Thursday, July 25, 2024

ಪ್ರೀತಿಸಿದ ಹುಡುಗಿಯ ಜೊತೆ ಗಂಡನ ಮದುವೆ ಮಾಡಿಸಿದ ಹೆಂಡತಿ! ಟಿಕ್‌ಟಾಕ್‌ ಲವ್

ತಿರುಪತಿ: ಕಟ್ಟಿಕೊಂಡ ಗಂಡನನ್ನು ಹಂಚಿಕೊಳ್ಳಲು ಯಾವ ಹೆಂಡತಿಯೂ ಸಿದ್ಧಳಿರುವುದಿಲ್ಲ. ತನ್ನ ಗಂಡ ತನ್ನನ್ನು ಮಾತ್ರ ಪ್ರೀತಿಸಬೇಕು. ತನ್ನ ಕಷ್ಟಸುಖಕ್ಕೆ ಸದಾ ಜೊತೆಯಾಗಿರಬೇಕು ಎಂದು ಹೆಂಡತಿ ಬಯಸುತ್ತಾಳೆ. ಕೆಲವರಂತು ಎಷ್ಟು ಪೊಸೆಸಿವ್ ಎಂದರೆ ಗಂಡ ಬೇರೆ ಮಹಿಳೆಯರ ಜೊತೆ ಸಹಜವಾಗಿ ಮಾತನಾಡಿದರೂ ಸಿಡಿಮಿಡಿಗೊಳ್ಳುತ್ತಾರೆ.ಜೀವನ ಪೂರ್ತಿ ಚಡಪಡಿಸುತ್ತಾರೆ. ಆದರೆ ಇಲ್ಲೊಂದು ಕಡೆ ಹಂಡತಿ ಹೃದಯ ಶ್ರೀಮಂತಿಕೆ ತೋರಿದ್ದಾಳೆ. ಮದುವೆಗೆ ಮೊದಲು ತನ್ನ ಗಂಡ ಪ್ರೀತಿಸಿದ್ದ ಹುಡುಗಿಯ ಜೊತೆ ಗಂಡನ ಮದುವೆ ಮಾಡಿದ್ದಾಳೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಈಗ ಈ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ. 

ಈಗ ವಿಚಾರಕ್ಕೆ ಬರುವುದಾದರೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ದಕ್ಕಿಲ್ ಮಂಡಲದ ಅಂಬೇಡ್ಕರ್ ನಗರದ  ಯುವಕನೊಬ್ಬ ಡಿಗ್ರಿ ಓದಿದ್ದು, ಈಗಿನ ಎಲ್ಲಾ ಯುವ ಸಮೂಹ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅದು ಇದು ವಿಡಿಯೋ ಮಾಡಿಕೊಂಡು ಹಾಯಾಗಿದ್ದ. ಅದು ಕೋವಿಡ್ ಸಾಂಕ್ರಾಮಿಕ ದೇಶವನ್ನೇ ಆವರಿಸಿದ ಸಮಯ, ಎಲ್ಲರೂ ಲಾಕ್‌ಡೌನ್‌ಗೆ ಸಿಲುಕಿ ಮನೆಯಲ್ಲೇ ಕಾಲ ಹರಣ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡುವುದನ್ನೇ ಕೆಲಸವಾಗಿಸಿಕೊಂಡ ಈತನಿಗೆ ಪ್ರಸ್ತುತ ಬ್ಯಾನ್ ಆಗಿರುವ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನಲ್ಲಿ ಒಂದು ಹುಡುಗಿಯ ಮೇಲೆ ಪ್ರೀತಿಯಾಗಿತ್ತು. ಆಕೆ ಆಂಧ್ರದ ವಿಶಾಖಪಟ್ಟಣಂ ನಿವಾಸಿ, ಪ್ರೀತಿ ಶುರುವಾದ ಮೇಲೆ ಕೇಳಬೇಕೆ. ಪರಿಚಯವಾಗಿ ಎರಡು ವರ್ಷಗಳ ಕಾಲ ಅವರು ಡೇಟಿಂಗ್ ಮಾಡಿದ್ದಾರೆ. ಆದರೆ ಮುಂದೆ ಅದೇನಾಯಿತು ಏನೋ ಇಬ್ಬರು ಪರಸ್ಪರ ದೂರವಾಗಿದ್ದಾರೆ.

ಇದಾದ ಬಳಿಕ ಆ ಹುಡುಗನಿಗೆ ಅದೇ ಟಿಕ್‌ಟಾಕ್‌ನಲ್ಲಿ ಮತ್ತೊಂದು ಹುಡುಗಿಯೊಂದಿಗೆ ಪ್ರೀತಿಯಾಗಿದ್ದು, ಮದುವೆಯೂ ಆಗಿದೆ. ಆಕೆ ಆಂಧ್ರಪ್ರದೇಶದ ಕಡಪಾ ಮೂಲದವಳು, ಆದರೆ ವರ್ಷಗಳ ನಂತರ ಯುವಕನ ಮೊದಲ ಪ್ರೇಮಿಯಾಗಿದ್ದ ಹುಡುಗಿ ಈತನನ್ನು ಹುಡುಕಿಕೊಂಡು ಬಂದಿದ್ದಾಳೆ. ಈ ವೇಳೆ ಆತನಿಗೆ ಮದುವೆಯಾಗಿರುವುದು ಆಕೆಗೆ ತಿಳಿದಿದೆ. ಆದರೆ ಆತನ ಮದುವೆಯ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಆಕೆ, ಆತನ ಹೆಂಡತಿಯ ಜೊತೆ ಮಾತನಾಡಿದ್ದು, ತಾನು ಆತನನ್ನು ಈಗಲೂ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ. ಅಲ್ಲದೇ ನಾವು ಮೂವರು ಜೊತೆಯಾಗಿಯೇ ಬದುಕುವ ಬಗ್ಗೆ ಆಕೆಯ ಮುಂದೆಯೇ ತನ್ನ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದಾಳೆ. ಈ ವೇಳೆ ಮೊದಲಿಗೆ ಒಪ್ಪದ ಯುವಕನ ಹೆಂಡತಿ ನಂತರ ಆಕೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆ. ನಂತರ ಆಕೆಯೇ ಮುಂದೆ ನಿಂತು ಗಂಡನಿಗೂ ಆತನ ಮೊದಲ ಪ್ರೇಮಿಗೂ ಮದುವೆ ಮಾಡಿಸಿದ್ದಾಳೆ. 

ಯುವಕ ತಿರುಪತಿಯವನಾದರೆ ಮೊದಲ ಪ್ರೇಮಿ ವಿಶಾಖಪಟ್ಟಣದವಳಾಗಿದ್ದು, ಪತ್ನಿ ಕಡಪಾದವಳಾಗಿದ್ದಾಳೆ. ಈ ವಿಚಾರ ಈಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ವಿಚಾರ ಕೇಳಿದ ಪುರುಷ ಮಹಾಶಯರು ಇಂತ ಹೆಂಡತಿ ನಮಗೂ ಸಿಕ್ಕಿದ್ರೆ ಎಷ್ಟು ಚೆನ್ನಾಗಿರೋದು ಅಂತ ಒಳಗೊಳಗೆ ಹಲುಬುವುದಂತೂ ಪಕ್ಕಾ. 

 

 

 

 

 

 

 

 

 

 

 

 

 

(ಕೃಪೆ:ಟಿವಿಸುವರ್ಣಾ)
 

ಜಿಲ್ಲೆ

ರಾಜ್ಯ

error: Content is protected !!