Thursday, July 25, 2024

ಅಕ್ರಮ ಸಂಬಂಧಕ್ಕೆ ಕೊಲೆ ಮಾಡಿ, ಜೈಲಿನಲ್ಲಿ ತಾನೂ ನೇಣಿಗೆ ಶರಣಾದ.

ಧಾರವಾಡ: ಕಳೆದ ವಾರವಷ್ಟೇ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿಯೊಬ್ಬ ಇದೀಗ ತಾನೂ ಕೂಡ ಜೈಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿದ್ಯಾಕಾಶಿ ಧಾರವಾಡ  ನಗರದಲ್ಲಿ ಕಳೆದ ಅಕ್ಟೋಬರ್ 14 ರಂದು ಸವಿತಾ ಕಿತ್ತೂರ ಎಂಬ ಮಹಿಳೆಯ ಕೊಲೆ ನಡೆದಿತ್ತು. ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿ ಸವಿತಾಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆ ನಡೆದ ಎರಡು ದಿನದ ನಂತರ ಧಾರವಾಡ ಉಪನಗರ ಠಾಣೆಯ ಪೊಲೀಸರು ಆರೋಪಿ ಆನಂದ್ ದುದನಿಯನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದರು. ಇದೀಗ ಆನಂದ್ ಕೂಡ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಧಾರವಾಡ ನೆಹರೂನಗರದ ಸವಿತಾ ಜೊತೆ ಈ ಅಕ್ರಮ ಸಂಬಂಧ ಹೊಂದಿದ್ದ ಆನಂದ್, ಇದೇ ಕಾರಣಕ್ಕೆ ಸವಿತಾಳನ್ನು ಕೊಲೆ ಮಾಡಿದ್ದ. ಕೊಲೆಯ ನಂತರ ಪರಾರಿಯಾಗಿದ್ದ ಆನಂದ್ ಅನ್ನು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಬುಧವಾರ ತಡ ರಾತ್ರಿ ಜೈಲಿನ ಶೌಚಾಲಯದಲ್ಲಿ ಬೆಡ್‍ಶೀಟ್ ತುಂಡಿನಿಂದ ನೇಣು ಹಾಕಿಕೊಂಡಿದ್ದಾನೆ. ನಾಲ್ಕನೇ ನಂಬರ್ ಸೆಲ್‍ನಲ್ಲಿದ್ದ ಆರೋಪಿ ತಡರಾತ್ರಿ ನೇಣು ಹಾಕಿಕೊಂಡಾಗ ಜೈಲಿನ ಸಿಬ್ಬಂದಿ ಕೂಡ ಅಲ್ಲಿಂದ ದೂರ ಇದ್ದರು. ಈತ ಬಿದ್ದ ಶಬ್ದ ಕೇಳಿಸಿಕೊಂಡು ತಕ್ಷಣ ಆತನನ್ನು ಸಿಬ್ಬಂದಿ ಆಸ್ಪತ್ರೆಗೆ ರವಾನೆ ಮಾಡಿದರು. ಆದರೂ ಆತ ಬದುಕುಳಿಯಲಿಲ್ಲ.

ಸದ್ಯ ಕಾನೂನಿನ ಪ್ರಕಾರ ಧಾರವಾಡ ಉಪನಗರ ಠಾಣೆಗೆ ಜೈಲು ಅಧೀಕ್ಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಂಚನಾಮೆ ಮಾಡಿದ್ದಾರೆ. ಈತ ನರೇಂದ್ರ ಗ್ರಾಮದವನಾಗಿದ್ದ ಎಂದು ತಿಳಿಸಿದ ಜೈಲು ಅಧೀಕ್ಷಕರು, ಮೃತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

 

 

 

 

ಕೃಪೆ:ಪಬ್ಲಿಕ್‌ ಟಿವಿ

ಜಿಲ್ಲೆ

ರಾಜ್ಯ

error: Content is protected !!