Thursday, September 12, 2024

ಸಿಎಂ ಕ್ಷೇತ್ರ ಸೇರಿದಂತೆ ಸುಮಾರು 30 – 40 ಕ್ಷೇತ್ರಗಳಲ್ಲಿ ಮರು ಸರ್ವೇ ನಡೆಸಲು ಬಿಜೆಪಿ ಹೈಕಮಾಂಡ್ ನಿರ್ಧಾರ.

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿತ್ತು. ಆದರೆ, ಪಟ್ಟಿಯನ್ನು ಇನ್ನೇನು ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿ ಪಟ್ಟಿಯ ಪ್ರಕಟಣೆ ಮುಂದಕ್ಕೆ ಹೋಗಿದೆ. ಜೊತೆಗೆ, 224 ಕ್ಷೇತ್ರಗಳಿಗೂ ಸಂಪೂರ್ಣವಾಗಿ ಅಭ್ಯರ್ಥಿಗಳನ್ನು ಪ್ರಕಟಿಸದೇ, ಹಂತ ಹಂತವಾಗಿ ಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಬೊಮ್ಮಾಯಿಯವರ ಕ್ಷೇತ್ರವಾದ ಶಿಗ್ಗಾಂವಿ ಕ್ಷೇತ್ರದಲ್ಲೂ ಮರು ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಏ. 10ರ ಸಂಜೆ ಅಥವಾ ಏ. 11ರ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಅತ್ತ, ಏ. 10ರ ಬೆಳಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ಕೂಡ ಏ. 10ರ ಸಂಜೆ ಅಥವಾ ಏ. 11ರ ಬೆಳಗ್ಗೆ ಬಿಜೆಪಿಯ ಸಂಪೂರ್ಣ ಪಟ್ಟಿ ಬಿಡುಗಡೆಯಾಗುತ್ತೆ ಎಂದು ಹೇಳಿದ್ದರು. ಆದರೆ, ಅದರ  ಬೆನ್ನಲೇ, ಬಿಜೆಪಿಯು ತನ್ನ ಪಟ್ಟಿಯನ್ನು ಮತ್ತೆ ಪರಿಷ್ಕರಿಸಲು ನಿರ್ಧರಿಸಿದೆ ಎಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿತ್ತು. ಈ ಕುರಿತಂತೆ, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಭ್ಯರ್ಥಿಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳನ್ನು ನಡೆಸಲಾಗಿತ್ತು. ಆ ಚರ್ಚಾ ಸಭೆಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಹಲವಾರು ನಾಯಕರು ಹಾಜರಿದ್ದರು.

ಹಲವಾರು ಸುತ್ತಿನ ಚರ್ಚೆಗಳ ಬಳಿಕ, ಈಗಾಗಲೇ ಸಿದ್ಧಪಡಿಸಲಾಗಿರುವ 224 ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಾರು 30ರಿಂದ 40 ಕ್ಷೇತ್ರಗಳ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳು ಗೆಲ್ಲುವುದು ಕಷ್ಟಕರವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, 30ರಿಂದ 40 ಕ್ಷೇತ್ರಗಳ ಮರು ಸರ್ವೇ ಮಾಡಲು ನಿರ್ಧರಿಸಲಾಗಿದ್ದು, ಆ ಜವಾಬ್ದಾರಿಯನ್ನು ಮೂರು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಖಾಸಗಿ ಸಂಸ್ಥೆಗಳು, ತಮ್ಮ ಸಮೀಕ್ಷಾ ವರದಿಗಳನ್ನು ಏ. 10ರ ಸಂಜೆ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಗೆ ಸಲ್ಲಿಸಲಿವೆ. ಆ ಸರ್ವೇ ವರದಿಗಳ ಮೇಲೆ ಏ. 10 ರಾತ್ರಿಯಲ್ಲಿ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು, ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯರೊಡಗೂಡಿ ಚರ್ಚಿಸಲಿದ್ದಾರೆ. ಆನಂತರವಷ್ಟೇ, ಪಟ್ಟಿಯನ್ನು ಅಂತಿಮಗೊಳಿಸಿ, ಏ. 11ರ ಬೆಳಗ್ಗೆ ಬಿಡುಗಡೆ ಮಾಡುವ ಆಲೋಚನೆಯಿದೆ ಎಂದು ಮೂಲಗಳು ಹೇಳಿವೆ.

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹಾಲಿ ಶಾಸಕರ ಬದಲಿಗೆ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎಂದು ರಾಜ್ಯ ಬಿಜೆಪಿ ಹಾಗೂ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಿದೆ. ಈ ಬಾರಿ ಮಾಜಿ ಸಿಎಂ ಯಡಿಯೂರಪ್ಪ, ಚುನಾವಣೆಗೆ ಸ್ಪರ್ಧಿಸದೇ ಇರುವುದರಿಂದ, ಅಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಪಕ್ಕಾ ಆಗಿದೆ.

ಶಿವಮೊಗ್ಗದಲ್ಲಿ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪನವರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ. ಅಲ್ಲಿ ಆಯನೂರು ಮಂಜುನಾಥ್ ಅವರು ಪ್ರಬಲವಾದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅಲ್ಲಿ ಈಶ್ವರಪ್ಪನವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಆ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲವಿದೆ.

ಕೂಡ್ಲಿಗಿ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ಸಿಗೆ ಸೇರಿದ್ದಾರೆ. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಚುನಾವಣೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಇದಲ್ಲದೆ, ಮಾಜಿ ಸಚಿವ ಉಮೇಶ್ ಕತ್ತಿ , ಆನಂದ್ ಮಾಮನಿ ಅವರು ನಿಧನರಾಗಿದ್ದರಿಂದ ಆ ಎರಡು ಕ್ಷೇತ್ರಗಳು ಖಾಲಿಯಾಗಿವೆ. ಹಾಗಾಗಿ, ಈ ನಾಲ್ಕೂ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.

 

…………

 

ಕೃಪೆ:ವಿಕ

ಜಿಲ್ಲೆ

ರಾಜ್ಯ

error: Content is protected !!