Saturday, July 27, 2024

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ.

ಬೈಲಹೊಂಗಲ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ದೊಡವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಡರಕಟ್ಟಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ 2022-23 ನೇ ಸಾಲಿನ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಸೋಮವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಆರ್‍ಪಿ ರವೀಂದ್ರ ತುರುಮರಿ, ಕೋವಿಡ್ ಕಾರಣದಿಂದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಕೋವಿಡ್ ಆತಂಕ ದೂರಾಗಿ ಶೈಕ್ಷಣಿಕ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಈ ವರ್ಷದಿಂದ ಪ್ರತಿಭಾ ಕಾರಂಜಿ ಮತ್ತೆ ಪ್ರಾರಂಭವಾಗಿದ್ದು ಶಿಕ್ಷಕರು ಮತ್ತು ಮಕ್ಕಳಲ್ಲಿ ಉತ್ಸಾಹ ಇಮ್ಮಡಿಸಿದೆ. ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಎಲ್ಲ ಮಕ್ಕಳು ಭಾಗವಹಿಸಬೇಕು ಎಂದು ಅವರು ಹೇಳಿದರು. ತಾಪಂ ಮಾಜಿ ಸದಸ್ಯ ಸಂಗಯ್ಯ ದಾಭಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಬುಡರಕಟ್ಟಿ ವಲಯದ ಶಾಲೆಗಳ 1 ರಿಂದ 4 ಹಾಗೂ 5 ರಿಂದ 7 ನೇ ತರಗತಿ ಮಕ್ಕಳಿಗೆ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಅಜ್ಜಪ್ಪ ಕುಡವಕ್ಕಲಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮೈರೂನಬಿ ಸನದಿ, ಎಸ್ಡಿಎಂಸಿ ಸದಸ್ಯರಾದ ಬಸವರಾಜ ಉಗ್ರಾಣ, ಗದಿಗೆಪ್ಪ ಅರಳಿಮರದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ನಿರ್ದೇಶಕ ರಮೇಶ ದೊಡಗೌಡರ, ಬಿ.ಸಿ ಅಂಬರಶೆಟ್ಟಿ, ಬಿಆರ್‍ಪಿ ಉಮೇಶ ಕೊಲಾರಕೊಪ್ಪ, ಅಜ್ಜಪ್ಪ ಅಂಗಡಿ, ಜಿ.ಆಯ್.ಪಾಟೀಲ, ರಮೇಶ ಇಂಗಳಗಿ ಹಾಗೂ ವಲಯ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಸಿಆರ್‍ಪಿ ರಾಜುಹಕ್ಕಿ ನಿರೂಪಿಸಿದರು. ಮುಖ್ಯಶಿಕ್ಷಕ ಬಿ.ಆರ್.ಹಂಚಿನಮನಿ ಸ್ವಾಗತಿಸಿದರು. ಟಿ.ಬಿ.ಶಹಾಪೂರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!