Wednesday, July 24, 2024

ನಾಳೆ ಎಂ.ಕೆ. ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ; ಶಾಸಕ ದೊಡ್ಡಗೌಡರ

ವರದಿ: ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್  ಚನ್ನಮ್ಮನ ಕಿತ್ತೂರು: ನಾಳೆ ಎಂ. ಕೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ ಜನ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾಹಿತಿ ನೀಡಿದರು.

ಎಂ. ಕೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ ಅವರು ಜನ ಸಂಕಲ್ಪ ಯಾತ್ರೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು ರೈತ ನಾಯಕರಾದ ಬಿ ಎಸ್ ಯಡಿಯೂರಪ್ಪ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಭಾಜಪಾ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಪಕ್ಷದ ಹಿರಿಯ ಮುಖಂಡರು, ರಾಜ್ಯ ಮತ್ತು ಜಿಲ್ಲಾ ಭಾಜಪಾ ನಾಯಕರು ವಿವಿದ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಭಾಜಪಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಿತ್ತೂರು, ಬೈಲಹೊಂಗಲ, ಖಾನಾಪೂರ, ಧಾರವಾಡ ಗ್ರಾಮೀಣ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 50 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನಗಳು,  ಸರ್ವರಿಗೂ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಊಟವನ್ನು ಪ್ರಾರಂಭ ಮಾಡಲಾಗುವುದು ಕಾರಣ 1 ಗಂಟೆಯ ಒಳಗೆ ಎಲ್ಲ ಜನರು ಎಂ. ಕೆ. ಹುಬ್ಬಳ್ಳಿ ಹೊರ ಒಲಯದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಗೆ ಆಗಮಿಸಬೇಕೆಂದು ಮನವಿ ಮಾಡಿದರು.

ಕಿತ್ತೂರು ಮಂಡಳ ಭಾಜಪಾ ಅಧ್ಯಕ್ಷರು ಹಾಗೂ ಕೆಎಂಎಫ್ ನಿರ್ದೇಶಕರಾದ ಡಾ. ಬಸವರಾಜ ಪರವಣ್ಣವರ ಮಾತನಾಡಿ ಬಾಜಪಾ ಪಕ್ಷದ ಕಾರ್ಯಕರ್ತರನ್ನು ಎಲ್ಲ ಜಾತಿಯ ಜನರು ಒಪ್ಪಿ ಅಪ್ಪಿಕೊಳ್ಳುತ್ತಾರೆ. ಪಕ್ಷದ ಹಿರಿಯ ನಾಯಕರು ಕಿತ್ತೂರು ಮತಕ್ಷೇತ್ರದಿಂದ ಸುಮಾರು 50 ಸಾವಿರ ಜನರನ್ನು ಸೇರಿಸಲು ಆದೇಶ ಮಾಡಿದ್ದಾರೆ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಅಲ್ಲದೆ ಈ  ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಕಾರ್ಯಕರ್ತರು ಅಷ್ಟೇ ಅಲ್ಲದೇ ಪಕ್ಷಾತೀತವಾಗಿ ಸಾಕಷ್ಟು ಜನರು ಆಗಮಿಸಲಿದ್ದಾರೆ ಎಂದ ಅವರು ಬೈಲಹೊಂಗಲ, ಖಾನಾಪುರ,  ಸವದತ್ತಿ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ತಲಾ 15 ಸಾವಿರ ಪಕ್ಕದ ಧಾರವಾಡ ಗ್ರಾಮೀಣ ಮತಕ್ಷೇತ್ರದಿಂದ ಸುಮಾರು 5 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲೆಯ ಮಾಧ್ಯಮ ಸಂಚಾಲಕ ಹಾಗೂ ನ್ಯಾಯವಾದಿ ಎಫ್.ಎಸ್. ಸಿದ್ಧನಗೌಡರ ಮಾತನಾಡಿ ಕಿತ್ತೂರು ರಾಣಿ ಚನ್ನಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸೋಲಿನ ರುಚಿ ತೋರಿಸಿ ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತಕ್ಷೇತ್ರದಿಂದ ಜನ ಸಂಕಲ್ಪ ಯಾತ್ರೆ ಪ್ರಾರಂಭ ಮಾಡುತ್ತಿರುವುದು ಸಂತಸ ತಂದಿದ್ದು ಭಾಜಪಾ ಪಕ್ಷ 150 ಮತಕ್ಷೇತ್ರದಗಳಲ್ಲಿ ಗೆಲ್ಲಬೇಕು ಎಂಬ ಅಜೆಂಡಾ ಇಟ್ಟುಕೊಂಡು ಈ ಜನ ಸಂಕಲ್ಪ ಯಾತ್ರೆಯನ್ನು ಆರಂಭ ಮಾಡಲಾಗಿದೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲೂ ಎಲ್ಲಾ ತಯಾರಿ ಇದ್ದರೂ ಸಹಿತ ಮತ್ತೋಮ್ಮೆ ಅನುಮೋದನೆಯನ್ನ ಕಾರ್ಯಕರ್ತರು ಕೊಡುತ್ತಾರೆ ಅನ್ನುವ ಉದ್ದೇಶ ಒಂದು ಆದರೆ ಖಾನಪೂರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಕ್ಷೇತ್ರಗಳನ್ನು ಗೆಲ್ಲುವುದು ಎರಡನೇಯ ಉದ್ದೇಶವಾಗಿದೆ, ಭಾಜಪಾ ಕೇವಲ ಚುನಾವಣೆ ಬಂದಾಗ ಮಾತ್ರ ರಾಜಕೀಯ ತಂತ್ರಗಳನ್ನು ಮಾಡುವುದಿಲ್ಲ. ಚುನಾವಣೆ ಮುಗಿದು ಜಯ ಗಳಿಸಿದ ಮಾರನೇ ದಿನವೇ ಭಾಜಪಾದ ಕಾರ್ಯಗಳು ಪ್ರಾರಂಭವಾಗುತ್ತವೆ ಎಂದರು.

ಈ ವೇಳೆ ಸಂದೀಪ ದೇಶಪಾಂಡೆ, ಬಿ.ಎಫ್.  ಕೊಳದೂರ, ಯಲ್ಲಪ್ಪ ವಕ್ಕುಂದ, ಬಸವರಾಜ ಮಾತನವರ, ಶಿದ್ರಾಮಯ್ಯ ಹಿರೇಮಠ, ಕಿತ್ತೂರು ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು ಹಾಗೂ ಭಾಜಪಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!