Saturday, July 27, 2024

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜನಕ: ಬೆಳಗಾವಿಯ ಎಂ ಪಿ ಪಾಟೀಲರು.

ಕೃಷಿ ಸಂಶೋಧನೆಯಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಬಾರಿ ನಾಲ್ಕು ದಿನಗಳ ಕೃಷಿ ಮೇಳ ಕಳೆದ ಎರಡು ದಿನಗಳಿದ ಆರಂಭವಾಗಿದೆ. ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ ಎಂಬ ಮುಖ್ಯ ಉದ್ದೇಶದೊಂದಿಗೆ ಕೃಷಿ ಮೇಳ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ವಸ್ತು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲದ ಜನಕರಾದ ಎಂ.ಪಿ.ಪಾಟೀಲರ ಸ್ಮರಣಾರ್ಥ ಈ ಲೇಖನ.  

ಕಿತ್ತು ತಿನ್ನುವ ಬಡ ಕೃಷಿ ಕುಟುಂಬದಲ್ಲಿ ತಂದೆ ಪುನಃಗೌಡ ತಾಯಿ ಗಂಗಾಬಾಯಿ ಉದರದಲ್ಲಿ 1902 ಫೆಬ್ರುವರಿ 4 ರಂದು ಮಲ್ಲನಗೌಡ ಪಾಟೀಲರು ಜನಸಿದರು. ಬಡ ಕುಟುಂಬದಲ್ಲಿ ಜನಿಸಿದ ಇವರು ಟೆನನ್ಸಿ ಆ್ಯಕ್ಟನ ನಿರ್ಮಾಪಕರಾಗಿ(ಇಂದಿರಾಗಾಂಧಿ ಅವರಿಂದ ಅನುಷ್ಠಾನಗೊಂಡ) ಧಾರವಾಡ ಕೃಷಿ ವಿಶ್ವವಿದ್ಯಾಲಯ ಜನಕರಾಗಿ, ಬೆಳಗಾವಿಯಲ್ಲಿ ಸಹಕಾರಿ ರಂಗಕಟ್ಟಿ ಬೆಳಸಿದ ಧಿಮಂತ ನಾಯಕರಾಗಿ ,ಸಾರ್ವಜನಿಕ ವನಮೋತ್ಸವದ ರೂವಾರಿಗಳಾಗಿ ಹೊರಹೊಮ್ಮಿದ ಎಂ ಪಿ ಪಾಟೀಲರು.  

ಇವರ ಕುಟುಂಬಕ್ಕೆ ಒಂದು ಎಕರೆ ಜಮೀನು ಮಾತ್ರ ಇತ್ತು .ತಂದೆ ಪುನಃಗೌಡರಿಗೆ ಇದ್ದ ಜಮೀನಿನಲ್ಲಿ ಮನೆತನ ನಡಿಸುವುದೆ ಕಠಿಣವಾಗಿತ್ತು. ಈ ಸಮಯದಲ್ಲಿ ಮಗನಿಗೆ ವಿದ್ಯಾಭ್ಯಾಸ ಕೂಡಿಸುವ ವಿಚಾರ ಮಾಡಲಿಲ್ಲ.

ಸಂಕೇಶ್ವರದಲ್ಲಿ ಕನ್ನಡ ಶಾಲೆ ಇರದೇ ಇದ್ದಾಗ ಮನೆಯ ಹತ್ತಿರವಿದ್ದ ಮರಾಠಿ ಶಾಲೆಗೆ ಸೇರಿಸಿದರು ಕಲಿಕೆಯಲ್ಲಿ ಶಾಲೆಯಲ್ಲಿ ನಂಬರ್ ಒನ್ ವಿದ್ಯಾರ್ಥಿಯಾಗಿದ್ದ ಮಲ್ಲನಗೌಡರು.ತಂದೆ ಪುನಃಗೌಡರು ಒತ್ತಾಯಪೂರ್ವಕವಾಗಿ 14ನೇಯ ವಯಸ್ಸಿಗೆ ವಿವಾಹ ನೆರವೇರಿಸಿದರು.ಮದುವೆಗಾಗಿ ಇದ್ದ ಒಂದು ಎಕರೆ ಜಮೀನನ್ನು ಒತ್ತಿ ಹಾಕಿದರು.ಸಾಲದಾದಾಗ ನೂರು ರೂಪಾಯಿ ಸಾಲ ಮಾಡಿ ಮಲ್ಲನಗೌಡರ ಮದುವೆ ಮಾಡಿದರು.ರಾಜಾರಾಮ ಕಾಲೇಜಿನಲ್ಲಿ ಅಠವಾಲೆ ಎಂಬ ಗುರುಗಳ ಪ್ರೋತ್ಸಾಹದಿಂದ ಉನ್ನತ ಶಿಕ್ಷಣವನ್ನು ವಿವಾಹದ ನಂತರ ಪೂರೈಸಿದರು .

          ಎಂ ಪಿ ಪಾಟೀಲ

1918 ರಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಎಂ ಪಿ ಪಾಟೀಲರ ತಂದೆತಾಯಿಗಳಿಬ್ಬರೂ ಪ್ಲೇಗ್ ರೋಗ ದಿಂದ ನಿಧನರಾದರು. ಮಲ್ಲನಗೌಡರ ತಾಯಿ ನಿಧನದ ಪೂರ್ವದಲ್ಲಿ ಪಕ್ಕದ ಮನೆಯ ಮಹಿಳೆಯಿಂದ 20 ರೂಪಾಯಿ ಸಾಲ ಮಾಡಿದ್ದರು. ನಿಧನಾನಂತರ ಆ ಮಹಿಳೆ ರಂಪಮಾಡಿ ಮಲ್ಲನಗೌಡರ ಮನೆಯಿಂದ ಪಾತ್ರೆಪಗಡೆಗಳನ್ನು ಎತ್ತೊಯ್ದಳು.ಇದರಿಂದ ಮಲ್ಲನಗೌಡರ ಮನಸ್ಸಿಗೆ ಬಹಳಷ್ಟು ನೋವಾಯಿತು.

ಹೆಂಡತಿಯನ್ನು ತವರುಮನೆಗೆ ಕಳುಹಿಸಿ ಶಿಕ್ಷಣವನ್ನು ಮತ್ತೆ ಮುಂದುವರಿಸಿದರು 1922ರಲ್ಲಿ ಬಿಎ ಪರೀಕ್ಷೆ ಮುಗಿಸಿದರು .1924 ರಲ್ಲಿ LLB ಪದವಿಯನ್ನು ಲಿಂಗರಾಜ್ ಟ್ರಸ್ಟಿನ ಅನುದಾನದ ಸಹಾಯದಿಂದ ಮುಗಿಸಿದರು. ಹುಕ್ಕೇರಿಯಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು .ರೈತರಿಗೆ ಸುಲಭವಾಗಿ ಸಾಲ ದೊರೆಯಲು ಹತ್ತಾರು ಸಹಕಾರಿ ಸಂಘಗಳನ್ನು ಕಟ್ಟಿ ಬೆಳೆಸಿದರು ಸಹಕಾರದಿಂದ ಮಾತ್ರ ರೈತರ ಏಳಿಗೆ ಸಾಧ್ಯ ಎಂದು ನಂಬಿದ್ದರು.

ಸರಕಾರ ಇವರ ಸೇವೆ ಗಮನಿಸಿ district orgnaiser ಎಂದು ನೇಮಕ ಮಾಡಿದರು. ಹರಿಜನರಿಗೆ ಸಹಾಯಾರ್ಥವಾಗಿ ಹರಿಜನ ಸಹಕಾರಿ ಪತ್ತಿನ ಸಂಘ ಸ್ಥಾಪಿಸಿದ ದೇಶದ ಏರಡನೇಯ ಮತ್ತು ರಾಜ್ಯದ ಮೊದಲ ವ್ಯಕ್ತಿ .ಮಲ್ಲನಗೌಡರ ಸಮಾಜ ಸೇವೆ ಪರಿಗಣಿಸಿ ಜನ ಇವರನ್ನು ತಾಲೂಕ ಬೋರ್ಡ್ ಮತ್ತು ಜಿಲ್ಲಾ ಬೊರ್ಡಗೆ ಅವಿರೋಧವಾಗಿ ಆಯ್ಕೆ ಮಾಡಿದರು .

ನಂತರ ನ್ಯಾಯವಾದಿ ವೃತ್ತಿ ಬಿಟ್ಟು ಸ್ವಾತಂತ್ರ ಹೋರಾಟಕ್ಕೆ ಧುಮುಕಿದರು ಕುಟುಂಬ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಬಂದಾಗ ಪತ್ನಿ ಲಕ್ಷ್ಮೀಬಾಯಿ ನಿಭಾಯಿಸುವುದಾಗಿ ಭರವಸೆ ನೀಡಿ ಪತಿಯಾದ ಮಲ್ಲನಗೌಡರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕಳುಹಿಸಿದ ಮಹಾನ್ ಮಹಿಳೆ.

1930ರಲ್ಲಿ ಸತ್ಯಾಗ್ರಹಿಗಳಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಸರಕಾರ ಇವರನ್ನು ದಸ್ತಗಿರಿ ಮಾಡಿ ಕಾರಾಗೃಹಕ್ಕೆ ಅಟ್ಟಿತು.ಆಗ ಗಾಂಧೀಜಿ ಒಪ್ಪಂದದಂತೆ ಎಲ್ಲ ಸತ್ಯಾಗ್ರಹಿಗಳ ಜೊತೆಗೆ ಮಲ್ಲನಗೌಡ ಪಾಟೀಲರ ಬಿಡುಗಡೆಯಾಯಿತು. ಆ ವೇಳೆ ದೇಶದ ಪ್ರತಿಯೊಬ್ಬ ಪ್ರಜೆ ಕಡ್ಡಾಯವಾಗಿ ಮಿಲಿಟರಿ ಶಿಕ್ಷಣ ಪಡೆಯಬೇಕು ಎನ್ನುವುದು ಮಲ್ಲನಗೌಡ ಪಾಟೀಲ್ ಅವರ ಅಭಿಪ್ರಾಯವಾಗಿತ್ತು.

1930ರಲ್ಲಿ ಕರ್ನಾಟಕ ಪ್ರಾಂತ್ಯ ರಾಜಕೀಯ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿ ಮಲ್ಲನಗೌಡರ ಆಯ್ಕೆಯಾದರು. ಸ್ವಾತಂತ್ರ್ಯ ಹೊರಾಟಕ್ಕೆ ಧುಮಿಕದ ಕಾರಣ ಮತ್ತೆ 1932ರಲ್ಲಿ ಬ್ರಿಟಿಷ್ ಸರಕಾರ ಬಂಧಿಸಿ ಎರಡು ವರ್ಷ ಹತ್ತು ತಿಂಗಳು ಕಾಲ ಜೈಲು ಶಿಕ್ಷೇ ನೀಡಿತು.ಸರಕಾರ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು. ಮಲ್ಲನಗೌಡ ಅವರನ್ನು ಸರಕಾರ ಕಾರಾಗೃಹ ಶಿಕ್ಷೆಗೆ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿತು.

ಇಲ್ಲಿ ಗಾಂಧೀಜಿಯವರ ಕಾರ್ಯದರ್ಶಿ ಮಹಾದೇವ ದೇಸಾಯಿ ಅವರ ನಿಕಟ ಸಂಪರ್ಕವಾಯಿತು. ಜೈಲಿನಲ್ಲಿ ಇದ್ದಾಗ ಮಲ್ಲನಗೌಡ ಪಾಟೀಲರು ವಚನಗಳ ಅದ್ಯಯನ ಮಾಡಿ ಜೈಲಿನಿಂದ ಗಾಂಧೀಜಿಯವರಿಗೆ ಪತ್ರ ಬರೆದು ಕನ್ನಡ ವಚನ ಸಾಹಿತ್ಯದ ಬಗೆಗೆ ತಿಳಿಸಿದರು.

ಜೈಲಿನಿಂದ ಬಿಡುಗಡೆಯಾದ ನಂತರ 1934 ರಲ್ಲಿ ಹುಕ್ಕೇರಿಯಿಂದ ಬೆಳಗಾವಿಗೆ ಕುಟುಂಬ ಸಮೇತ ಸ್ಥಳಾಂತರ ಗೊಂಡರು .1936 ರಲ್ಲಿ ಪ್ರಾಂತ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನರ ಒತ್ತಾಸೆ ಮೇರೆಗೆ ಸ್ಪರ್ಧಿಸಿ ಎಂ.ಎಸ್. ಅಂಗಡಿಯವರನ್ನು ಪರಾಭವಗೊಳಿಸಿ ಜಯಶಾಲಿಯಾದರು.

ಮುಂಬೈ ರಾಜ್ಯದಲ್ಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಜಿ.ಕೆರ ಮುಖ್ಯಮಂತ್ರಿ ಯಾಗಿ ಆದಂತಹ ಸಂದರ್ಭದಲ್ಲಿ ಅದೇ ಸರಕಾರದ ಕಂದಾಯ ಮಂತ್ರಿಯಾದ ಮುರಾರ್ಜಿ ದೇಸಾಯಿಯವರ ಪಾರ್ಲಿಮೆಂಟ್ ಸೆಕ್ರೇಟರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಟೆನನ್ಸಿ ಆಕ್ಟ್ ಎಂಬ ಕಾಯ್ದೆಗೆ ರೂಪರೇಷ ನೀಡಿ ರಚಿಸಿದರು.

1939 ರಲ್ಲಿ ಎರಡನೇ ಮಹಾಯುದ್ಧದಲ್ಲಿ ಭಾರತೀಯರ ಒಪ್ಪಿಗೆಯಿಲ್ಲದೆ ಬ್ರಿಟಿಷ್ ವೈಸ್ರಾಯ್ ಜರ್ಮನಿಯ ವಿರುದ್ಧವಾಗಿ ಭಾರತೀಯ ಸೈನ್ಯ ಭಾಗಿಯಾಗುವಂತೆ ಮಾಡಿದ್ದರು.ಇದನ್ನು ಒಪ್ಪಿಕೊಳ್ಳದೆ ಮೊದಲು ಮಲ್ಲನಗೌಡರು ಅಂದಿನ ಮಂತ್ರಿಮಂಡಲದಲ್ಲಿ ರಾಜೀನಾಮೆ ನೀಡಿದ್ದರು.ನಂತರ ಅವರು ಬೆಳಗಾವಿಗೆ ಬಂದು ನೆಲಸಿದರು.1940 ಬ್ರಿಟಿಷರ ವಿರುದ್ಧದ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಕ್ಕೆ ಮಲ್ಲನಗೌಡರಿಗೆ ಮತ್ತೆ ಒಂದು ವರ್ಷ ಜೈಲು ಶಿಕ್ಷೆ  ಅನುಭವಿಸಿ ಬಿಡುಗಡೆಯಾದರು.1942 ರಲ್ಲಿ ಚಲೇ ಜಾವ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಡೆಟಿನೊ ಕೈದಿಯಂದು ನಾಸಿಕದ ಕಾರಾಗೃಹದಲ್ಲಿ ಇಟ್ಟರು.1945ರಲ್ಲಿ ಜೈಲಿನಿಂದ ಬಿಡುಗಡೆ 1945 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಇಡೀ ಮುಂಬೈ ಕರ್ನಾಟಕದಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಹಾಕಿ 1946ರ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದರು.ತಾವೂ ಬೆಳಗಾವಿ ಜಿಲ್ಲೆಯಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದರು,ಇಷ್ಟೆಲ್ಲಾ ಉನ್ನತ ಹುದ್ದೆಯಲ್ಲಿದ್ದರೂ ಬಡತನ ಕಿತ್ತು ತಿನ್ನುತ್ತಿತ್ತು. ಆಗ ಮಲ್ಲನಗೌಡರ ಮನೆಯ ಖರ್ಚನ್ನು ಅವರ ಬೀಗರು ನೋಡಿಕೊಳ್ಳುತ್ತಿದ್ದರು.  ಆ ವೇಳೆ ಬಿ ಜಿ ಕೇರ ಅವರು ಮುಂಬೈ ರಾಜ್ಯದ ಮುಖ್ಯಮಂತ್ರಿಯಾದರು. ಮಲ್ಲನಗೌಡರು ಕೃಷಿ ಮತ್ತು ಅರಣ್ಯ ಖಾತೆಯ ಮಂತ್ರಿಗಳಾಗಿ ಆಯ್ಕೆಯಾದರು .

1947 ರಲ್ಲಿ ಧಾರವಾಡ ಮತ್ತು ಗುಜರಾತ ರಾಜ್ಯದಲ್ಲಿ ಕೃಷಿ ವಿದ್ಯಾಲಯ ಸ್ಥಾಪಿಸಿದರು ,1954 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಟ್ಟಡ ಪೂರ್ಣಗೊಂಡಾಗ ಉದ್ಘಾಟನೆಗೆ ಮೈಸೂರು ಮಹಾರಾಜರನ್ನು ಅಹ್ವಾನಿಸಿದರು.ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಇವರ ಕೊಡುಗೆಯನ್ನು ಗಮನಿಸಿ ಆವರಣದಲ್ಲಿ ಮಲ್ಲನಗೌಡ ಪಾಟೀಲರ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ.

1950 ರಲ್ಲಿ ಸಂವಿಧಾನ ಜಾರಿ ನಂತರ ಸಾರ್ವತ್ರಿಕ ಚುನಾವಣೆಗಳು ನಡೆದವು. ಮಲ್ಲನಗೌಡರು ಬೆಳಗಾವಿಯಿಂದ ಮುಂಬೈ ವಿಧಾನಸಭೆಗೆ ಆಯ್ಕೆಯಾಗಿ ಸ್ಥಾನಿಕ ಸಂಸ್ಥೆಗಳ ಮಂತ್ರಿಯೆಂದು ನೇಮಕಗೊಂಡರು .ಸಂಕೇಶ್ವರ ಮತ್ತು ಎಂ.ಕೆ.ಹುಬ್ಬಳ್ಳಿಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಇವರೇ ಪ್ರೇರಕ ಶಕ್ತಿಯಾಗಿದ್ದರು.

1956 ರಲ್ಲಿ ಕರ್ನಾಟಕ ಏಕೀಕರಣಗೊಂಡ ನಂತರ ಎಸ್ ನಿಜಲಿಂಗಪ್ಪನವರ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಂದಾಯ ಮಂತ್ರಿಗಳಾಗಿ ನೇಮಕವಾದರು. ಸ್ವಾತಂತ್ರ ಹೋರಾಟಗಾರರಿಗೆ ಮಾಸಾಶನ ನೀಡುವ ಕುರಿತು ಸರಿಯಾದ ಯೋಜನೆ ಸಲ್ಲಿಸಲು ಮಲ್ಲನಗೌಡರ ನೇತೃತ್ವದಲ್ಲಿ ಎಸ್ ನಿಜಲಿಂಗಪ್ಪ ನವರು ಸಮಿತಿ ರಚಿಸಿದರು.ಮಲ್ಲನಗೌಡರು ರಾಜ್ಯವ್ಯಾಪಿ ಸಂಚರಿಸಿ ಅದರ ಬಗ್ಗೆ ಮಾಹಿತಿ ಕ್ರೊಡಿಕರಿಸಿ ಸರಕಾರಕ್ಕೆ ವರದಿ ಸಲ್ಲಿಸಿದರು.ಇವರ ವರದಿ ಆಧರಿಸಿ ಸರಕಾರ ದೇಶಭಕ್ತ ಹೋರಾಟಗಾರರಿಗೆ ಮಾಶಾಸನ ಯೋಜನೆ ಜಾರಿಗೆ ತಂದಿತು.

ಮಲ್ಲನಗೌಡ ಪಾಟೀಲ್ ಇವರ ಶ್ರಮದ ಫಲವಾಗಿ ಸಂಕೇಶ್ವರ ಅರ್ಬನ್ ಬ್ಯಾಂಕು, ಹುಕ್ಕೇರಿ ಅರ್ಬನ್ ಬ್ಯಾಂಕ್ ಸಂಕೇಶ್ವರ್ ಸೆಲ್ ಸೊಸೈಟಿ ಮೊದಲಾದ ಸಹಕಾರಿ ಪತ್ತಿನ ಸಂಘಗಳು ಸಾಕಷ್ಟು ಬೆಳದು ಜನಸಾಮಾನ್ಯರ ಬದುಕಿನ ಭವಣೆಯನ್ನು ದೊರ ಮಾಡಿ ಆರ್ಥಿಕ ಶಕ್ತಿಯನ್ನು ತುಂಬುವುದರ ಮೂಲಕ ನಾಡಿನ ಶ್ರಿಮಂತಿಕೆಯನ್ನು ಹೆಚ್ಚು ಮಾಡಿವೆ.ಇದೇಲ್ಲವೊ ಮಲ್ಲನಗೌಡ ಪಾಟೀಲರ ಕೊಡಗೆ ಏಂಬುವುದು ನಿರ್ವಿವಾದಿತ. ಆದರೆ ಇಂದು ಬೆಳಗಾವಿ ಸಹಕಾರ ಸಂಘಗಳು ರಾಜ್ಯ ರಾಜಕರಣ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳದಿವೆ.

1967-68ರಲ್ಲಿ ಬಸವೇಶ್ವರ ಚರಿತ್ರೆಯ ಮೇಲೆ ಹೊಸ ಬೆಳಕು ಎಂಬ ಗ್ರಂಥವನ್ನು ಬರೆದ ಪ್ರಕಟಿಸಿದರು.ಅರ್.ಜೀ. ಬಂಡಾರ್ಕರ್ ಮತ್ತು ಸುರೇಂದ್ರನಾಥ್ ದಾಸ ಗುಪ್ತಾ ಅಂತಹ ಖ್ಯಾತ ಸಂಶೂಧಕರು ಬಸವಣ್ಣನವರ ಬಗೆಗೆ ತಪ್ಪು ನಿರ್ಣಯಗಳಿಗೆ ಬಂದಿರುವುದನ್ನು ಮಲ್ಲನಗೌಡರು ಗಮನಿಸಿ ಖ್ಯಾತ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದರು.ಮರಾಠಿಯಲ್ಲಿ ಅಕ್ಕಮಹಾದೇವಿ ಚರಿತ್ರೆಯನ್ನು ಬರೆದು ಪ್ರಕಟಿಸಿದರು ಒಟ್ಟು ಮಲ್ಲನಗೌಡ ಪಾಟೀಲ್ ಅವರು ಸುಮಾರು 29 ಕ್ಕೊ ಅಧಿಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಕೀರ್ತಿ ಇವರದಾಗಿದೆ .

ರಾಜಕೀಯ ಕ್ಷೇತ್ರದಲ್ಲಿ ಇದ್ದು,ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸಾಧನೆ ಅಮೊಘವಾದ್ದು. ಮಲ್ಲನಗೌಡರ ಹಿರಿಯ ಗಂಡುಮಕ್ಕಳು ಇವರ ಕಣ್ಣು ಮುಂದೆ ಅಕಾಲಿಕವಾಗಿ ನಿಧನರಾದರು.ಮಲ್ಲನಗೌಡರು 1977 ಅಕ್ಟೋಬರ್‌ 10 ಅನಾರೋಗ್ಯದಿಂದ ನಿಧನರಾದರು.

 

 

ಲೇಖನ:ಮಹೇಶ.ನೀಲಕಂಠ. ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
M-9740313820

 

ಜಿಲ್ಲೆ

ರಾಜ್ಯ

error: Content is protected !!