Thursday, July 25, 2024

ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಜೆಟ್‌ ಜನರ ಕಣ್ಣೊರೆಸುವ ಬಹಿರಂಗ ನಾಟಕ! ಮರುಳು ಮಾಡುವ ಭಾವನಾತ್ಮಕ ಸರ್ಕಸ್ ಅಷ್ಟೆ.

ಲೇಖನ:ಉಮೇಶ ಗೌರಿ.(ಯರಡಾಲ)

ಬಜೆಟ್ ಎಂದರೇನು?:ಮುಂಬರುವ ಆರ್ಥಿಕ ವರ್ಷದ (ಕೇಂದ್ರ/ ರಾಜ್ಯ) ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಮುಂಗಡ ಪತ್ರ (ಬಜೆಟ್‌) ಎಂದು ಕರೆಯುತ್ತಾರೆ. ಮನೆಯಲ್ಲಿ ಹಿರಿಯರು ತಮ್ಮ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆಯಂತೆಯೇ ಇದು ದೇಶ/ರಾಜ್ಯ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆ. ಮುಂಗಡ ಪತ್ರವು ಸರಕಾರದ ವಾರ್ಷಿಕ ಆಯ-ವ್ಯಯವಾಗಿದ್ದು, ಸರಕಾರದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಸರಕಾರವು ವಿವಿಧ ಮೂಲಗಳಿಂದ (ಕಂದಾಯ ಹಾಗೂ ತೆರಿಗೆ ಆದಾಯ) ಗಳಿಸುವ ವರಮಾನವನ್ನು ಸಾರ್ವಜನಿಕ ಆದಾಯ ಎಂದು ಕರೆಯಲಾಗುತ್ತದೆ.

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ. ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಅದನ್ನು ನಿರ್ವಹಿಸಲು ಚುನಾವಣೆ ಎಂಬ ಮಾರ್ಗದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಸಂವಿಧಾನವೆಂಬ ಕಾನೂನಿನ ಮೂಲಕ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇದನ್ನು ನಿರ್ವಹಿಸುತ್ತಿದೆ.

ಇದರ ಬಹುಮುಖ್ಯ ಭಾಗ ಆಯುವ್ಯಯದ ಲೆಕ್ಕ ಅಥವಾ ಬಜೆಟ್. ಇಡೀ ವ್ಯವಸ್ಥೆ ಬಹುತೇಕ ಮುನ್ನಡೆಯುವುದು ಅಧಿಕೃತವಾಗಿ ಇದರ ಆಧಾರದಲ್ಲಿಯೇ.

ಹೆಚ್ಚು ಕಡಿಮೆ ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ, ವಾಹನಗಳಿಗೆ ಇಂಧನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸರ್ಕಾರ ನಡೆಸಲು ಈ ಬಜೆಟ್. ಒಂದು ಬೃಹತ್ ಸಾರ್ವಜನಿಕ ಸಂಸ್ಥೆ ಕ್ರಮಬದ್ಧವಾಗಿ ನಡೆಯಬೇಕಾದರೆ ಬಜೆಟ್ ಇಲ್ಲದಿದ್ದರೆ ಅದು ಅನಾಗರಿಕ ವ್ಯವಸ್ಥೆಯಾಗುತ್ತದೆ.

ಇಷ್ಟೊಂದು ಮುಖ್ಯವಾದ ಬಜೆಟ್ ವಾಸ್ತವದಲ್ಲಿ ಹಾಗಿದೆಯೇ?

ಖಂಡಿತ ಇಲ್ಲ. ಅದು ಕೇವಲ ಅಂಕಿ ಸಂಖ್ಯೆಗಳ ಒಂದು ಕಸರತ್ತು ಮಾತ್ರವಾಗಿದೆ. ಒಂದು ವೇಳೆ ಬಜೆಟ್ ನಿಜವಾಗಲೂ ಅಷ್ಟೊಂದು ಮುಖ್ಯವಾಗಿದ್ದಿದ್ದರೆ ನಮ್ಮ ವ್ಯವಸ್ಥೆ ಇಷ್ಟೊಂದು ಕೆಟ್ಟದಾಗಿ ಮತ್ತು ಹಾಸ್ಯಾಸ್ಪದವಾಗಿ ಇರುತ್ತಿರಲಿಲ್ಲ.

ಇಷ್ಟು ದೊಡ್ಡ ಮೊತ್ತವನ್ನು ಅವರು ಬಜೆಟ್ ಎಂದು ಮಂಡಿಸುವುದು, ಇವರು ಅದನ್ನು ಖರ್ಚು ಮಾಡುವುದು, ಅವರು ವಿಮರ್ಶಿಸುವುದು, ಇವರು ಅದರಲ್ಲಿ ಕೊಳ್ಳೆ ಹೊಡೆಯುವುದು.

ಅರೆ, ಅಷ್ಟೊಂದು ದುಡ್ಡು ಸರಿಯಾಗಿ ಯೋಜಿಸಿ ಖರ್ಚು ಮಾಡಿದ್ದಿದ್ದರೆ, ಇಷ್ಟುಹೊತ್ತಿಗಾಗಲೇ.ಕರ್ನಾಟಕ ರಾಜ್ಯದ ಪರಿಸರ ನಳನಳಿಸಿತ್ತಿತ್ತು. ಆಹಾರ ನೀರು ಗಾಳಿ ಶುಭ್ರವಾಗಿರುತ್ತಿತ್ತು. ಶಿಕ್ಷಣ ಆರೋಗ್ಯ ಸಾಮಾನ್ಯರ ಕೈಗೆಟುಕುತ್ತಿತ್ತು. ನದಿ ಕೆರೆ ಭಾವಿ ಕೊಳ್ಳಗಳು ತುಂಬಿ ಹರಿಯುತ್ತಿತ್ತು. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ಲವಲವಿಕೆಯಿಂದ ಕೂಡಿರುತ್ತಿತ್ತು. ಗ್ರಂಥಾಲಯ – ಕ್ರೀಡಾಂಗಣಗಳು ಪ್ರತಿ ಗ್ರಾಮದಲ್ಲೂ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದವು. ಮಕ್ಕಳು ಯುವಕರು ಸಂಗೀತ ಸಾಹಿತ್ಯ ವಿಜ್ಞಾನ ಲಲಿತಕಲೆಗಳಲ್ಲಿ ಬಹುದೊಡ್ಡ ಸಾಧನೆ ಮಾಡಿರುತ್ತಿದ್ದರು. ಇದೆಲ್ಲದರ ಪರಿಣಾಮ ಮಾನವೀಯ ಮೌಲ್ಯಗಳು ಸಮಾಜದಲ್ಲಿನ ಸಹಜವಾಗಿ ಅತ್ಯಂತ ಮಹತ್ವ ಪಡೆಯುತ್ತಿದ್ದವು.

ಆದರೆ ಈಗ ಆಗಿರುವುದೇನು?

ಬಜೆಟ್ ನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಲಾಗುತ್ತದೆ. ಕೇಳಲು ತುಂಬಾ ಆಕರ್ಷಕವಾಗಿರುತ್ತದೆ. ಆ ಯೋಜನೆಗಳು ಜಾರಿಯಾದದ್ದೇ ಆದರೆ ಇಷ್ಟೊತ್ತಿಗಾಗಲೇ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಬೇಕಿತ್ತು. ಸಾಮಾನ್ಯ ಜನರ ಜೀವನಮಟ್ಟ ಉತ್ತಮ ಸ್ಥಿತಿಯಲ್ಲಿರಬೇಕಿತ್ತು.

ಆದರೆ ಹಾಗಾಗುತ್ತಿಲ್ಲ. ಕಾರಣ ಅದನ್ನು ಅನುಷ್ಠಾನ ( implement ) ಮಾಡಬೇಕಾದ ಕಾರ್ಯಾಂಗ ಮತ್ತು ಶಾಸಕಾಂಗ ಕೇವಲ ಭ್ರಷ್ಟಾಚಾರ ಮಾತ್ರವಲ್ಲ ತನ್ನ ‌ಆಲೋಚನಾ ಸೂಕ್ಷ್ಮತೆಯನ್ನೇ ಕಳೆದುಕೊಂಡಿದೆ.

ನಿರ್ಧಿಷ್ಟ ಮತ್ತು ಖಚಿತ ಅಧಿಕಾರ, ಸಂಬಳ ಮತ್ತು ಭದ್ರತೆ ಅವರನ್ನು ನಿಷ್ಕ್ರಿಯಗೊಳಿಸಿದೆ. ಆದರೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹಾಗು ಇಲ್ಲಿನ ತಳಮಟ್ಟದ ಜನಸಮುದಾಯದ ಒಂದಷ್ಟು ಮಾನವೀಯ ಸಂಬಂಧಗಳು ಹೇಗೋ ವ್ಯವಸ್ಥೆಯನ್ನು ಮುಂದಕ್ಕೆ ಸಾಗಿಸುತ್ತಿದೆ.

ಆದರೆ ಜಾಗತೀಕರಣದ ಈ ಆಧುನಿಕ ಕಾಲದಲ್ಲಿ ಅದು ಮತ್ತಷ್ಟು ಶಿಥಿಲವಾಗುತ್ತಿದೆ. ಅದು ಗರೀಭ್ ಹಠಾವೋ ಇರಬಹುದು, ಅನ್ನ ಭಾಗ್ಯ ಇರಬಹುದು, ಮುದ್ರಾ ಯೋಜನೆ ಇರಬಹುದು ಯಾವುದೇ ಆಗಲಿ ಯಾರೇ ವ್ಯಕ್ತಿ ಅಧಿಕಾರದಲ್ಲಿ ಇರಲಿ ಅಧಿಕಾರಿಗಳ ಸಲಹೆ ಪಡೆದು ಯೋಜನೆ ರೂಪಿಸುತ್ತಾರೆ. ಸಾಲವೋ ತೆರಿಗೆಯೋ ಹಣವನ್ನೂ ಒದಗಿಸುತ್ತಾರೆ. ಆದರೆ ಅದನ್ನು ಸಂಪೂರ್ಣ ಜಾರಿಗೊಳಿಸುವಲ್ಲಿ ಬಹುತೇಕ ವಿಫಲರಾಗುತ್ತಾರೆ. ಶೇಕಡಾ ಶೇ.100 ಹಣ ಖರ್ಚು ಮಾಡುತ್ತಾರೆ. ಅದರ ನಿಜವಾದ ಅನುಷ್ಠಾನ ಶೇಕಡಾ 30-40 ಆದರೆ ಅದೇ ಹೆಚ್ಚು. ಉಳಿದದ್ದು ವ್ಯರ್ಥ ಅಥವಾ ಕಾಗದದ ಮೇಲೆ ಮಾತ್ರ ಇರುತ್ತದೆ.

ಸರ್ಕಾರದ ಮಧ್ಯವರ್ತಿ ಕೆಲಸ ಅನುಷ್ಠಾನದಲ್ಲಿ ಇರದೆ ಅದಕ್ಕೆ ವಿರುದ್ಧವಾದ ಹಣಗಳಿಸುವುದು , ಮತಗಳಿಸುವುದು, ಅಧಿಕಾರ ಹಿಡಿಯುವುದು ಮತ್ತು ಜನರನ್ನು ಮರುಳು ಮಾಡುವುದೇ ಆಗಿರುತ್ತದೆ.ವ್ಯವಸ್ಥೆ ಸಂಪೂರ್ಣ ಬದಲಾಗಿ ಹೆಚ್ಚು ಜವಾಬ್ದಾರಿಯುತವಾಗಿ ತನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬಜೆಟ್ ಗೆ ಬೆಲೆ.

ಆದ್ದರಿಂದ ಈ ವ್ಯವಸ್ಥೆಯಲ್ಲಿ ಬಜೆಟ್ ಗಳ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಅದೊಂದು ಅನಿವಾರ್ಯದ ಕಣ್ಣೊರೆಸುವ ಬಹಿರಂಗ ನಾಟಕ. ಪ್ರೇಕ್ಷಕರನ್ನು ಮರುಳು ಮಾಡುವ ಭಾವನಾತ್ಮಕ ಸರ್ಕಸ್ ಅಷ್ಟೆ.

ವಾಸ್ತವದಲ್ಲಿ ಬಜೆಟ್ ನ ಪ್ರಾಯೋಗಿಕತೆ ನಂಬಲನರ್ಹ. ಕೇವಲ ಸರ್ಕಾರಿ ಅಧಿಕಾರಿಗಳ‌ ಸಂಬಳ, ಅಧಿಕಾರಸ್ಥ ರಾಜಕಾರಣಿಗಳ ಹಗಲು ದರೋಡೆ, ಕಂಟ್ರಾಕ್ಟರ್ ಗಳು ಮತ್ತು ದಲ್ಲಾಳಿಗಳ ಅಕ್ಷಯ ಪಾತ್ರೆಯಂತೆ ಮಾತ್ರ ಅದು ಕಾರ್ಯ ನಿರ್ವಹಿಸುತ್ತದೆ.

ಆ ರೀತಿಯ ಜನಗಳಿಗೆ ಮಾತ್ರ ಬಜೆಟ್ ಶೇ.100 ಉಪಯೋಗವಾಗುತ್ತದೆ. ನಮಗೆ ನಿಮಗೆ ಕೇವಲ ಅಧಿಕ ತೆರಿಗೆಯ ಹೊರೆ ಮತ್ತು ಎಂದಿನಂತೆ ಭರವಸೆಯೊಂದಿಗೆ ಹೇಗೋ ದಿನನಿತ್ಯದ ಜೀವನ ‌ಸಾಗಿಸಲು ಮಾತ್ರ ಇದು ಒಂದು ನೆಪವಾಗುತ್ತದೆ.

ಇದಕ್ಕೆ ಕೇವಲ ಒಂದು ಪಕ್ಷ, ಸರ್ಕಾರ ಅಥವಾ ವ್ಯಕ್ತಿ ಕಾರಣವಲ್ಲ. ಇಡೀ ಸರ್ಕಾರಿ ವ್ಯವಸ್ಥೆಯ ಇತಿಹಾಸ ಕಾರಣವಾಗಿದೆ.ಸರ್ಕಾರವೆಂಬುದು ಆಳುವ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಅದು ಯಾವತ್ತಿಗೂ ತಾತ್ಕಾಲಿಕ ಎಂಬ ಅರಿವು ಅಧಿಕಾರಸ್ಥರಿಗೆ ತಿಳಿದಿರುತ್ತದೆ. ಆದ್ದರಿಂದ ಅವರು ಎಷ್ಟು ಸಾಧ್ಯವೋ ಅಷ್ಟು ತಮ್ಮ ಹಿತಾಸಕ್ತಿಗೆ ಅನುಕೂಲಕರ ಕೆಲಸಗಳನ್ನು ಮಾಡಿ ತಕ್ಷಣದ ಲಾಭಗಳನ್ನು ಮಾಡಿಕೊಂಡು ದೀರ್ಘಕಾಲದಲ್ಲಿ ಅದರ ಪರಿಣಾಮಗಳನ್ನು ನಿರ್ಲಕ್ಷಿಸುತ್ತಾರೆ.

ಸರ್ಕಾರಗಳು ಓಟಿನ ರಾಜಕೀಯದಲ್ಲಿ ತಮಗೆ ಇಷ್ಟ ಬಂದಂತೆ ಯೋಜನೆಗಳನ್ನು ಘೋಷಿಸುತ್ತಾರೆ. ಯಾವುದೇ ಪೂರ್ವ ತಯಾರಿ, ಹಣಕಾಸಿನ ನಿರ್ಧಿಷ್ಟ ಮಾನದಂಡ ಇರುವುದಿಲ್ಲ. ಹೇಗೋ ಮುಂದೆ ನೋಡೋಣ. ಈಗ ಜನ ಮೆಚ್ಚಿದರೆ ಸಾಕು ಎಂದು ಧೋರಣೆ ಇವರದು. ಜನರೂ ಸಹ ತಾತ್ಕಾಲಿಕ ಲಾಭಕ್ಕೆ ಹೆಚ್ಚು ಕಾತುರರಾಗಿರುತ್ತಾರೆ.

ಜನರು ಚುನಾವಣಾ ವ್ಯವಸ್ಥೆಯಲ್ಲಿ ಜಾಗೃತರಾದರೆ ಇದಕ್ಕೆ ಪರಿಹಾರ ಖಂಡಿತ ಸಿಗುತ್ತದೆ. ಅಲ್ಲಿಯವರೆಗೂ ಜನರನ್ನು ಪ್ರಬುದ್ದರಾಗಿಸುವ ಕೆಲಸ ನಾವು ಮಾಡೋಣ.

 

 

 

ಜಿಲ್ಲೆ

ರಾಜ್ಯ

error: Content is protected !!