Saturday, July 27, 2024

ಶಾಪ ವಿಮೋಚನೆ ಎಂದದ್ದಕ್ಕೆ ತಪ್ಪು ಗ್ರಹಿಕೆ ಬೇಡ: ಸಚಿವ ಮುರುಗೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್

ಬಾಗಲಕೋಟೆ: ಏಪ್ರೀಲ್-23ರಂದು ಕೆರೂರು ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಾನು ಬಾದಾಮಿ ತಾಲೂಕಿನ ಶಾಪ ವಿಮೋಚನೆಯ ಆಗಿದೆ ಎಂದು ನನ್ನ ಭಾಷಣದಲ್ಲಿ ಹೇಳಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಈ ಕುರಿತು ಸ್ಪಷ್ಟನೆ ನೀಡಿದ ಅವರು ಬಾದಾಮಿ ತಾಲೂಕಿಗೆ ಯಾರು ಶಾಪ ಕೊಟ್ಟಿದ್ದರು? ಯಾವಾಗ ಶಾಪಗ್ರಸ್ತವಾಗಿತ್ತು? ಎಂಬರ್ಥದ ಪ್ರಶ್ನೆ ಎತ್ತುವುದು ತರವಲ್ಲ.

ನಾನು ಹೇಳಿರುವುದು ಬೇರೆಯದೇ ಅರ್ಥದಲ್ಲಿ ಇದೆ. ಈ ಮೊದಲು ಬಾದಾಮಿ ತಾಲೂಕಿನಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದವು. ನೀರಾವರಿಯಿಂದ ಕೃಷಿ ಭೂಮಿ ವಂಚಿತವಾಗಿತ್ತು. ನಿರುದ್ಯೋಗ ಸಮಸ್ಯೆಯಿಂದ ಜನ ಗೋವಾ, ಮುಂಬೈಗೆ ಗುಳೆ ಹೊಗುತ್ತಿದ್ದರು. ಹೀಗಾಗಿ ತಾಲೂಕಿನ ಅಭಿವೃದ್ದಿ ಮಂಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಎಂ.ಆರ್.ಎನ್. ಶುಗರ್ಸ್ ಹೊಸದಾಗಿ ಪ್ರಾರಂಭವಾಯಿತು. ಸ್ಥಗಿತಗೊಂಡ ಬಾದಾಮಿ ಹಾಗೂ ಕೇದಾರನಾಥ ಶುಗರ್ಸ್ ಮರು ಪ್ರಾರಂಭವಾಗಿವೆ. ಸಮಯಕ್ಕೆ ಸರಿಯಾಗಿ ರೈತರ ಕಬ್ಬು ಕಾರ್ಖಾನೆ ತಲುಪಿ ನಿಗದಿತವಾಗಿ ಬಿಲ್ ದೊರೆಯುತ್ತಿದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರೆತಿವೆ. ಹೆರಕಲ್ ಯೋಜನೆ ಮೂಲಕ ರೈತರ ಭೂಮಿ ಹಸಿರಾಗಿದೆ. ಈಗ ಕೆರೂರ ಏತ ನೀರಾವರಿ ಯೋಜನೆ ಅನುಷ್ಠಾನವಾಗುತ್ತಿದ್ದು, ಮತ್ತೆ 16 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ದೊರೆಯಲಿದೆ.

ಬಾದಾಮಿ ಪ್ರವಾಸೋದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿದೆ. ಮೂಲಸೌಕರ್ಯ ಅಭಿವೃದ್ದಿಯಾಗುತ್ತಿದೆ. ಹೀಗಾಗಿ ತಾಯಿ ಬನಶಂಕರಿದೇವಿ ಆಶಿರ್ವಾದಿಂದ ಬಾದಾಮಿ ತಾಲೂಕು ಅಭಿವೃದ್ದಿ ಹೊಂದುತ್ತಿರುವ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಹಳೆಯ ಕಂಟಕಗಳು ದೂರವಾಗಿ ಹೊಸ ಶಕೆ ಪ್ರಾರಂಭವಾಗುತ್ತಿದೆ. ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೇನೆ ಎಂದು ಮುರುಗೇಶ ನಿರಾಣಿ ಸ್ಪಷ್ಟ ಪಡಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!