Saturday, July 27, 2024

ಬಿಜೆಪಿ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸುವ ತಾಕತ್ ಕಾಂಗ್ರೆಸ್‌ಗೆ ಇಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

ಸುದ್ದಿ ಸದ್ದು ನ್ಯೂಸ್‌ 

ಬೆಂಗಳೂರು: ಭಾರತೀಯ ಜನತಾ ಪಕ್ಷ ದಲಿತರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಸಾಮಾಜಿಕ ನ್ಯಾಯದ ನಿಜ ಅರ್ಥವನ್ನು ತೋರಿಸುವ ಮೂಲಕ ತಕ್ಕ ಎದುರೇಟು ನೀಡಿದೆ. ಅಲ್ಲದೇ, ನಾವು ನೀಡಿರುವ ಮೀಸಲಾತಿಯನ್ನ ರದ್ದುಗೊಳಿಸುವ ತಾಕತ್‌ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. ಅದನ್ನು ರದ್ದುಗೊಳಿಸುವ ಪ್ರಯತ್ನ ಪ್ರಾರಂಭಿಸಿದ ದಿನದಿಂದಲೇ ಆ ಪಕ್ಷದ ತನ್ನ ಕೊನೆಯ ದಿನಗಳ ಪ್ರಾರಂಭವಾಗಲಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ 132 ನೇ ಭಾರತರತ್ನ ಡಾ. ಬಿ. ಆರ್‌ ಅಂಬೇಡ್ಕರ್‌ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಸಂಧರ್ಭದಲ್ಲಿ ವಿರೋಧ ಪಕ್ಷಗಳು ನಮ್ಮ ಪಕ್ಷದ ಮೇಲೆ ಇನ್ನಿಲ್ಲದ ಆರೋಪಗಳನ್ನು ಮಾಡಿದವು. ದಲಿತ ವಿರೋಧಿ, ಸಂವಿಧಾನ ವಿರೋಧಿ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದರು. ಆದರೆ, ಡಾ. ಬಿ ಆರ್‌ ಅಂಬೇಡ್ಕರ್‌ ರವರ ರಚಿಸಿದ ಸಂವಿಧಾನದ ಸಾಮಾಜಿಕ ನ್ಯಾಯವನ್ನು ನಿಜ ಅರ್ಥದಲ್ಲಿ ದೇಶದಲ್ಲಿ ಅಳವಡಿಸಿದ್ದು ನರೇಂದ್ರ ಮೋದಿ ಜಿ ಅವರ ನೇತೃತ್ವದ ಸರಕಾರ. ಸಾಮಾಜಿಕ ವಾಗಿ ಹಿಂದುಳಿದ ಜನರಿಗೆ ದೇಶದ ಅತ್ಯುನ್ನತ ಹುದ್ದೆಗಳನ್ನ ನೀಡುವ ಮೂಲಕ, ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ಪಕ್ಷದ ಧೋರಣೆ ಏನು ಎನ್ನುವದನ್ನ ತೋರಿಸಿ ಕೊಟ್ಟಿದ್ದಾರೆ. ಇದೇ ರೀತಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ತಮ್ಮ ನಿಲುವನ್ನ ಸ್ಪಷ್ಟವಾಗಿಸಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ಬಾಯಿಮುಚ್ಚಿಸಿದ್ದೇವೆ. ಸಾಮಾಜಿಕವಾಗಿ ಹಿಂದುಳಿದವರ ಸರ್ವತೋಮುಖ ಅಭಿವೃದ್ದಿಯಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಮೀಸಲಾತಿಗಾಗಿ ಹಲವಾರು ಹೋರಾಟ ನಡೆದಿದ್ದವು, 40 ವರ್ಷಗಳ ಹೋರಾಟಕ್ಕೆ ಅದಕ್ಕೆ ತಾರ್ಕಿತ ಅಂತ್ಯ ನೀಡಿದ್ದು ನಮ್ಮ ಸರಕಾರ. ಕಾಂಗ್ರೆಸ್‌ ಸರಕಾರ ವೋಟ್ ರಾಜಕಾರಣ ಮಾಡುತ್ತಿದೆ. ತನ್ನ ವೈಯಕ್ತಿಕ ಹಿತಾಸಕ್ತಿಗೋಸ್ಕರ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿದ್ದರ ವಿರುದ್ದ ಧ್ವನಿ ಎತ್ತಿದೆ. ಕಾಂಗ್ರೆಸ್‌ ಗೆ ತಾಕತ್‌ ಇದ್ದರೆ ಮೀಸಲಾತಿಯನ್ನು ರದ್ದುಗೊಳಿಸಲಿ, ಮೀಸಲಾತಿಯನ್ನು ರದ್ದುಗೊಳಿಸಲು ಮುಂದಾದ ದಿನದಿಂದಲೇ ಆ ಪಕ್ಷದ ಕೊನೆಯ ದಿನಗಳು ಪ್ರಾರಂಭವಾಗಲಿವೆ ಎಂದು ಸವಾಲ್‌ ಹಾಕಿದರು.

ಬೊಮ್ಮನಹಳ್ಳಿ ಶಾಸಕರಾದ ಸತೀಶ್‌ ರೆಡ್ಡಿ ಮಾತನಾಡಿ ದೇಶದ ಶೋಷಿತ ವರ್ಗದ ಜನರ ಅಭ್ಯದಯಕ್ಕೆ ಕಾರಣಕರ್ತರಾಗಿರುವ ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಸಾಮಾಜಿಕ ಅಭ್ಯದಯದ ಹಾದಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಈ ಹಾದಿಯಲ್ಲಿ ನಡೆಯುವ ಧೃಢ ನಿರ್ಧಾರ ನಮ್ಮದಾಗಿದೆ. ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕವಾಗಿ ಹಿಂದುಳಿದ ಜನರ ಅಭ್ಯದಯಕ್ಕೆ ಎಲ್ಲ ರೀತಿಯ ಕೊಡುಗೆಯನ್ನು ನೀಡಿದೆ. ಡಬಲ್‌ ಇಂಜಿನ್‌ ಸರಕಾರ ಡಬಲ್‌ ಫೋರ್ಸ್‌ನಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ಜಿ ಅವರ ಆಶಯಗಳನ್ನು ಕಾರ್ಯಗತಗೊಳಿಸುತ್ತಿದೆ. ನಮ್ಮ ಪಕ್ಷದ ಮೇಲೆ ಸಾಮಾಜಿಕವಾಗಿ ಹಿಂದುಳಿದವರ ಆಶೀರ್ವಾದವಿದ್ದು ನಮ್ಮ ಕೈ ಹಿಡಿಯಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಬಿಬಿಎಂಪಿ ನಿಕಟಪೂರ್ವ ಉಪಮೇಯರ್‌ ರಾಮ್‌ ಮೋಹನ್‌ ರಾಜ್‌ ಸೇರಿದಂತೆ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.   

 

ಜಿಲ್ಲೆ

ರಾಜ್ಯ

error: Content is protected !!