟನೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಗೌತಮ್, ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಸೂರಣಗಿ ಗ್ರಾಮದ ಹುಸೇನಬಿ ಹೊಳಲ ಎಂಬವರ ಹೆರಿಗೆಯಾಗಿದೆ. ಮಗು ಕಾಮಾಲೆ, ಅಸ್ತಮಾ ರೋಗದಿಂದ ಬಳಲುತ್ತಿದೆ. ಈ ವೇಳೆ ಸರಿಯಾಗಿ ಚಿಕಿತ್ಸೆ ನೀಡದ್ದಕ್ಕೆ ಪತಿ ಮುಸ್ತಾಕ್ ಅಲಿ ವೈದ್ಯನನ್ನು ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಮುಖಂಡನಿಗೆ ಫೋನ್ ಮೂಲಕ ಮಾಹಿತಿಯೂ ನೀಡಿದ್ದಕ್ಕೆ, ವೈದ್ಯರು ಹಾಗೂ ಸಿಬ್ಬಂದಿ ಅವರ ಮೇಲೆ ಮತ್ತಷ್ಟು ಕುಪಿತಗೊಂಡಿದ್ದಾರೆ ಎನ್ನಲಾಗಿದೆ.

 

ಮುಸ್ತಾಕ್ ಅಲಿ ಮೇಲೆ ವೈದ್ಯ ಗೌತಮ್ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ರೋಗಿಗಳದ್ದಾಗಿದೆ. ಇಲ್ಲಿ ನಾನಾಡಿದ್ದೇ ಆಟ, ನಾನೇ ಡಾಕ್ಟರ್ ನಾ ಹೇಗಿರಬೇಕು ಹಾಗೆ ಇರ್ತೀನಿ ಅದನ್ನು ಹೇಳಕ್ಕೆ ನೀನ್ಯಾರು? ಎಫ್ರಾನ್, ಸ್ಕೆತಸ್ಕೋಪ್ ಹಾಕಿಕೊಂಡ್ರೆ ವೈದ್ಯ, ಕೈಯಲ್ಲಿ ಲಾಂಗ್, ಮಚ್ಚು ಹಿಡಿದ್ರೆ ರೌಡಿ. ಇಲ್ಲಿ ಡಿಸಿ, ಎಸ್‌ಪಿ, ಮೀಡಿಯಾ ಯಾರೇ ಬಂದ್ರೂ ಏನೂ ಮಾಡಿಕೊಳ್ಳೋಕೆ ಆಗಲ್ಲ ಎಂದು ಸಿನಿಮಾ ಡೈಲಾಗ್ ರೀತಿಯಲ್ಲಿ ಅವಾಜ್ ಹಾಕಿದ್ದಾನೆ.

ಶರ್ಟ್ ಕಳೆದು ಹೇಗೆ ಬೇಕು ಹಾಗೆ ವರ್ತಿಸುತ್ತಾನೆ. ಏನ್ ಮಾಡ್ಕೋತಿಯ ಮಾಡ್ಕೋ, ಪ್ರೆಸ್ ಮೀಟ್ ಮಾಡುತ್ತೀಯಾ ಫೇಸ್ ಬುಕ್‌ನಲ್ಲಿ ಲೈವ್ ಬಿಡ್ತೀಯಾ ಬಿಟ್ಕೊ, ಬಾ ನನ್ನ ಊರಿಗೆ ಗದಗ ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿಗೆ ಬಾ ಅಲ್ಲಿ ನೋಡ್ಕೋತೀನಿ. ಇಲ್ಲಿ ನಾನೇ ಬಾಸ್ ಇದು ನನ್ನ ಆಸ್ಪತ್ರೆ ಎಂದು ಹೇಳಿ ತನ್ನ ಶರ್ಟ್ ಬಿಚ್ಚಿ ದರ್ಪ ತೋರಿದ್ದಾನೆ.

ವೀಡಿಯೋ ಮಾಡಿದ್ರೆ ಹೊಡೆತ ತಿಂತೀಯಾ ಹುಷಾರ್, ಎಷ್ಟು ದಿನ ಅಂತ ಇಲ್ಲೇ ತಿನ್ಕೊಂಡು ಬಿದ್ದಿರ್ತೀರಾ? ಮನೆಗೆ ಹೋಗ್ರಿ, ಇವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ರದ್ದು ಮಾಡಿ. ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಂತೆ ಮಾಡಿ ಎಂದು ಅಲ್ಲಿಯ ಸಿಬ್ಬಂದಿಗೆ ಹೇಳಿದ್ದಾನೆ.

ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ದರ್ಪ ತೋರಿದ ವೈದ್ಯನ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಇವನಿಂದ ಆಗುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

 

 

 

 

(ಕೃಪೆ:ಬಿಟಿವಿ)

 

 

ಜಿಲ್ಲೆ

ರಾಜ್ಯ

error: Content is protected !!