Thursday, July 25, 2024

ಸಂವಿಧಾನ ಅರ್ಥ ಮಾಡಿಕೊಳ್ಳಬೇಕು ವಿಶ್ರಾಂತ ನ್ಯಾಯಮೂರ್ತಿ:ಎಚ್.ಎನ್. ನಾಗ ಮೋಹನ್‌ದಾಸ್

ಚಿಕ್ಕಬಳ್ಳಾಪುರ : ಭಾರತೀಯರಿಗೆ ಸಂವಿಧಾನ ಮಹಾಗ್ರಂಥ. ಇದನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು. ಅದರಂತೆ ನಡೆಯಬೇಕು. ಈ ಮೂಲಕ ಸಂವಿಧಾನ ಸಾಕ್ಷರತೆ ಹೆಚ್ಚಾಗಬೇಕು ಎಂದು ಉಚ್ಛನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗ ಮೋಹನ್‌ ದಾಸ್ ಹೇಳಿದರು.

ನಗರದ ಜಚನಿ ವಿದ್ಯಾ ಸಂಸ್ಥೆಯ ಸಿದ್ದರಾಮಯ್ಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ಸಂರಕ್ಷಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಂಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್, ಸಿಕ್ಕರಿಗೆ ಗುರು ಗ್ರಂಥ, ಬೌದ್ಧರಿಗೆ ಬುದ್ಧನ ಬೋಧನೆಗಳು ಪವಿತ್ರ ಗ್ರಂಥವಾದರೆ ಎಲ್ಲ ಭಾರತೀಯರಿಗೆ ಸಂವಿಧಾನ ಮಹಾಗ್ರಂಥ. ಇದರಲ್ಲಿ ಯಾವುದೇ ದೋಷವಿಲ್ಲ. ಸನ್ನಿಧಾನ ವೆಂಬ ಗ್ರಂಥವನ್ನು ಇನ್ನಷ್ಟು ಬಲಗೊಳಿಸಲು ಅವಕಾಶವೂ ಇದೆ ಎಂದರು.

ಜನತ್ತಿನ 199 ದೇಶದ ಪೈಕಿ 192 ದೇಶ ಸ್ವತಂತ್ರವಾದ ಸಂವಿಧಾನ ಹೊಂದಿದೆ. ಭಾರತದ ಸಂವಿಧಾನ ಜಾರಿಯಾಗಿ 73 ವರ್ಷವಾಯಿತು. ಬಹುಪಾಲು ಜನ ಸಂವಿಧಾನ ಓದಿಕೊಂಡಿಲ್ಲ, ಅರ್ಥ ಮಾಡಿಕೊಂಡಿಲ್ಲ, ಅದರಂತೆ ನಡೆದುಕೊಂಡಿಲ್ಲ. ನ್ಯಾಯಾಧೀಶರು, ವಕೀಲರು ಸಂವಿಧಾನ ಓದಿಕೊಂಡರೆ ಸಾಕು. ಇನ್ನಿತರರಿಗೆ ಅಗತ್ಯವಿಲ್ಲ ಎಂಬ ಭಾವನೆ ಇದೆ ಎಂದು ಹೇಳಿದರು.

ಸಂವಿಧಾನ ಅಷ್ಟು ಸುಲಭವಾಗಿ ಅರ್ಥವಾಗಲ್ಲ. ಇದು ಕಥೆ, ಕಾದಂಬರಿ, ಕವಿತೆ ಅಲ್ಲ. ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದೆ, ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳದೆ, ಅದರ ಮೂಲತತ್ವ(ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ)ಗಳು ತಿಳಿಯುವುದಿಲ್ಲ. ದೇಶ ಎಂದರೆ ಜನ. ಜನರ ಇತಿಹಾಸ, ಮೂಲ, ಧರ್ಮ, ಜಾತಿ, ಆರ್ಥಿಕ, ಸಾಮಾಜಿಕ ಸಂಬಂಧ, ಮೌಲ್ಯ, ಸಂಸ್ಕೃತಿ, ಉಪಸಂಸ್ಕೃತಿ, ಭಾಷೆ ತಿಳಿದರೆ, ದೇಶದ ಬಗ್ಗೆ ಅರಿಯಬಹುದು ಎಂದರು.

ಜಾಗತೀಕರಣ ವ್ಯವಸ್ಥೆಯಲ್ಲಿ ಶಿಕ್ಷಣ, ಸಾರಿಗೆ, ಆರೋಗ್ಯ, ವಸತಿ ಸೇರಿದಂತೆ ಎಲ್ಲವೂ ಖಾಸಗೀಕರಣವಾಗಿದೆ. ಖಾಸಗೀಕರಣ ವ್ಯಾಪಕವಾಗಿ ಬೆಳೆಯುತ್ತಿದ್ದಂತೆ, ಸರ್ಕಾರ ತನ್ನ ಜವಾಬ್ಧಾರಿಯಿಂದ ದೂರ ಸರಿಯುತ್ತಿದೆ. ಸಂವಿಧಾನದಲ್ಲಿ ಕಲ್ಯಾಣ ರಾಜ್ಯ ಕಟ್ಟಬೇಕು ಎಂದಿದೆ. ಮೂಲಭೂತ ಅವಶ್ಯಕತೆ ಒದಗಿಸುವ ಜವಾಬ್ದಾರಿ ಇದೆ. ಸರ್ಕಾರ ಇದರಿಂದ ದೂರು ಸರಿಯುತ್ತಿದ್ದರೂ, ನಾವೆಲ್ಲರೂ ಸುಮ್ಮನಿದ್ದೇವೆ. ನಮಗೆ ಸಂವಿಧಾನ ಅರ್ಥ ಆಗದೆ ಇರುವುದು ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ನಿಡುಮಾಮಿಡಿ ಜಗದ್ಗುರು ಶಾಖಾ ಮಠದ ಆಡಳಿತಾಧಿಕಾರಿ ಡಾ.ಶಿವಜ್ಯೋತಿ, ಜೀತ ವಿಮುಕ್ತಿ ರಾಜ್ಯ ಸಂಚಾಲಕ ಡಾ.ಕಿರಣ್ ಕಮಲ್ ಪ್ರಸಾದ್, ನಗರಸಭಾ ಸದಸ್ಯರು, ವಕೀಲರಾದ ಆರ್ ಮಟಮಪ್ಪ, ನೌಕರರ ಸಂಘ ಜಿಲ್ಲಾಧ್ಯಕ್ಷ ಜಿ.ಹರೀಶ್, ಕನ್ನಡಪರ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಡಾ.ಚಲಪತಿ, ಜಾನಪದ ಪ್ರಶಸ್ತಿ ಪುರಸ್ಕೃತ  ಗ.ನ. ಅಶ್ವತ್ಥ್, ಪ್ರಾಂಶುಪಾಲರಾದ ಪವಿತ್ರ, ಹರೀಶ್ ಎಸ್.ಆರ್, ವಿವಿಧ ಕ್ಷೇತ್ರದ ಗಣ್ಯರಾದ ಎಂ.ಮಂಜುನಾಥ್, ಚಿಕ್ಕಕೋನಪ್ಪ, ಕೆ.ಜಿ.ಶ್ರೀನಿವಾಸ್ ಇದ್ದರು.

 ವರದಿ:ಆನಂದ್ ಎಂ. ಚಿಕ್ಕಬಳ್ಳಾಪುರ

ಜಿಲ್ಲೆ

ರಾಜ್ಯ

error: Content is protected !!