Thursday, July 25, 2024

ಮೂಡಲಗಿಯಲ್ಲಿ ಮೊಳಗಿದ ಕನ್ನಡದ ಕಹಳೆ :ಕಸಾಪ ಪಧಾಧಿಕಾರಿಗಳ ಪದಗ್ರಹಣ : ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ.

ಬೆಳಗಾವಿ 19: ಮೂಡಲಗಿ ತಾಲೂಕಿನಾದ್ಯಂತ ಮುಂಬರುವ ಐದು ವರ್ಷಗಳ ಅವಧಿಯಲ್ಲಿ ಕನ್ನಡ ನಾಡು ನುಡಿ ನೆಲದ ಸಿರಿಗಂಧವನ್ನು ಪಸರಿಸುವಲ್ಲಿ ವಿನೂತನ ಕರ‍್ಯಕ್ರಮಗಳನ್ನು ಆಯೋಜಿಸಲಾಗುವುದು. ತಾಲೂಕಿನ ಎಲೆಮರೆಯ ಕಾಯಿಯಂತಿರುವ ಕವಿ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ನಿಂದ ವೇದಿಕೆ ಕಲ್ಪಿಸಿಕೊಟ್ಟು ನಾಡಿಗೆ ಪರಿಚಯಿಸಿ ಪ್ರೋತ್ಸಾಹಿಸುವ ಕಾರ್ಯ  ಮಾಡಲಾಗುವುದು ಕನ್ನಡದ ಕರ‍್ಯಗಳಿಗೆ ತಾಲೂಕಿನ ಸಮಸ್ತ ಕನ್ನಡಾಭಿಮಾನಿಗಳು ಸಾಹಿತಿಗಳು ಸಹಕಾರ ನೀಡಬೇಕೆಂದು ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ ಘಟಕದ ಅಧ್ಯಕ್ಷ ಡಾ. ಸಂಜಯ ಸಿಂದಿಹಟ್ಟಿ ಹೇಳಿದರು.

ಪಟ್ಟಣದ ಕುರಹಿನಹಟ್ಟಿ ಅರ್ಬನ ಕೋ ಅಪ್ ಸೋಸೈಟಿ ಸಬಾಭವನದಲ್ಲಿ ಶುಕ್ರವಾರದಂದು ಜರುಗಿದ ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಘಟಕದ ನೂತನ ಪಧಾಧಿಕಾರಿಗಳ ಅಧಿಕಾರ ಪದಗ್ರಹಣ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ  ಮಂಗಲಾ ಮೆಟಗುಡ್ಡ ಕನ್ನಡದ ಕೆಲಸ ಅಭಿಮಾನದಿಂದಾಗಬೇಕು ಪ್ರತಿನಿತ್ಯವೂ ಕನ್ನಡದ ಜಾಗೃತಿ ಮೂಡಿಸುವಲ್ಲಿ ಕನ್ನಡಪರ ಕಾರ್ಯಕ್ರಮಗಳು ಜರುಗಬೇಕು ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ನಮ್ಮ ಕನ್ನಡ ನಾಡು ನುಡಿ ನೆಲದ ಕುರಿತಂತೆ ಜಾಗೃತಿ ಮೂಡಿಸುವಂತ ಕೆಲಸದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮೊದಲಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರದ ಭವ್ಯವಾದ ಮೆರವಣಿಗೆಯನ್ನು ಸಕಲ ಕಲಾ ತಂಡಗಳೊಂದಿಗೆ ಕರಡಿ ಮಜಲು, ಸನಾದಿಯೊಂದಿಗೆ ಹಮ್ಮಿಕೊಳ್ಳಲಾಗಿತ್ತು ಮೆರವಣಿಗೆಯಲ್ಲಿ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡು ಪೂಜ್ಯ ಕಲ್ಮೇಶ್ವರ ಭೊಧ  ಅಶ್ವಾರೂಢ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಾ ಕಸಾಪ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಲಶೇಖರ ಬಂದಿ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಡಾ. ಮಹಾದೇವ ಜಿಡ್ಡಿಮನಿ, ಕಾರ್ಮಿಕ ಇಲಾಖೆಯ ಜಂಟಿ ನಿರ್ದೇಶಕ ವೆಂಕಟೇಶ ಸಿಂದಿಹಟ್ಟಿ, ಬಸವಣ್ಣಿ ಮುಗಳಖೋಡ, ಅಜಿತ ಮನ್ನಿಕೇರಿ, ಸುಭಾಸ ಕಮದಾಳ ಉಪಸ್ಥಿತರಿದ್ದರು.
ಮೊದಲಿಗೆ ಶಿವಲಿಂಗ ಆರಗಿ ಸ್ವಾಗತಿಸಿದರು, ಕೊನೆಗೆ ಮಹಾವೀರ ಸಲ್ಲಾಗೋಳ ವಂದಿಸಿದರು, ಚಿದಾನಂದ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲೆ

ರಾಜ್ಯ

error: Content is protected !!