Thursday, July 25, 2024

ಶಾಸಕ ಹೆಚ್.ಡಿ.ರೇವಣ್ಣನವರಿಂದ 14 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಉದ್ಘಾಟನೆ.

ಹೊಳೆನರಸೀಪುರ (ಅ.09); ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವವಾದ ಕ್ರಾಂತಿ ಹೊಳೆನರಸೀಪುರದಲ್ಲಿ ನಡೆಯುತ್ತಿದ್ದು, ಹೆಣ್ಣು ಮಕ್ಕಳು ಸುಶಿಕ್ಷಿತರಾದಾಗ ಮಾತ್ರ ದೇಶದ ಮತ್ತು ಸಮಾಜ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು.

ಅವರು ಇಂದು ಪಟ್ಟಣದ ಮಹಾತ್ಮ ಗಾಂಧಿಯವರ ಉದ್ಯಾನವನದ ಹಿಂಭಾಗ ನೂತನವಾಗಿ 14 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು,

ಪ್ರಸ್ತುತ ಭಾರತ ದೇಶದ ಯಾವುದೇ ಪ್ರಧಾನ ಮಂತ್ರಿಗಳ ಕ್ಷೇತ್ರದಲ್ಲಿ ಇಲ್ಲದಷ್ಟು ಶೈಕ್ಷಣಿಕ ಸಂಸ್ಥೆಗಳು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ತವರೂರಿನಲ್ಲಿ ಇರುವುದು ದೇಶಕ್ಕೆ ಹೆಮ್ಮೆತರುವ ವಿಷಯವಾಗಿದ್ದು,

ಹಾಸನ ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಪಕ್ಷಾತೀತವಾಗಿ ಸ್ಥಾಪಿಸಲಾಗಿದ್ದು, ಹೊಳೆನರಸೀಪುರವೊಂದರಲ್ಲೇ ಒಂದು ಇಂಜಿನಿಯರಿಂಗ್ ಕಾಲೇಜು, ಮೂರು ಸರ್ಕಾರಿ ಪಾಲಿಟೆಕ್ನಿಕ್‌ಗಳು, ಏಳು ಪ್ರಥಮ ದರ್ಜೆ ಕಾಲೇಜುಗಳು,ಏಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಒಂದು ಜವಾಹರ್ ನವೋದಯ ವಿದ್ಯಾಲಯ ವಸತಿ ಶಾಲೆ, ಒಂದು ಆದರ್ಶ ವಿದ್ಯಾಲಯ, ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೂರು ನರ್ಸಿಂಗ್ ಕಾಲೇಜು, ಸರ್ಕಾರಿ ಕಾನೂನು ವಿದ್ಯಾಲಯ,ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಡೆಸಿಗ್ನೇಟೆಡ್ ಕೋವಿಡ್ ಕೇರ್ ಕೇಂದ್ರ, ಮತ್ತು ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವಿರುವ ಅತ್ಯಾಧುನಿಕ ಸಿ.ಟಿ. ಸ್ಕಾನಿಂಗ್ ಯಂತ್ರ ಮತ್ತು ಇತರೆ ಯಂತ್ರೋಪಕರಣಗಳನ್ನು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು,

ಹೊಳೆನರಸೀಪುರದಲ್ಲಿಂದು ಪ್ರಾರಂಭಿಸಲಾಗುತ್ತಿರುವ ಸರ್ಕಾರಿ ಮಹಿಳಾ ಪಾಲಿಟಕ್ನಿಕ್ ಕಾಲೇಜನ್ನು 14 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ 9 ತರಗತಿಯ ಕೊಠಡಿಗಳು, ಪ್ರಯೋಗಶಾಲೆಗಾಗಿ 5 ಕೊಠಡಿಗಳು, ಗ್ರಂಥಾಲಯ,ಕಂಪ್ಯೂಟರ್ ಸೈನ್ಸ್, ಸೆಮಿನಾರ್ ಹಾಲ್,ವರ್ಕ್ ಶಾಪ್, ನಿರ್ಮಿಸಲಾಗಿದೆ.
ಇಲ್ಲಿನ ಡಿಪ್ಲೋಮ ಕೋರ್ಸ್ ಗಳಿಗೆ ಎಸ್.ಎಸ್.ಎಲ್.ಸಿ, ಉತ್ತೀರ್ಣರಾದವರಿಗೆ ಮೊದಲನೆ ವರ್ಷಕ್ಕೆ ಪ್ರವೇಶ,ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದವರಿಗೆ ಎರಡನೇ ವರ್ಷಕ್ಕೆ ಪ್ರವೇಶವನ್ನು ಕಲ್ಪಿಸಲಾಗುತ್ತದೆ,

ಇಲ್ಲಿ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ , ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ಗೆ ಸೇರಿದ ಕೋರ್ಸ್ ಗಳಿದ್ದು ಹೆಣ್ಣು ಮಕ್ಕಳು ಇಲ್ಲಿ ಸೇರಿ ಸುಶಿಕ್ಷಿತರಾಗಿ ಸ್ವಾವಲಂಬಿಯಾಗಿ ಜೀವನ್ನು ನಡೆಸಬಹುದೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಇಲ್ಲಿ ಅತ್ಯತ್ತಮ ಉಪನ್ಯಾಸಕರುಗಳಿದ್ದು, ಹೆಣ್ಣು ಮಕ್ಕಳಿಗಾಗಿ ಇಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು, ಹತ್ತಿರದಲ್ಲೇ ಒಂದು ಎ.ಟಿ.ಎಂ. ಸಹ ಆರಂಭಿಸಲಾಗುತ್ತದೆ, ಮತ್ತು ಪೊಲೀಸ್ ಠಾಣೆ ಹತ್ತಿರ ಇರುವುದರಿಂದ ಹೆಣ್ಣು ಮಕ್ಕಳು ಯಾವುದೇ ಭಯ ಭೀತಿಯಿಲ್ಲದೇ ವ್ಯಾಸಂಗ ಮಾಡಬಹುದಾಗಿದ್ದು ಕಾಲೇಜಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು,

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸಿ.ಜಿ.ವೀಣಾ ರಾಜೇಶ್, ಉಪಾಧ್ಯಕ್ಷರಾದ ಜಿ.ತ್ರಿಲೋಚನಾ ಸೋಮೇಶ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ. ಆರಕ್ಷಕ ವೃತ್ತ ನಿರೀಕ್ಷಕ ಪ್ರದೀಪ್,
ಶ್ವಾಸ ಕೋಶ ತಜ್ಞ ಡಾ.ನಟರಾಜ್, ವಿಶ್ರಾಂತ ಪ್ರಾಂಶುಪಾಲ ಪುಟ್ಟಸೋಮಪ್ಪ.
ಪುರಸಭೆ ಸದಸ್ಯರಾದ ನಿಂಗಯ್ಯ ಮಾವನೂರು,ಹೆಚ್,ಟಿ, ಕುಮಾರಸ್ವಾಮಿ, ಉಪ ತಹಸೀಲ್ದಾರ್ ರವಿ ಬಾಳಗಂಚಿ, ರಂಗಸ್ವಾಮಿ, ಕುಮಾರ್, ಪಾಂಡುರಂಗ ಮತ್ತು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕವೃಂದ,ಸಿಬ್ಬಂಧಿಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!