Friday, July 26, 2024

ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು: ಡಿಡಿಪಿಐ ನಲತವಾಡ

ಬೆಳಗಾವಿ: ವಿಜ್ಞಾನ ರಸಪ್ರಶ್ನೆ ವಿದ್ಯಾರ್ಥಿಗಳಲ್ಲಿ ಕುತೂಹಲ, ಆಸಕ್ತಿ ವೃದ್ದಿ ಹಾಗೂ ವಿಷಯದ ಆಳವಾದ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತದೆ. ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ಕುತೂಹಲ ಭರಿತ ಪ್ರಶ್ನಿಸುವ ಕೌಶಲ ಅಳವಡಿಸಿಕೊಳ್ಳುತ್ತಾ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಲತವಾಡ ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ಸಿದ್ಧರಾಮೇಶ್ವರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ ಸಿ. ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಾಚಾರ್ಯ ಪ್ರವೀಣ ಪಾಟೀಲ ಮಾತನಾಡಿ ವಿಜ್ಞಾನವನ್ನು ಬರೀ ಪುಸ್ತಕದಲ್ಲಿ ಅಧ್ಯಯನ ಮಾಡದೇ ಪರಿಸರದಲ್ಲಿ ಪ್ರಯೋಗಾಲಯಗಳಲ್ಲಿ ಅಧ್ಯಯನ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು. ಈ ಹಿಂದೆ ಜ್ಞಾನಿಗಳಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು ಆದರೆ ಈಗ ಕಲಿತ ಜ್ಞಾನವನ್ನು ಅನ್ವಯ ಮಾಡಿಕೊಳ್ಳುವವರಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದ್ದು ವಿದ್ಯಾರ್ಥಿಗಳು ಇದರತ್ತ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರಾವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಮೋಹನ ಬಸವನಗೌಡ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಗುವ ನೂತನ ಆವಿಷ್ಕಾರಗಳು, ವಿಜ್ಞಾನಿಗಳ ಜೀವನ ಮತ್ತು ಅವರ ಸಾಧನೆಗಳ ಕುರಿತು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿಕ್ಷಕರಾದ ಎಮ್. ಬಿ. ಅಂಗಡಿ ಹಾಗೂ ಶಿವಲೀಲಾ ಪೂಜಾರ ಕ್ವಿಝ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದೇವೇಂದ್ರ ಜಿನಗೌಡ ಆಂಗ್ಲಮಾಧ್ಯಮ ಶಾಲೆಯ ನೀರಜ ಕಂಬಳಿ ಹಾಗೂ ಆದಿತ್ಯ ಲೋಕರೆ ಅವರ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ಬೈಲಹೊಂಗಲದ ಕಲ್ಪವೃಕ್ಷ ಶಾಲೆಯ ಪೂರ್ವಾ ಠಾಕೂರ ಹಾಗೂ ಶಮಂತ್ ಪೂಜೇರಿ ಅವರ ತಂಡ ದ್ವಿತೀಯ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಅಸೋಶಿಯೇಷನ್ ಪಾರ್ ಸೈನ್ಸ ಎಜ್ಯುಕೇಶನ್ ಕಾರ್ಯದರ್ಶಿ ಕೆ. ಬಿ. ಹಿರೇಮಠ, ವಿಜ್ಞಾನ ವಿಷಯ ಪರಿವೀಕ್ಷಕ ಜಿ. ಎಸ್. ಕಂಬಳಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಮಲ್ಲಿಕಾಜುನ ಸದೆಪ್ಪ ಕೋಳಿ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ನಿರೂಪಿಸಿದರು. ಸ್ಪರ್ಧೆಯ ಜಿಲ್ಲಾ ಸಂಯೋಜಕ ಎಂ. ಬಿ. ಅಂಗಡಿ ವಂದಿಸಿದರು

ಜಿಲ್ಲೆ

ರಾಜ್ಯ

error: Content is protected !!