Saturday, September 21, 2024

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ. ಗಾಂಧಿ ಷಾಟ್ ಕುಲದೀಪ್ ನಯ್ಯರ್

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ…
*ಗಾಂಧಿ ಷಾಟ್- ಕುಲದೀಪ್ ನಯ್ಯರ್*
(ಗಾಂಧಿಗೆ ಗುಂಡಿಕ್ಕಲಾಗಿದೆ) ಎಂಬ ಪದಗಳು ನನ್ನ ಕಣ್ಣನ್ನು ಅಪ್ಪಳಿಸಿದವು. ನನ್ನ ಹೃದಯದ ಬಡಿತವೇ ದಿಢೀರೆಂದು ನಿಂತುಬಿಟ್ಟಂತಾಯಿತು. ಇಡೀ ಪ್ರಪಂಚವೇ ನನ್ನ ಸುತ್ತ ಕುಸಿಯುತ್ತಿರುವಂತೆ ಭಾಸವಾಯಿತು. ಅವರಿಲ್ಲದಿದ್ದಲ್ಲಿ ನಮ್ಮ ಗತಿ ಹೇಗಪ್ಪಾ ಎಂಬ ಪ್ರಶ್ನೆ.

ನಾನು ಹಳೆಯ ದೆಹಲಿಯ ‘ಅಂಜಾಮ್; ಎಂಬ ಉರ್ದು ದಿನ ಪತ್ರಿಕೆಯನ್ನು ಸೇರಿ ಕೇವಲ ಮೂರು ತಿಂಗಳಾಗಿತ್ತಷ್ಟೆ. ಪಾಕಿಸ್ತಾನದಿಂದ ಅದೇ ತಾನೇ ಕಾನೂನು ಪದವಿ ಪಡೆದು ಬಂದಿದ್ದೆ. ನನ್ನ ವಯಸ್ಸಾಗ ಬರೀ 22 ವರ್ಷ. ಅನುಭವನದ ಹಿನ್ನಲೆ ಏನೂ ಇಲ್ಲದೆ ಮೊಟ್ಟ ಮೊದಲ ಬಾರಿಗೆ ವರದಿಗಾರ/ ಉಪಸಂಪಾದಕ ಆಗಿದ್ದದ್ದು ನನಗಂತೂ ರೋಮಾಂಚಕಾರಿಯಾಗಿತ್ತು. ವಾರ್ತಾ ಸಂಸ್ಥೆಯ ಟೆಲಿಪ್ರಿಂಟರಿನ ಸುತ್ತಲೇ ಸುತ್ತುತ್ತಿರುತ್ತಿದ್ದೆ. ಅಕ್ಷರಗಳನ್ನು ಸರಸರನೆ ನಿರಂತರವಾಗಿ ಹೊರಚೆಲ್ಲುವ ಅದರ ಮಾಂತ್ರಿಕ ಶಕ್ತಿಗೆ ಬೆರಗಾಗುತ್ತಿದ್ದೆ. ಅಂದು ಜನವರಿ 30 ರ ಮಧ್ಯಾಹ್ನ ಎಂದಿನಂತೆ ಟೆಲಿಪ್ರಿಂಟರ್ ಬಳಿ ನಿಂತಿದ್ದೆ. ಗಂಟೆ ಹೊಡೆಯಿತು. ಅಂದಿನ ದಿನಗಳಲ್ಲಿ ಟೆಲಿಪ್ರಿಂಟರ್ ಅತ್ಯಂತ ಪ್ರಮುಖವಾದ ಸುದ್ದಿಗೆ ನ್ಯೂಸ್ ಡೆಸ್ಕ್ ನ ಗಮನ ಸೆಳೆಯುತ್ತಿದ್ದುದೇ ಹಾಗೆ.

‘ಗಾಂಧಿ ಷಾಟ್’ (ಗಾಂಧಿಗೆ ಗುಂಡಿಕ್ಕಲಾಗಿದೆ ) ಎಂಬ ಪದಗಳು ನನ್ನ ಕಣ್ಣನ್ನು ಅಪ್ಪಳಿಸಿದವು. ನನ್ನ ಹೃದಯದ ಬಡಿತವೇ ದಿಢೀರೆಂದು ನಿಂತುಬಿಟ್ಟಂತಾಯಿತು. ಇಡೀ ಪ್ರಪಂಚವೇ ನನ್ನ ಸುತ್ತ ಕುಸಿಯುತ್ತಿರುವಂತೆ ಭಾಸವಾಯಿತು. ಅವರಿಲ್ಲದಿದ್ದಲ್ಲಿ ನಮ್ಮ ಗತಿ ಹೇಗಪ್ಪಾ ಎಂಬ ಪ್ರಶ್ನೆ.

ಸಹೋದ್ಯೋಗಿಯೊಬ್ಬರ ಬಳಿ ಮೋಟಾರ್ ಬೈಕ್ ಇತ್ತು. ನನ್ನನ್ನು ಮಹಾತ್ಮ ಗಾಂಧಿ ಇದ್ದಂತಹ ಬಿರ್ಲಾ ಭವನದ ಬಳಿ ಬಿಡುವುದಾಗಿ ಆತ ಹೇಳಿದ. ಅದು ನನ್ನ ವೃತ್ತಿ ಜೀವನದ ಆರಂಭದಲ್ಲಿನ ಅತ್ಯಂತ ಸ್ಪೋಟಕ ಸುದ್ದಿಯಾಗಿತ್ತು. ಆದರೆ, ಅದಕ್ಕೆ ನಾನೇ ಸಜ್ಜಾಗಿರಲಿಲ್ಲ ಎಂಬುದೂ ಗೊತ್ತಿತ್ತು. ಲಾಹೋರ್ನಲ್ಲಿ ಜರ್ನಲಿಸಂ ಕೋರ್ಸ್ನಲ್ಲಿ ನಾನು ಫೇಲಾಗಿದ್ದೆ. ಜತೆಗೆ ಬಿ.ಎ ಪದವಿಯಲ್ಲಿ ಐಚ್ಛಿಕ ಉರ್ದುವಿನಲ್ಲೂ ಫೇಲಾಗಿದ್ದೆ. ಮೋಟಾರ್ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಕಣ್ಣ ಮುಂದೆ ಅನೇಕ ವಿಷಯಗಳು ಹಾದುಹೋದವು. ಸಿಯಾಲ್ ಕೋಟ್ನಲ್ಲಿದ್ದ ನನ್ನ ತಂದೆ, ತಾಯಿಗೆ ವಿದಾಯ ಹೇಳಿ ಭಾರತದತ್ತ , ಪ್ರಯಾಸದ ಹೆಜ್ಜೆ ಹಾಕುತ್ತಿದ್ದ ಜನರ ತಂಡವನ್ನು ಸೇರಿಕೊಂಡಿದ್ದೆ.

ಗಾಂಧಿ ಸಾಯಬಾರದು. ರಾಷ್ಟ್ರ ವಿಭಜನೆಯ ನಂತರ ಉಂಟಾದ ಗಲಭೆಗಳನ್ನು ನಿಯಂತ್ರಿಸಲು ನಮಗಿದ್ದವರು ಅವರೊಬ್ಬರೇ. ಬಿರ್ಲಾ ಹೌಸಿನತ್ತ ಬೈಕ್ ಸಾಗುತ್ತಿರುವಾಗ ನಾನು ಹೀಗೆಲ್ಲ ಪ್ರಾರ್ಥಿಸುತ್ತಿದ್ದೆ . ಆದರೆ ಸ್ವಾತಂತ್ರ್ಯ ಗಳಿಸಿಕೊಟ್ಟ ನಂತರ ತಾವು ಸಾಯುವುದಾಗಿ ಅವರೇ ಅನೇಕ ಬಾರಿ ಹೇಳಿದ್ದರು. ಗಡಿ ದಾಟಿದ್ದೂ ನೆನಪಾಯಿತು. ಆ ಸಂದರ್ಭದಲ್ಲಿ ನನ್ನ ಜೇಬಿನಲ್ಲಿದ್ದದ್ದು ಬರೀ 120 ರೂಪಾಯಿಗಳು ಮಾತ್ರ.

ಬೀದಿಗಳಲ್ಲಿ ಮಾಮೂಲಿ ಚಟುವಟಿಕೆ ಇರಲಿಲ್ಲ. ಹೊಸ ದೆಹಲಿಯಿಂದ ಹಳೆಯ ದೆಹಲಿಯನ್ನು ಬೇರ್ಪಡಿಸಿದ್ದ ದರಿಯಾಗಂಜ್ನಲ್ಲಿ ಮಾತ್ರ ಮಾಮೂಲಿನಂತೆ ಜನಸಂದಣಿ ಇತ್ತು. ಮುಂದೆ ವಾಹನ ಸಂಚಾರ ಕಡಿಮೆಯೇ ಇತ್ತು. ರಸ್ತೆಗಳು ಬಿಕೋ ಎನ್ನುತ್ತಿದ್ದವು . ಬಿರ್ಲಾ ಹೌಸಿನ ಪ್ರವೇಶದ್ವಾರ ಮುಚ್ಚಿದ್ದು . ಅದ್ಯಾಕೋ ಆ ಸ್ಥಳ ನನಗೆ ಇಷ್ಟವಾಗಲಿಲ್ಲ. ಗಾಂಧಿ ಇನ್ನಿಲ್ಲ ಎಂಬುದನ್ನು ಕೇಳಿದಾಗಲಂತೂ ಅದೇನೋ ನನ್ನೊಳಗೆ ಚುಚ್ಚಿದಾಗಂತಾಗಿತ್ತು .

ಅಲ್ಲಿ ಹೆಚ್ಚು ಜನರಿರಲಿಲ್ಲ. ಬಿಳಿಯ ಖಾದಿ ಧರಿಸಿದ್ದ ಒಂದು ತಂಡ ಗಾಂಧಿಯ ಪಾರ್ಥಿವ ಶರೀರದ ಸುತ್ತ ನಿಂತು ಗಾಂಧಿಗೆ ಪ್ರಿಯವಾದ ಭಗವದ್ಗೀತೆ ಯನ್ನು ಓದುತ್ತಿತ್ತು. ಪ್ರಾರ್ಥನೆಗೆಂದು ಬಂದಿದ್ದ ಕೆಲವರು ಅಲ್ಲೇ ಉಳಿದಿದ್ದರು. ಗಾಂಧೀಜಿ ಅಲ್ಲಿ ಸಾಮಾನ್ಯವಾಗಿ ಮಧ್ಯಾಹ್ನದ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಆಗ ಭಗವದ್ಗೀತೆ, ಕುರಾನ್, ಬೈಬಲ್ ಪಠಣ ನಡೆಯುತ್ತಿತ್ತು. ಅಂದು ಪ್ರಾರ್ಥನಾ ಸಭೆಯಲ್ಲಿದ್ದ ಒಬ್ಬ ವ್ಯಕ್ತಿಯೇ ಗುಂಡು ಹಾರಿಸಿದ. ಅದೂ ಅವರು ಪ್ರಾರ್ಥನೆಗೆ ಹಾಜರಾಗಲೂ ಆಗಷ್ಟೇ ಆಗಮಿಸುತ್ತಿದ್ದ ಸಮಯದಲ್ಲಿ ರಕ್ತದ ಕೆಲವು ಹನಿಗಳು ದುರಂತದ ಕಥೆ ಹೇಳುತ್ತಿದ್ದವು. ಅಲ್ಲಿದ್ದ ಪ್ರಧಾನಿ ಜವಾಹರಲಾಲ್ ನೆಹರೂ, ಗೃಹ ಸಚಿವರ ಸರ್ಧಾರ್ ಪಟೇಲ್ ,ಅಬುಲ್ ಕಲಾಂ ಅಜಾದ್ ಹಾಗೂ ರಕ್ಷಣಾ ಸಚಿವ ಬಲದೇವ್ ಸಿಂಗ್ ಮೊದಲಾದವರನ್ನೂ ಗುರುತಿಸಿದೆ. ಅವರೆಲ್ಲಾ ತಮ್ಮ ಗುರುವೊಬ್ಬನನ್ನು ಕಳೆದುಕೊಂಡು ಅನಾಥರಾದಂತೆ ಕಾಣಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರೂ ಆಗಮಿಸಿದರು. ಆಗಮಿಸಿದ್ದೇ ಅವರು ಆ ಹೊತ್ತಿಗಾಗಲೇ ‘ಬಿರ್ಲಾ ಹೌಸ್’ ಗಾರ್ಡನ್ನಿನ ಮಧ್ಯಭಾಗದಲ್ಲಿ ಇರಿಸಿದ್ದ ಗಾಂಧಿಯವರ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದರು. ‘ಸದ್ಯ ಆತ ಪಂಜಾಬಿಯಲ್ಲ’ ಎಂದು ಮೌಂಟ್ ಬ್ಯಾಟನ್‌ಗೆ ಹೇಳಿದ ಬಲದೇವ್ ಸಿಂಗ್. ‘ಆತ ಮುಸ್ಲಿಮನೂ ಅಲ್ಲ ನಾವೂ ಈ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೇವೆ ಎಂದೂ ನುಡಿದರು. ಮೌಂಟ್ ಬ್ಯಾಟನ್ ಮಹಾತ್ಮ ಗಾಂಧಿ ಯೇಸು ಕ್ರಿಸ್ತನಂಥವರು ಅಥವಾ ಗೌತಮ ಬುದ್ಧನಂತವರು ಎಂದರು.

ಅಷ್ಟರೊಳಗೆ ಬಿರ್ಲಾ ಹೌಸಿನತ್ತ ಜನ ಪ್ರವಾಹದಂತೆ ನುಗ್ಗಿ ಬರತೊಡಗಿದರು. ಪೋಲಿಸರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಡ್ಡಗಟ್ಟೆಗಳನ್ನು ನಿರ್ಮಿಸಿದರು. ಇದನ್ನೆಂದೂ ಗಾಂಧೀಜಿ ಇಷ್ಟಪಡುತ್ತಿರಲಿಲ್ಲ. ಭದ್ರತೆಯ ಬಗೆಗಿನ ಅತಿ ಕಾಳಜಿಗೆ ಅವರು ಯಾವಾಗಲೂ ವಿರೋಧಿಯೇ ಆಗಿದ್ದರು. ನಾಯಕರು ಜನರನ್ನು ದೂರ ಮಾಡಬಾರದು ಎಂದವರು ಸದಾ ಹೇಳುತ್ತಿದ್ದವರು. ಆದರೆ ಹಿಂದೊಮ್ಮೆ ಮದನಲಾಲ್ ಎನ್ನುವಾತ ಬಾಂಬ್ ಎಸೆದ ನಂತರ ಸರ್ಕಾರ ಗಾಂಧೀಜಿಗೆ ಭದ್ರತೆ ಒದಗಿಸಿತ್ತು. ನೆಹರೂ ಅವರು ಬೌಂಡರಿ ಗೋಡೆಯತ್ತ ಧಾವಿಸಿ ಹೋಗುತ್ತಿರುವುದು ಕಂಡುಬಂತು ಬಿರ್ಲಾ ಹೌಸಿನಲ್ಲಿ ಈಗ ಜನರ ಮಹಾಪೂರ. ಗಾಂಧೀಜಿಯ ಅಚ್ಚುಮೆಚ್ಚಿನ ಹಾಡು ಈಶ್ವರ ಅಲ್ಲಾ ತೇರೆ ನಾಮ್ ಅಥವಾ ‘ಗಾಂಧಿ ಅಮರ್ ರಹೇ’ ಎಂಬಂತಹ ಘೋಷಣೆಗಳು ಮುಗಿಲು ಮುಟ್ಟಿದವು. ಕಣ್ಣೀರು ಒರೆಸಿಕೊಳ್ಳುತ್ತಲೇ ನೆಹರೂ ಗೋಡೆ ಹತ್ತಿ ಮಾತನಾಡತೊಡಗಿದರು. ಬೆಳಕು ನಂದಿಹೋಗಿದೆ. ಬಾಪೂ ಇನ್ನಿಲ್ಲ. ಆ ದಿವ್ಯ ಪ್ರಭೆ ದೂರವಾಗಿದೆ. ನಮ್ಮ ಬದುಕನ್ನು ಬೆಳಗಿಸಿ ಬೆಚ್ಚಗಿಡುತ್ತಿದ್ದ ಸೂರ್ಯ ಮುಳುಗಿದ್ದಾನೆ. ಕತ್ತಲೆಯಲ್ಲಿ ಚಳಿಯಿಂದ ನಡುಗುವ ಸ್ಥಿತಿ ನಮ್ಮದಾಗಿದೆ. ಹೀಗೆ ಮಾತಾಡುತ್ತಲೇ ನೆಹರೂ ಅವರಿಗೆ ಅಳು ಒತ್ತರಿಸಿ ಬಂತು. ಜನಸಮೂಹವೂ ಕಣ್ಣೀರುಗರೆಯಿತು . ಕೆನ್ನೆಯಲ್ಲಿ ನಿರೀಳಿಯದಿದ್ದ ಒಬ್ಬ ವ್ಯಕ್ತಿಯೂ ಕಾಣಲಿಲ್ಲ. ಎಲ್ಲರಲ್ಲೂ ತಮ್ಮದೇ ಕುಟುಂಬದ ವ್ಯಕ್ತಿಯೊಬ್ಬ ಮಕ್ಕಳನ್ನೆಲ್ಲ ಅನಾಥರನ್ನಾಗಿ ಮಾಡಿ ಅಗಲಿ ಹೋದಂತಹ ದುಃಖ ಮಡುಗಟ್ಟಿತ್ತು.
ನಾಥುರಾಮ ಗೋಡ್ಸೆಯನ್ನು ನಾನಲ್ಲಿ ಕಾಣಲಿಲ್ಲ . ಗಾಂಧೀಜಿಯವರನ್ನು ಕೊಲ್ಲುವ ಮೊದಲು ಆತ ಅವರ ಕಾಲುಗಳಿಗೆ ಎರಗಿ ಸನಿಹದಿಂದಲೇ ಮೂರು ಸುತ್ತು ಹಾರಿಸಿದ್ದ. ತಕ್ಷಣವೇ ಗೋಡ್ಸೆಯನ್ನು ಹಿಡಿದು ಬಿರ್ಲಾ ಹೌಸಿನಲ್ಲೇ ಒಂದು ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಅಲ್ಲೆಲ್ಲಾ ರಕ್ತ ಮಥು ಗಾಂಧೀಜಿಯವರು ಪ್ರಾರ್ಥನಾ ಸ್ಥಳಕ್ಕಾಗಿ ತೆಗೆದುಕೊಂಡು ಬಂದಿದ್ದ ಹೂಗಳು ಚೆಲ್ಲಾಡಿದ್ದವು. ಸುತ್ತ ಜನರ ಗುಂಪು ಇದ್ದರೂ ಆ ಹಾದಿ ನಿರ್ಜನವಾಗಿಯೇ ಕಾಣುತ್ತಿತ್ತು.

ಗಾಂಧೀಜಿಯವರು ಕಲ್ಕತ್ತದಲ್ಲಿ ಕೋಮು ಗಲಭೆಗಳ ಸಂದರ್ಭದಲ್ಲಿ ಏಕ ವ್ಯಕ್ತಿ ಶಕ್ತಿಯಾಗಿದ್ದರು. ಅಲ್ಲಿ ತಮ್ಮ ಶಸ್ತ್ರಾಸ್ತ್ರಗಳ ಚಿಕ್ಕದಾಗಿರಲಿ ದೊಡ್ಡದಿರಲಿ, ಅಪಾಯಕಾರಿಯಾಗಿರಲಿ, ಇಲ್ಲದಿರಲಿ ಹಿಂದೂಗಳು ಮತ್ತು ಸಿಖ್ಖರು ಅವುಗಳನ್ನು ಪರಿತ್ಯಾಗ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಈಗ ವಿಭಜನೆಯಿಂದಾಗಿ ಹೊತ್ತಿಕೊಂಡ ಕಿಡಿಯನ್ನು, ಹಿಂದೂಮಹಾಸಭಾ ನಾಯಕರಿಂದಾಗಿ ಹಬ್ಬಿದ ಬೆಂಕಿಯನ್ನು ನಂದಿಸುವವರಾದರೂ ಯಾರು?

ಗಾಂಧೀಜಿಯವರು ಆಗಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿ. ಸಿ. ರಾಯ್ ಅವರಿಗೆ ‘ನಾನು ಬದುಕಿ ಏನು ಪ್ರಯೋಜನ? ಜನರಿಗಾಗಲೀ ಅಧಿಕಾರದಲ್ಲಿ ಇರುವರಿಗಾಗಲೀ ನನ್ನಿಂದ ಏನೂ ಪ್ರಯೋಜನವಿಲ್ಲ . ‘ಮಾಡು ಇಲ್ಲವೇ ಮಡಿ’ ಎನ್ನುವುದು ಈ ಸಂದರ್ಭದಲ್ಲಿ ಹೆಚ್ಚು ಮುಖ್ಯ. ನಾನು ನನ್ನ ಕಡೆಯ ಉಸಿರುವವರೆಗೂ ದೇವರ ಹೆಸರು ಹೇಳಿಕೊಂಡು ಸಾಯಬಯಸುತ್ತೇನೆ’ ಎಂದು ಹೇಳಿದ್ದರೆಂದು ಕೆಲವು ದಿನಗಳ ಹಿಂದೆಯಷ್ಟೇ ಪತ್ರಿಕೆಗಳು ಪ್ರಕಟಿಸಿದ್ದವು .
ನಾನು ನನ್ನ ಷೂಗಳನ್ನು ಕಳಚಿ ಗಾಂಧಿಯವರು ಸಾಮಾನ್ಯವಾಗಿ ಸಂಜೆ ಪ್ರಾರ್ಥನಾ ಸಭೆ ನಡೆಸುತ್ತಿದ ಜಾಗದತ್ತ ನಡೆದುಹೋದೆ. ಏನೋ ಒಂದು ಬಗೆಯ ಸಾತ್ವಿಕತೆ, ಆಧ್ಯಾತ್ಮಿಕ ಭಾವನೆ ನನ್ನನ್ನೂ ತುಂಬಿಕೊಂಡಿತು. ಕೆಲವು ದಿನಗಳ ಹಿಂದಷ್ಟೇ ಗಾಂಧಿಯವರ ಸಭೆಯಲ್ಲಿ ನಾನು ಪಾಲ್ಗೊಂಡಿದ್ದು ಸ್ಮರಣೆಗೆ ಬಂತು. ತಮ್ಮ ಪ್ರವಚನಗಳನ್ನು ಮಾಡಲು ಗಾಂಧಿಯವರು ಕುಳಿತುಕೊಂಡಿದ್ದ ಶೆಡ್ಡಿನ ಹಿಂಭಾಗದಲ್ಲೇ ಮದನ್ ಲಾಲ್ ಬಾಂಬ್ ಸ್ಪೋಟಿಸಿದ್ದ ದಿನ ಅದು. ನನಗೂ ಅದರ ಸದ್ಧು ಕೇಳಿಸಿತ್ತು. ಆದರೆ ಅದೊಂದು ಪಟಾಕಿ ಸದ್ದಲ್ಲದೆ ಬೇರೇನೂ ಅಲ್ಲ ಎಂದುಕೊಂಡಿದ್ದೆ . ಏಕೆಂದರೆ ಆ ಸ್ಪೋಟಕ್ಕೆ ಗಾಂಧಿ ಪ್ರತಿಕ್ರಿಯಿಸಿಯೇ ಇರಲಿಲ್ಲ. ಏನೂ ಆಗಲೇ ಇಲ್ಲವೆಂಬಂತೆ ಅವರು ಪ್ರಾರ್ಥನೆಯನ್ನೂ ಮುಂದುವರಿಸಿದ್ದರು. ಅದು ಬಾಂಬ್ ಸ್ಪೋಟವೆಂದು ಮರುದಿನದ ಪತ್ರಿಕೆಗಳಿಂದಲೇ ನನಗೆ ಗೊತ್ತಾದದ್ದು.

ಗಾಂಧಿಯವರು ಆ ಸಂದರ್ಭದಲ್ಲಿ ನುಡಿದಿದ್ದ ಮಾತುಗಳನ್ನು ನೆನಪಿಸಿಕೊಂಡೆ. ‘ಹಿಂದೂಗಳು ಹಾಗೂ ಮುಸ್ಲಿಮರು ನನ್ನ ಎರಡು ಕಣ್ಣುಗಳು’ ಆದರೆ ಮತಾಂಧ ಹಿಂದೂ ಒಬ್ಬ ಸದ್ದಡಗಿಸಿದಂತಹ ಗಾಂಧಿಯ ಧನಿಯನ್ನು ರಾಷ್ಟ್ರ ಕೇಳಿಸಿಕೊಳ್ಳುವುದೇ? ಬಹು ಸಂಸ್ಕೃತಿಯನ್ನು ಪೋಷಿಸುವ ಗಾಂಧಿಯವರ ಧ್ಯೇಯ ಅವರ ಬಲಿದಾನದ ನಂತರವಾದರೂ ನನಸಾಗುವುದೇ? ಸದ್ಯಕ್ಕಂತೂ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು – ಹೀಗೆ ವಿಭಿನ್ನ ಧಾರ್ಮಿಕ ಸಮುದಾಯದವರನ್ನು ಗಾಂಧೀಜಿ ಒಂದೇ ಶೋಕ ಸಾಗರದಲ್ಲಿ ಮಳುಗಿಸಿ ಬಿಟ್ಟಿದ್ದರು. ಅವರೆಲ್ಲರೂ ಬಾಪುವನ್ನು ಕಳೆದುಕೊಂಡದ್ದಕ್ಕಾಗಿ ಸಾಮೂಹಿಕವಾಗಿ ದುಃಖಿಸುತ್ತಿದ್ದರು.

ಗಾಂಧಿ ನಿರ್ಮಿಸಲು ಯತ್ನಿಸಿದ ಬಹು ಸಂಸ್ಕೃತಿಯ ಸಮಾಜವನ್ನು ನಾಶ ಮಾಡಲು ಕುತಂತ್ರಿಗಳು, ಭಯೋತ್ಪಾದಕರು , ಮತಾಂಧರು ಎಲ್ಲೆಲ್ಲಿಂದಲೋ ಬಂದರು. ಕೋಮುವಾದದ ಬೆಂಕಿ ಹೊತ್ತಿಕೊಂಡು ಉರಿಯಿತು. ಅದು ಗಾಂಧೀಜಿಯ ಜೀವನವನ್ನೇ ಬಲಿ ತೆಗೆದುಕೊಂಡಿದ್ದು ಪರಿಸ್ಥಿತಿಯ ವ್ಯಂಗ್ಯ. ಆಘಾತಗೊಂಡಿದ್ದ ರಾಷ್ಟ್ರ ಗಾಂಧೀಜಿ ಒದಗಿಸಿದ್ದ ಬೆಳಕಿಗಾಗಿ ಕತ್ತಲಲ್ಲಿ ತತ್ತರಿಸಿತು. ಪಾಪ ಪ್ರಜ್ಞೆಯ ಭಾವನೆಯೂ ಇತ್ತು ದ್ವೇಷ ಎಂಬುದು ಜನರನ್ನೂ ಹೇಗೆ ಕುರುಡಾಗಿಸುತ್ತದೆ ಎಂಬ ಅರಿವು ಉಂಟಾಗಿತ್ತು.

ನಾನು ವಾಪಸ್ ಆದಾಗ ನನ್ನ ಕಛೇರಿಯ ಡೆಸ್ಕಿನಲ್ಲಿ ಮಂಕು ಆವರಿಸಿತ್ತು. ನಾನು ಯಾರೊಂದಿಗೂ ಮಾತನಾಡಲಿಲ್ಲ. ನಮಗೆ ಭವಿಷ್ಯದ ಬಗ್ಗೆ ಭೀತಿಯಾಗಿತ್ತು. ಸುದ್ದಿ ಬರೆಯಲು ಕುರ್ಚಿಯಲ್ಲಿ ಕುಳಿತ ನನ್ನ ಏಕಾಗ್ರತೆಗೆ ಯಾರೂ ಭಂಗ ಉಂಟು ಮಾಡಲಿಲ್ಲ. ಹೇಳಲು ಹಲವು ವಿಚಾರಗಳಿದ್ದವು. ನನ್ನ ಕೈಗಳು ನಡುಗುತ್ತಿದ್ದವು ಪೆನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಾನು ಬರೆದ ಕೆಲವು ಪದಗಳು ಕಣ್ಣೀರಿನಲ್ಲಿ ಕಲೆಸಿ ಹೋಗಿ ಚಿತ್ತಾದವು. ಸಂಪಾದಕರು ನನ್ನನ್ನು ಕರೆದು ನಿನೇನು ಬರೆದಿದ್ದಿಯಾ ನಿಧಾನವಾಗಿ ಹೇಳು ಎಂದರು ನನಗೆ ಅಳು ಒತ್ತರಿಸಿ ಬಂತು. ನನ್ನನ್ನು ನಾನು ಸಂಬಾಳಿಸಿಕೊಂಡು ಕಾಪಿಯನ್ನು ಫೈಲ್ ಮಾಡಲು ಸ್ವಲ್ಪ ಸಮಯವೇ ಬೇಕಾಯಿತು.

ನನ್ನ ವರದಿ ಈ ರೀತಿ ಇತ್ತು. ‘ಮಹಾತ್ಮ ಗಾಂಧಿ ಇನ್ನಿಲ್ಲ. ಅವರನ್ನು ಹಿಂದೂ ಮತಾಂಧ ನಾಥೂರಾಮ ಗೋಡ್ಸೆ ಹತ್ಯೆ ಮಾಡಿದ. ಆದರೆ ಅದಕ್ಕಿಂತ ಹೆಚ್ಚಿನದನ್ನು ಆತ ಮಾಡಿದ ಅಂದರೆ ಧರ್ಮದ ಹೆಸರಲ್ಲಿನ ಎಲ್ಲಾ ಹುಚ್ಚುತನವನ್ನು ಆತ ಪುನರುಜ್ಜೀವನಗೊಳಿಸಿದ. ಈ ಕೃತ್ಯದಲ್ಲಿ ಗೋಡ್ಸೆ ಒಂಟಿಯಾಗಿರಲಿಲ್ಲ. ಭಾರತದ ಜಾತ್ಯಾತೀತ ಭಾವನೆಗಳನ್ನು ನಾಶ ಮಾಡುವಂತಹ ಬಹು ದೊಡ್ಡ ಸಂಚು ಅವನ ಹಿನ್ನಲೆಯಲ್ಲಿ ಇತ್ತೆಂದು ಸರ್ಕಾರ ನಂಬಿತು. ಗೋಡ್ಸೆಯ ಹಿಂದೆ ಹಿಂದೂ ಮಹಾಸಭಾ ಇತ್ತೆಂದು ಭಾವಿಸಲಾಯಿತು.

ಸಂಜೆ ನಾಲ್ಕರ ಸುಮಾರಿಗೆ ಗಾಂಧೀಜಿ ತಮ್ಮ ಕೋಣೆಯಿಂದ ಸ್ವಲ್ಪ ತಡವಾಗಿ ಪ್ರಾರ್ಥನಾ ಸಭೆಗೆ ನಡೆದು ಬರುತ್ತಿದ್ದರು. ಅರ್ಧ ದಾರಿಯಲ್ಲೇ ಗೋಡ್ಸೆ ಅವರ ಮೇಲೆ ಗುಂಡು ಹಾರಿಸಿದಾಗ ‘ಹೇ ರಾಮ್ ರಾಮ್’ ಎಂದು ಕೂಗುತ್ತಾ ಅವರು ಕೆಳಗೆ ಬಿದ್ದರು. ನನಗೆ ಮುಂದೆ ಬರೆಯಲಾಗಲಿಲ್ಲ. ನನ್ನ ವರದಿಗೆ ವಾರ್ತಾ ಸಂಸ್ಥೆಯಿಂದ ತೆಗೆದುಕೊಂಡ ಮಾಹಿತಿಯನ್ನು ಸೇರಿಸಲಾಯಿತು.

ನನಗೆ ಎಷ್ಟೊಂದು ದುಃಖ, ಆಕ್ರೋಶ ಉಂಟಾಗಿತ್ತೆಂದರೆ ಸಂಪಾದಕರು ನೀಡಿದ್ದ ಮತ್ತೊಂದು ವರದಿಯನ್ನು ನಾನು ಅನುವಾದ ಮಾಡಲಾಗಲಿಲ್ಲಾ. ಗೋಡ್ಸೆಯ ಊರಾದ ಪೂನಾದಲ್ಲಿ ಉಂಟಾದ ಕೋಮು ಗಲಭೆಯನ್ನು ಕುರಿತ ವರದಿ ಅದು. ನನ್ನ ಭಾವೋದ್ವೇಗ ಎಷ್ಟು ತೀವ್ರವಾಗಿತ್ತೆಂದರೆ, ಗಲಭೆಗಳ ಬಗ್ಗೆ ನನಗೆ ಎನನ್ನಾದರೂ ಕೇಳುವುದಾಗಲಿ , ಓದುವುದಾಗಲಿ, ಬರೆಯುವುದಾಗಲಿ ಬೇಡವಾಗಿತ್ತು.
ಗಲಭಗೆಳಿಗೆ ಗಾಂಧಿ ಬಲಿ ಪಶುವಾಗಿದ್ದರು.

ಓದುಗರಿಗೆ ಮತ್ತೊಂದು ಕೋಮು ಗಲಭೆಯ ಬಗ್ಗೆ ನಾನ್ಯಾಕೆ ಹೇಳಲಿ? ಆದರೆ ಪತ್ರಿಕೆಗೆ ಆ ಸುದ್ದಿ ‘ಮಿಸ್’ ಆಯಿತು. ಮರುದಿನ ಬೆಳಿಗ್ಗೆ ಸಂಪಾದಕರು ನನ್ನನ್ನು ಕರೆದರು. ವಾಗ್ದಂಡನೆಗಾಗಿ ಅಲ್ಲ. ಪತ್ರಿಕೋದ್ಯಮದಲ್ಲೇ
ಉಳಿಯಬೇಕೆಂದಿದ್ದರೆ ಮೊದಲು ಘಟನಾವಳಿಗಳ ವರದಿ ಮಾಡಬೇಕೆನ್ನುವುದನ್ನ ತಿಳಿ ಹೇಳುವುದಕ್ಕೆ. ಭಾವನೆಗಳು ನನ್ನ ನಿರ್ಧಾರಗಳ ಮೇಲೆ ಸವಾರಿ ಮಾಡಬಾರದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಸಂಪಾದಕರು ಹೇಳುತ್ತಿರುವುದು ಸರಿ ಎಂದು ನನಗಾಗ ಅರ್ಥವಾಯಿತು. ಮನಸ್ಸು ಗಟ್ಟಿ ಆಯಿತು. ಪತ್ರಿಕೋದ್ಯಮದಲ್ಲೇ ಉಳಿಯಲು ನಿರ್ಧರಿಸಿದೆ.‌ಗಾಂಧೀಜಿಯ ಮೌಲ್ಯಗಳನ್ನು ಬಿತ್ತರಿಸುವ ವೃತ್ತಿ ಇದು. ಆದರೆ ಈ ಕಾರ್ಯದಲ್ಲಿ ನಾನು ಯಶಸ್ವಿಯಾದೆನೇ?

ಆಮೇಲೆ ಅನೇಕ ಕೋಮು ಗಲಭೆಗಳನ್ನು ವರದಿ ಮಾಡಿದ್ದೇನೆ. ಆದರೆ ಪ್ರತಿ ಬಾರಿಯೂ ಹಿಂದೂಗಳು ಮುಸ್ಲಿಮರು ತಮ್ಮ ಎರಡು ಕಣ್ಣುಗಳು ಎಂದು ಹೇಳಿದ ಗಾಂಧೀಜಿಯವರ ಮಾತುಗಳು ಎಂದಿಗೆ ನಿಜವಾಗುತ್ತವೆ ಎಂದು ಯೋಚಿಸಿದ್ದೇನೆ. ವಿಭಿನ್ನ ಸಮುದಾಯಗಳು ಪೂರ್ವಗ್ರಹಗಳನ್ನು ಬಿಟ್ಟು ಬಿಡುವುದಾದರೂ ಹೇಗೆ? ಗಾಂಧೀಜಜಿಯವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯುವುದು ಎಂದು ಸಾದ್ಯವಾಗುತ್ತದೆ ನಮಗೆ? ತಪ್ಪು ಮಾರ್ಗ ಸರಿಯಾದ ಫಲಿತಾಂಶ ನೀಡುವುದಿಲ್ಲವೆಂದೂ ಗಾಂಧೀಜಿ ನಮ್ಮಲ್ಲಿ ಬಿತ್ತಲು ಪ್ರಯತ್ನಿಸಿದ ಸಂದೇಶವನ್ನೂ ವ್ಯಾಪಕವಾಗಿ ಹರಡುವಲ್ಲಿ ಕೂಡಾ ನಾವು ಯಶಸ್ವಿಯಾಗುವುದು ಎಂದಿಗೆ?

ಕುಲದೀಪ್ ನಯ್ಯರ್
(ಸ್ಕೂಪ್ ಅಂಕಣದಲ್ಲಿ ಬರೆದ ಲೇಖನ)

ಜಿಲ್ಲೆ

ರಾಜ್ಯ

error: Content is protected !!