ಬಸವರಾಜ ಚಿನಗುಡಿ ಕಿತ್ತೂರು
ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಧಾರವಾಡ ಮತ್ತು ಬೆಳಗಾವಿ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣಾ ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 7 ಕಿ.ಮೀ ದೂರದಲ್ಲಿ ತಿಗಡೊಳ್ಳಿ ಎಂಬ ಗ್ರಾಮ ಇದೆ ಈ ಗ್ರಾಮ ಸುಮಾರು ವರ್ಷಗಳ ಮಹೋನ್ನತ ಇತಿಹಾಸ ಹೊಂದಿದೆ. ಸ್ವಾತಂತ್ರ ಹೋರಾಟ, ಆರ್ಥಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ ವೈಭವವನ್ನು ಮೆರೆದ ಗ್ರಾಮ. ತಿಗಡೊಳ್ಳಿ ಸ್ವಾತಂತ್ರ ಹೋರಾಟದಲ್ಲಿ ತನ್ನದೆ ಆದ ಚಾಪು ಮೂಡಿಸಿ 1942 ರ ಚಲೇಜಾವ್ ಚಳುವಳಿಯ ಕಾಲದಲ್ಲಿ ಮಹತ್ವದ ಪಾತ್ರ ವಹಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಶಿವಪ್ಪ ಮಲಶೆಟ್ಟಿ ಎಂಬ ದೈತ್ಯ ಸ್ವಾತಂತ್ರ ಹೋರಾಟಗಾರನ ನೇತೃತ್ವದಲಿ ಸುಮಾರು 30 ಜನ ಹೋರಾಟಗಾರರ ದಂಡು ಬ್ರಿಟಿಷರ ನಿದ್ದೆ ಕೆಡಿಸಿತ್ತು. ಸ್ವಾತಂತ್ರಕ್ಕಾಗಿ ಯಾವ ಕೆಲಸಕ್ಕೂ ಹಿಂದೆ ಮುಂದೆ ನೋಡದ ಅವರಲ್ಲಿ ಅನೇಕರು ಹಲವು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದರು ಈ ಹಿನ್ನಲೆಯಲ್ಲಿ ಜೈಲುವಾಸ ಅನುಭವಿಸಿ ಕೆಲವರು ವೀರ ಮರಣ ಹೊಂದಿದರು.
![](https://suddisaddu.com/wp-content/uploads/2022/10/IMG_20221002_102211-227x300.jpg)
ಸ್ವಾತಂತ್ರಾ ನಂತರ 1948 ಜನವರಿ 30 ರಂದು ಶಾಂತಿಯ ಪ್ರತಿಪಾದಕರು ಸ್ವಾತಂತ್ರ ಹೋರಾಟದ ಮುಂದಾಳತ್ವ ವಹಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆಯಾಯಿತು. ದೇಶದಾದ್ಯಂತ ಅವರ ಚಿತಾಭಸ್ಮವನ್ನು ಹೊತ್ತು ಯಾತ್ರೆ ಪ್ರಾರಂಭವಾಗಿತ್ತು. ಅವರ ಚಿತಾಭಸ್ಮವನ್ನು ಬೆಳಗಾವಿ ಕಾಂಗ್ರೇಸ್ ಕಚೇರಿಗೆ ಕಳುಹಿಸಲಾಗಿತ್ತು ಅದನ್ನು ತಿಗಡೊಳ್ಳಿ ಗ್ರಾಮದ ಕೆಲ ಹೋರಾಟಗಾರರು ಅದರಲ್ಲಿರುವ ಸ್ವಲ್ಪ ಭಸ್ಮವನ್ನು ತಂದರು. ಅದನ್ನು ಮರುದಿನ ಬೆಳಿಗ್ಗೆ ಶಾಲಾ ಮಕ್ಕಳೊಂದಿಗೆ ಪ್ರಾಭಾತ ಪೇರಿ ಮಾಡುತ್ತಾ ಹೋಗಿ ಊರ ಹೊರಗಿನ ಎತ್ತರದ ಜಾಗದಲ್ಲಿ ಅರ್ಜುನಪ್ಪ ಕ್ಯಾತನವರ ಅವರ ಜಮೀನಿನಲ್ಲಿ ಆಲದ ಸಸಿ ನೆಟ್ಟು ಭಸ್ಮವನ್ನು ಗೊಬ್ಬರ ಮತ್ತು ಮಣ್ಣಿನೊಂದಿಗೆ ಬೆರಸಿ ನೆಡಲಾಯಿತು. ಇಂದು ಆ ಸಸಿ ಬೃಹದಾಕಾರದಲ್ಲಿ ಬೆಳೆದು ಹೆಮ್ಮರವಾಗಿ “ಗಾಂಧಿ ಗಿಡ”ಎಂದು ಪ್ರಸಿದ್ದಿ ಪಡೆದಿದೆ. ಸಣ್ಣಪುಟ್ಟ ಜಗಳಗಳೆಲ್ಲವೂ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಮರದ ಬಳಿಯೇ ಇತ್ಯರ್ಥವಾಗಿದ್ದು, ಮರದ ಉಪಸ್ಥಿತಿಯಲ್ಲಿ ನಿಜವಾದ ನ್ಯಾಯ ಸಿಗುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.
ಇAತಹ ದೇಶಾಭಿಮಾನಿ ಗಾಂಧಿವಾದಿಗಳ ನೆಲೆಯಾದ ತಿಗಡೊಳ್ಳಿಯಲ್ಲಿ ಗಾಂಧಿ ಮಡ್ಡಿಯಲ್ಲಿರುವ ಗಾಂಧಿ ಗಿಡಕ್ಕೆ ಸ್ವಾತಂತ್ರ ಹೋರಾಟಗಾರರು ಶಿಕ್ಷಕರು ಆದ ಕುಬೇರಪ್ಪ ಕಲಗೌಡರು ನೀರು ಗೊಬ್ಬರ ಹಾಕಿ ಬೆಳಸಿದರು. ಅದು ಈಗ ಹೆಮ್ಮರವಾಗಿ ಬೆಳೆದಿದೆ ಈಗ ಇಲ್ಲಿ ಪ್ರತಿವರ್ಷ ಅಕ್ಟೋಬರ 2 ರ ಗಾಂಧಿ ಜಯಂತಿಯಂದು ಶಾಲಾ ಮಕ್ಕಳು, ಶಿಕ್ಷಕರು, ತಿಗಡೊಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮದ ಅನೇಕ ಸೇವಾ ಸಂಸ್ಥೆಗಳು, ಪ್ರಭಾತ ಪೇರಿ ಮಾಡುತ್ತಾ ಸುಮಾರು 2 ಕಿಮಿ ನಡೆದುಕೊಂಡು ಹೋಗುತ್ತಾರೆ ನಂತರ ಅಲ್ಲಿ ಪ್ರಾರ್ಥನೆ ಪೂಜೆ ಮಾಡಿ ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸುತ್ತಾರೆ. ಇದು ಇಂದು ಪವಿತ್ರ ತಾಣವಾಗಿ ಬದಲಾಗಿದೆ.
ಜಿಲ್ಲಾಡಳಿತ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಗಾಂಧಿ ಗಿಡದ ಹಿಂದಿನ ಗಾಂಧಿಜಿಯ ನೆನಪು, ಸ್ವಾತಂತ್ರ ಹೋರಾಟ, ದೇಶಪ್ರೇಮವನ್ನು ನಾಡಿಗೆ ಬಿತ್ತರಿಸುವ ಹೊಣೆಗಾರಿಕೆ ಹೊರಬೇಕಿದೆ.