Thursday, July 25, 2024

ವೃತ್ತಿ ಮತ್ತು ಪ್ರವೃತ್ತಿ ಎರಡೂ ಬದುಕಿನ ಭಾಗಗಳು – ಪಿಎಸ್ಐ ಎಸ್.ಬಿ.ಮಾಳಗೊಂಡ

ಬೈಲಹೊಂಗಲ: ಯಾವುದೇ ವೃತ್ತಿಯಲ್ಲಿದ್ದರೂ ಅದರ ಜೊತೆಗೆ ಉತ್ತಮ ಪ್ರವೃತ್ತಿಯೂ ಇರಬೇಕು ಎರಡೂ ಬದುಕಿನ ಭಾಗಗಳು ಎಂದು ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಎಸ್.ಬಿ ಮಾಳಗೊಂಡ ಹೇಳಿದರು.

ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ ಕಾರಣ ಇತ್ತೀಚೆಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಉತ್ತಮ ಹವ್ಯಾಸಗಳು ಮನುಷ್ಯನ ವ್ಯಕ್ತಿತ್ತವನ್ನು ರೂಪಿಸುವಲ್ಲಿ ಸಹಕರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ತಮ್ಮ ಬಿಡುವಿಲ್ಲದ ಕೆಲಸದಲ್ಲಿಯೂ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವುದು ಸಂತಸದ ಸಂಗತಿ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದವರಾದ ಮಾಳಗೊಂಡ ಅವರು ಸಾವಿರಾರು ಕವನಗಳನ್ನು ರಚಿಸಿದ್ದು ಅವರ ಕನ್ನಡ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಮಾಳಗೊಂಡ ಅವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೌಲಿಕ ಕೃತಿಗಳು ಪ್ರಕಟಗೊಂಡು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಶುಭ ಕೋರಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಮಾಳಗೊಂಡ ಅವರ ಕವಿತೆಗಳಲ್ಲಿ ಬದುಕಿನ ತತ್ವ ಸಿದ್ದಾಂತಗಳ ಹೂರಣವಿದ್ದು ವಾಸ್ತವತೆಯ ನೆಲೆಗಟ್ಟಿನಲ್ಲಿ ಮಾನವೀಯ ಮೌಲ್ಯಗಳು ಅನಾವರಣಗೊಂಡಿವೆ ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಡಾ.ಎಫ್.ಡಿ.ಗಡ್ಡಿಗೌಡರ ಮಾತನಾಡಿ ಖಾಕಿಯಲ್ಲಿಯೂ ಒಬ್ಬ ಅಪರೂಪದ ಕವಿಯಿದ್ದು ಮಾಳಗೊಂಡ ಅವರ ಕಾವ್ಯಪ್ರತಿಭೆ, ಸೃಜನಶೀಲತೆ ವಿಶೇಷವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಚಂದ್ರಶೇಖರ ಕೊಪ್ಪದ ಮಾತನಾಡಿ ವೃತ್ತಿಯ ಜೊತೆಗೆ ಸಾಹಿತ್ಯ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದು ಪ್ರಶಂಸನೀಯ ಎಂದರು. ಪ್ರತ್ಯೂಷ ಮೆಟಗುಡ ಸ್ವಾಗತಿಸಿದರು. ಆನಂದ ಗಣಾಚಾರಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!