Thursday, September 19, 2024

ಧರ್ಮಾತೀತ ಭಾರತದ ನಾಯಕನಿಗೆ ಧರ್ಮಾಧಾರಿತ ಪಾಕಿಸ್ತಾನ ಕೊಟ್ಟಿದ್ದೇನು? ಇತಿಹಾಸದ ಅಜ್ಞಾತ ನಾಯಕನ ದುರಂತ ಕಥೆ

ಬ್ರಿಟಿಷರ ಒಡೆದು ಆಳುವ ನೀತಿ:ಭಾರತದಲ್ಲಿ ಎಲ್ಲಿಯವರೆಗೂ ಜಾತೀಯತೆ ಎಂಬುದು ಇರುತ್ತದೆಯೋ ಅಲ್ಲಿಯವರೆಗೂ ಭಾರತೀಯತೆ ಎಂಬುದು ಇರುವುದಿಲ್ಲ. ಎಲ್ಲಿಯವರೆಗೂ ಭಾರತೀಯತೆ ಎಂಬುದು ಇಲ್ಲಿ ಇರುವುದಿಲ್ಲವೋ ಅಲ್ಲಿಯವರೆಗೂ ನಾವು ಈ ದೇಶವನ್ನು ಆಳಲು ಅಡ್ಡಿಯಿಲ್ಲ ಎಂಬುದು ಬ್ರಿಟಿಷ್ ಸರ್ಕಾರದ ಸ್ಪಷ್ಟ ನಿಲುವಾಗಿತ್ತು. ಹಾಗಾಗಿಯೇ ಜಾತೀಯತೆಯನ್ನು ಪೋಷಿಸಲು ಅವರು ಇನ್ನಿಲ್ಲದ ಸರ್ಕಸ್ ಮಾಡಿದರು.ಅದರಲ್ಲಿ ಯಶಸ್ಸು ಕಂಡರೂ ಕೂಡ.

ಆದರೆ ಅವರು ನಮ್ಮ ದೇಶವನ್ನು ಬಿಟ್ಟು ಹೋಗಿ 75 ವರ್ಷಗಳಾದರೂ, ಅವರ ಒಡೆದು ಆಳುವ ನೀತಿಯೇ ಇನ್ನೂ ಚಾಲ್ತಿಯಲ್ಲಿರುವುದು ನಮ್ಮ ಸಮಾಜದ ದುರಂತಮಯ ಬದುಕಿಗೆ ಸಾಕ್ಷಿಯಾಗಿದೆ. ನಮ್ಮ- ನಮ್ಮಗಳ ನಡುವಿನ ದ್ವೇಷ- ಅಸೂಯೆ, ಆರೋಪ- ಪ್ರತ್ಯಾರೋಪಗಳು ನಿರಂತರವಾಗಿ ಸಾಗುತ್ತಲೇ ಇವೆ.ಅಂದು ಬ್ರಿಟಿಷರು ಇದನ್ನು ಪೋಷಿಸಿದರೆ, ಇಂದು ಕಾಂಗಿ-ಕಮ್ಯುನಿಸ್ಟ್ ಗಳು,ಕೆಲವು ಸೋ ಕಾಲ್ಡ್ ಬು(ಲ)ದ್ದಿ ಜೀವಿಗಳು ಇದನ್ನು ಪೋಷಿಸುತ್ತಿದ್ದಾರೆ.

ಈ ಸೋಕಾಲ್ಡ್ ಗಳಿಂದ ದಲಿತ ಮತ್ತು ಮುಸ್ಲಿಮರನ್ನು ಒಟ್ಟುಗೂಡಿಸಿ, ಇತರರಿಗೆ ಮುಖಾಮುಖಿಯಾಗಿಸುವ ಅತಿರೇಕದ ವ್ಯರ್ಥಪ್ರಯತ್ನವೂ ನಡೆದಿದೆ. ತಮ್ಮ ಈ ಪ್ರಯತ್ನದಲ್ಲಿ ಕೆಲವೊಮ್ಮೆ ಇವರು ಸಫಲರಾದರೂ, ಒಟ್ಟಾರೆಯಾಗಿ ಈ ಪ್ರಯತ್ನ ಕೈಗೂಡದಿರುವುದು ಎದ್ದು ಕಾಣುತ್ತದೆ. ಕಳೆದ 75 ವರ್ಷಗಳಿಂದ ಇವರ ಆಟವನ್ನು ನೋಡಿಕೊಂಡು ಬಂದಿರುವ ದಲಿತ ಮತ್ತು ಮುಸ್ಲಿಂ ಪ್ರಬುದ್ಧ ಮನಸ್ಸುಗಳು, ಇವರ ಕಪಟ ನಾಟಕಕ್ಕೆ ಸೊಪ್ಪಾಕದಿರುವುದು ಈ ವಿಫಲತೆಗೆ ಕಾರಣವಾಗಿದೆ.

ಜೋಗೇಂದ್ರನಾಥ್‌ ಮಂಡಲ್‌ ಎಂಬ ಪ್ರತಿಭಾವಂತ ದಲಿತ ನಾಯಕ

ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಅತಾಚುರ್ಯದಿಂದ ಇಂತಹ ಪ್ರಯತ್ನ ಆರಂಭಿಸಿದ ದಲಿತ ಮುಖಂಡರೊಬ್ಬರ ದುರಂತ ಬದುಕು ಎಲ್ಲರಿಗೂ ಪಾಠವಾಗಬೇಕಿದೆ.ಅದು ಅಂಬೇಡ್ಕರ್ ರಷ್ಟೇ ಪ್ರತಿಭಾವಂತ ದಲಿತ ನಾಯಕರಾಗಿದ್ದ ಜೋಗೇಂದ್ರನಾಥ್‌ ಮಂಡಲ್‌ ಅವರದು. ಅಂಬೇಡ್ಕರ್‌ ಅವರಿಗೆ ಸರಿಸಮನಾದ ದಲಿತ ಪರ ಹೋರಾಟದ ವಕ್ತಾರರಾಗಿದ್ದ ಮಂಡಲ್ ರವರಿಗಾದ ಭ್ರಮನಿರಸನ ಮತ್ತು ಅವರನ್ನು ತೆರೆಮರೆಗೆ ಸರಿಸಿದವರು ಯಾರು? ಎನ್ನುವ ಸತ್ಯ ಇದೀಗ ಅನಾವರಣಗೊಳ್ಳಬೇಕಿದೆ. ಆ ಮೂಲಕ ದಲಿತೋದ್ಧಾರದ ಮುಖವಾಡ ಧರಿಸಿರುವ ಕಾಂಗ್ರೆಸ್ ನ ನಿಜ ಸಂಸ್ಕೃತಿಯ ಬಣ್ಣ ಕೂಡ ಅನಾವರಣಗೊಳ್ಳಬೇಕಿದೆ.

ಜೋಗೇಂದ್ರನಾಥ ಮಂಡಲ್

ಆಗಿನ ಬಂಗಾಳ ಪ್ರೆಸಿಡೆನ್ಸಿ , ಬ್ರಿಟಿಷ್ ಇಂಡಿಯಾ , ನಂತರ ಪೂರ್ವ ಬಂಗಾಳ ಮತ್ತು ಪೂರ್ವ ಪಾಕಿಸ್ತಾನದ(ಇಂದಿನ ಬಾಂಗ್ಲಾದೇಶ) ಬಾರಿಸಾಲ್‌ನಲ್ಲಿ 29 ಜನವರಿ 1904ರಲ್ಲಿ, ಹಿಂದುಳಿದ ಅಸ್ಪೃಶ್ಯ ಜನಾಂಗದ ನಾಮಶೂದ್ರ ಸಮುದಾಯದಲ್ಲಿ ಜನಿಸಿದ ಜೋಗೇಂದ್ರನಾಥ್‌ ಮಂಡಲ್‌ ರವರು ಅಂಬೇಡ್ಕರ್ ಅವರ ಅನುಯಾಯಿಯಾಗಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದವರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸದಸ್ಯರಾಗಿದ್ದ ಅವರು,ಅಂಬೇಡ್ಕರ್ ಅವರೊಡಗೂಡಿ ಬಂಗಾಳದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಶಾಖೆಯನ್ನು ಸ್ಥಾಪಿಸಿದರು.

ಪರಿಶಿಷ್ಟ ಜಾತಿಗಳ ಒಕ್ಕೂಟವು, ಮೇಲ್ಜಾತಿಯವರಿಂದ ತುಳಿತಕ್ಕೊಳಗಾಗಿದ್ದೇವೆಂದು ಆರೋಪಿಸಿ, ಹಿಂದೂ ಮಹಾಸಭಾದ ವಿರುದ್ಧ ಸಂಘರ್ಷಕ್ಕಿಳಿಯಿತು. ಬಂಗಾಳದಲ್ಲಿ ಸಾಮಾಜಿಕ ಕ್ಷೋಭೆಗೆ ಕಾರಣವಾಗಿದ್ದ ಹಿಂದೂ- ಮುಸ್ಲಿಂ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಶತ್ರುವಿನ ಶತ್ರು ಮಿತ್ರ ಎಂಬಂತೆ, ಮಂಡಲ್ ರವರು ಮೇಲ್ಜಾತಿಯವರ ವಿರುದ್ಧದ ದ್ವೇಷದಿಂದ, ಮುಸ್ಲಿಮರೊಂದಿಗೆ ಬಾಂಧವ್ಯ ಬೆಳೆಸಿದರು. ಆ ಪ್ರಾಂತ್ಯದ ರಾಜಕೀಯ ಅಧಿಕಾರಕ್ಕಾಗಿ ಮುಸ್ಲಿಂಲೀಗನ್ನು ಬೆಂಬಲಿಸಿದರು.1937 ರಲ್ಲಿ ಭಾರತೀಯ ಪ್ರಾಂತೀಯ ಅಸೆಂಬ್ಲಿ ಚುನಾವಣೆಯಲ್ಲಿ ಬಖರ್ಗಂಜ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಶಾಲಿಯಾಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು.1940 ರಲ್ಲಿ ಅವರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಿಂದ ವಜಾಗೊಳಿಸಲಾಯಿತು.ಕೂಡಲೇ ಮುಸ್ಲಿಂಲೀಗ್ ಪಕ್ಷವನ್ನು ಸೇರಿದ ಅವರು ಆಗಿನ ಪೂರ್ವ ಬಂಗಾಳದ ಮುಸ್ಲಿಂಲೀಗ್‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹುಸೇನ್ ಶಹೀದ್ ಸುಹ್ರವರ್ದಿ ಅವರ ಸಂಪುಟದಲ್ಲಿ ಸಚಿವರಾದರು.

1946 ರ ಅಕ್ಟೋಬರ್ ನಲ್ಲಿ ರಚನೆಯಾದ ಭಾರತದ ಮಧ್ಯಂತರ ಸರ್ಕಾರದಲ್ಲಿ ಮುಸ್ಲಿಂಲೀಗ್ ಭಾಗಿಯಾದಾಗ, ಅದರ ಅಧ್ಯಕ್ಷರಾಗಿದ್ದ ಜಿನ್ನಾ ಅವರು ಲೀಗ್‌ನ ಐದು ಪ್ರತಿನಿಧಿಗಳಲ್ಲಿ,ಮಂಡಲ್ ಅವರನ್ನು ಒಬ್ಬರನ್ನಾಗಿ ನಾಮನಿರ್ದೇಶನ ಮಾಡಿದರು. ಕಾನೂನು ಪೋರ್ಟ್ಫೋಲಿಯಾದ ಜವಾಬ್ದಾರಿ ಅವರದಾಯಿತು.
ಅದೇ ವೇಳೆಗೆ ಆರಂಭವಾದ ಹಿಂದೂ- ಮುಸ್ಲಿಮರ ನಡುವಿನ ಕೋಮು ಸಂಘರ್ಷದಲ್ಲಿ,ಮುಸ್ಲಿಮರ ವಿರುದ್ಧ ಹೋರಾಡಬಾರದೆಂದು ದಲಿತರಲ್ಲಿ ತಿಳುವಳಿಕೆ ಮೂಡಿಸಲು ಮಂಡಲ್ ರವರು ಪೂರ್ವಬಂಗಾಳದಾದ್ಯಂತ ಪ್ರವಾಸ ಕೈಗೊಂಡರು.

ದೇಶ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಆಗಿದ್ದೇನು?

15 ಆಗಸ್ಟ್ 1947 ರಂದು ಭಾರತ ಸ್ವತಂತ್ರವಾಯಿತು. ಅಂಬೇಡ್ಕರ್ ರವರ ವಿರೋಧದ ನಡುವೆಯೂ,ನೆಹರು ರವರ ಕುತಂತ್ರದಿಂದ ಇದು ಜಾತ್ಯಾತೀತ ಭಾರತವಾಯಿತು. ಆದರೆ ಅದರೊಟ್ಟಿಗೆ ವಿಭಜನೆಯಾಗಿ ರಚನೆಯಾದ ಪಾಕಿಸ್ತಾನ ಧರ್ಮಾಧಾರಿತ ದೇಶವಾಯಿತು.ಮೊದಲೇ ನಿರ್ಧಾರಿತವಾದಂತೆ ಪಾಕಿಸ್ತಾನದ ಪ್ರಧಾನಿಯಾಗಿ ಲಿಯಾಖತ್ ಅಲಿ ಖಾನ್ ಆಯ್ಕೆಯಾದರು.ಮಂಡಲ್ ಅವರನ್ನು ಪಾಕಿಸ್ತಾನದ ಮೊದಲ ಕಾನೂನು ಮತ್ತು ಕಾರ್ಮಿಕ ಖಾತೆ ಮಂತ್ರಿಯಾಗಿ ನೇಮಿಸಲಾಯಿತು. ಆ ಮೂಲಕ ಒಂದು ದಶಕದ ಭಾರತದ ರಾಜಕೀಯ ವೃತ್ತಿಜೀವನ (1937-1947) ವನ್ನು ತೊರೆದು, ಪಾಕಿಸ್ತಾನದ ಪೌರತ್ವ ಪಡೆದು, ಅಲ್ಲಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ಪಾಕಿಸ್ತಾನದ 96 ಸಂಸ್ಥಾಪಕರಲ್ಲಿ ಒಬ್ಬರಾಗಿ ಸೇರ್ಪಡೆಗೊಂಡರು.

ಕ್ರಮೇಣ ಪಾಕಿಸ್ತಾನದ ನಿಜ ಬಣ್ಣ ಬಯಲಾಗತೊಡಗಿತು. ಮಂಡಲ್ ರವರು ತಮಗರಿವಿಲ್ಲದೆ ಮೋಸಕ್ಕೊಳಗಾದ ವಿಚಾರ ಅವರ ಅರಿವಿಗೆ ಬರತೊಡಗಿತು.ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಅಲ್ಲಿನ ಮುಸ್ಲಿಮರು ದೌರ್ಜನ್ಯ ನಡೆಸ ತೊಡಗಿದರು.ದಿನ ಕಳೆದಂತೆ ಇದು ಹೆಚ್ಚಾಗತೊಡಗಿತು. ಮೊದಮೊದಲು ಮೇಲ್ಜಾತಿಯ ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಕ್ರಮೇಣ ದಲಿತರನ್ನು ಒಳಗೊಂಡು ಎಲ್ಲಾ ಹಿಂದೂಗಳಿಗೂ ವಿಸ್ತರಿಸತೊಡಗಿತು.ಮಂಡಲ್ ರವರು ಇದನ್ನು ಪ್ರಧಾನಿ ಲಿಯಾಖತ್ ಅಲಿ ಖಾನ್ ರವರ ಗಮನಕ್ಕೆ ತಂದರು. ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ಸಿಕ್ಕರೂ ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಾ ಹೋದಂತೆ, ಕ್ರಮಕ್ಕೆ ಮಂಡಲ್ ರವರ ಒತ್ತಾಯವೂ ಹೆಚ್ಚುತ್ತಾ ಹೋಯಿತು. ಇದರ ಪರಿಣಾಮವಾಗಿ ಮಂಡಲ್ ರವರ ಖಾತೆಯನ್ನು ಬದಲಾಯಿಸಲಾಯಿತು. ಪ್ರತಿಷ್ಠಿತ ಕಾನೂನು ಮತ್ತು ಕಾರ್ಮಿಕ ಖಾತೆಯಿಂದ ಅವರನ್ನು ಬದಲಾಯಿಸಿ, 1 ಅಕ್ಟೋಬರ್ 1949 ರಂದು ಕಾಮನ್ವೆಲ್ತ್ ಮತ್ತು ಕಾಶ್ಮೀರ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಯಿತು. ಇದು ದಲಿತ ನಾಯಕ ಮಂಡಲ್ ಅವರಿಗೆ ಪಾಕಿಸ್ತಾನ ಸರ್ಕಾರ ಮಾಡಿದ ಘನಘೋರ ಅಪಮಾನವಾಗಿತ್ತು. ಮಂಡಲ್ ರವರಿಗೆ ಇದೀಗ ಉಸಿರುಗಟ್ಟಿದ ಅನುಭವ.

ಪಾಕಿಸ್ತಾನದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಜೋಗೇಂದ್ರನಾಥ ಮಂಡಲ್

ಮುಸ್ಲಿಂ ಗಲಭೆಕೋರರ ದೌರ್ಜನ್ಯಕ್ಕೆ ಅಲ್ಲಿನ ಪೊಲೀಸರೇ ಬೆಂಗಾವಲಾಗಿ ನಿಲ್ಲುತ್ತಿರುವ ವಿಚಾರ ಮಂಡಲ್ ರವರ ಗಮನಕ್ಕೆ ಬಂತು. ಅಲ್ಲಿಯವರೆಗೂ ಆಕಸ್ಮಿಕವಾಗಿ ನಡೆಯುತ್ತಿರುವ ದೌರ್ಜನ್ಯಗಳೆಂದು ಭಾವಿಸಿದ್ದ ಮಂಡಲ್ ರವರಿಗೆ,ಇದು ಪೂರ್ವನಿಯೋಜಿತ ಸಂಚಿನ ಭಾಗವೆಂಬ ಅರಿವಾಯಿತು.ಯಾವ ಮಂಡಲ್ ರವರು ಪೂರ್ವ ಬಂಗಾಳದಲ್ಲಿ ಹಿಂದೂ- ಮುಸ್ಲಿಮರ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ, ದಲಿತರು ಮುಸ್ಲಿಮರ ವಿರುದ್ಧ ಭಾಗಿಯಾಗಬಾರದೆಂದು ಹೋರಾಟ ಮಾಡಿದ್ದರೋ, ಅದೇ ಮುಸ್ಲಿಮರು ಇಂದು ತಮಗೆ ರಕ್ಷಣೆ ನೀಡಿದ್ದ ದಲಿತರ ಮೇಲೆಯೇ ತಮ್ಮ ದೇಶದಲ್ಲಿ ದೌರ್ಜನ್ಯ ಎಸಗುತ್ತಿದ್ದದ್ದು ಮುಸ್ಲಿಂ ವ್ಯಕ್ತಿತ್ವದ ವಿರಾಟ್ ರೂಪವನ್ನು ಮಂಡಲ್ ರವರಿಗೆ ಪರಿಚಯಿಸಿತ್ತು.

ಬೇರೆ ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ತಗ್ಗಿಬಗ್ಗಿ ನಡೆಯುವಂತೆ ವರ್ತಿಸುವ ಮುಸ್ಲಿಮರು, ತಾವೇ ಸಾರ್ವಭೌಮರಾದಾಗ ಇತರ ಧರ್ಮೀಯರ ಮೇಲೆ ಮಾನವೀಯತೆಯ ಲವಲೇಶವನ್ನೂ ತೋರದೆ ನಿರ್ಲಜ್ಜವಾಗಿ, ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ಎಸಗುತ್ತಿದ್ದದ್ದು ಮಂಡಲ್ ಅವರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿತು. ತಮ್ಮ ಜೀವನದುದ್ದಕ್ಕೂ ದಲಿತರ ಹಿತಕ್ಕಾಗಿ ಹೋರಾಡಿದ ಮಂಡಲ್ ಅವರು ಇದೀಗ ಸುಮ್ಮನಿರಲಾಗಲಿಲ್ಲ.ಬಲವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.ಅದು ಅವರ ಮತ್ತು ಪ್ರಧಾನಿ ಲಿಯಾಖತ್ ಅಲಿ ಖಾನ್ ನಡುವೆ ಕಲಹಕ್ಕೆ ಕಾರಣವಾಯಿತು.

ಪಾಕಿಗಳ ಉದ್ದಟತನದಿಂದ ದೇಶಭ್ರಷ್ಟರಾದ ಮಂಡಲ್

ಸಾಮಾಜಿಕ ಅನ್ಯಾಯ ಮತ್ತು ಮುಸ್ಲಿಮೇತರ ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಪಕ್ಷಪಾತದ ಧೋರಣೆಯನ್ನು ಖಂಡಿಸಿ ಮಂಡಲ್ ರವರು 8 ಅಕ್ಟೋಬರ್ 1950 ರಂದು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸರ್ಕಾರ ಮಂಡಲ್ ರವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿತು. ಇದರಿಂದ ತಪ್ಪಿಸಿಕೊಳ್ಳಲು ಮಂಡಲ್ ರವರು ಭಾರತಕ್ಕೆ ಪಲಾಯನ ಮಾಡಬೇಕಾಯಿತು. ಆ ಮೂಲಕ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದ 5 ಪ್ರಸಿದ್ಧ ವ್ಯಕ್ತಿಗಳಲ್ಲಿ ಮಂಡಲ್ ರವರು ಒಬ್ಬರಾದರು.ಪಾಕಿಸ್ತಾನ ಸರ್ಕಾರ ಮಂಡಲ್ ರವರನ್ನು ದೇಶಭ್ರಷ್ಟ ಎಂದು ಘೋಷಿಸಿತು.

ಇದೆಲ್ಲವೂ ಭಾರತ ಸರ್ಕಾರದ ಗಮನಕ್ಕೆ ಬಂದರೂ ಪ್ರಧಾನಿ ನೆಹರೂರವರು ತುಟಿಪಿಟಿಕ್ಕೆನ್ನದೆ ಮೌನವಹಿಸಿದ್ದರು. ಹಿಂದೂಗಳ ವಿರುದ್ಧದ ದೌರ್ಜನ್ಯಕ್ಕೆ ಪ್ರತಿಭಟನೆಯ ರೂಪದಲ್ಲಿ ಎಚ್ಚರಿಕೆಯ ಸಂದೇಶವನ್ನು ಅವರು ಕಳಿಸಲಿಲ್ಲ. ದಲಿತ ನಾಯಕ ಮಂಡಲ್ ಅವರನ್ನು ದೇಶಭ್ರಷ್ಟಗೊಳಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಮಂತ್ರಿಮಂಡಲದಲ್ಲಿರುವ ಅಲ್ಪಸಂಖ್ಯಾತ ಸಚಿವರನ್ನು ಕೈಬಿಡುವ ಬೆದರಿಕೆಯನ್ನೊಡ್ಡಿದ್ದರೆ, ಪಾಕಿಸ್ತಾನ ಸರ್ಕಾರ ತಂತಾನೇ ದಾರಿಗೆ ಬರುತ್ತಿತ್ತು. ಆದರೆ ಎಲ್ಲದಕ್ಕೂ ನೆಹರೂರವರ ಮೌನವೇ ಉತ್ತರವಾಗಿತ್ತು.ಮೌನಂ ಸಮ್ಮತಿ ಲಕ್ಷಣಂ ಎಂಬಂತಾಗಿತ್ತು.

ಭಾರತ- ಪಾಕಿಸ್ತಾನಕ್ಕೆ ವ್ಯತ್ಯಾಸವೇನು?
ಆಗಿನ ನೆಹರೂ ಸರ್ಕಾರ ಮಾಡಿದ್ದೇನು?

1947 ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಯಾದಾಗ ಪಾಕಿಸ್ತಾನದಲ್ಲಿದ್ದ ಹಿಂದೂಗಳ ಸಂಖ್ಯೆ 22.45%. ಇಂದು ಅಲ್ಲಿನ ಹಿಂದೂಗಳ ಸಂಖ್ಯೆ 1.5%. ಬದಲಿಗೆ ನಮ್ಮ ದೇಶದಲ್ಲೇ ಉಳಿದಿದ್ದ ಮುಸ್ಲಿಮರ ಸಂಖ್ಯೆ 7.88%. ಇಂದು ಇಲ್ಲಿನ ಮುಸ್ಲಿಮರ ಸಂಖ್ಯೆ18.88%. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಏರಿಕೆ ಅನುಪಾತವನ್ನು ಗಮನಿಸಿದಾಗ, ಅದರ 15 ಪ್ರತಿಶತದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪಾಕಿಸ್ತಾನದದಲ್ಲಿನ ಹಿಂದೂಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದೇ, ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆದಿರುವ ಘನಘೋರ ದೌರ್ಜನ್ಯಗಳಿಗೆ ಕೈಗನ್ನಡಿಯಾಗಿದೆ.

ಪ್ರಮಾಣವಚನ ಬೋಧಿಸುತ್ತಿರುವ ಮೊಹಮ್ಮದ್ ಆಲಿ ಜಿನ್ನಾ

ಇದಕ್ಕೆಲ್ಲಾ ನೇರ ಹೊಣೆ ಆಗಿನ ಭಾರತ ಸರ್ಕಾರ. ನೆಹರೂರವರ ‘ಒಂದು ಕಣ್ಣಿಗೆ ಎಣ್ಣೆ,ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ತಪ್ಪು ನಿರ್ಧಾರ. ಇದಕ್ಕೆ ಉದಾಹರಣೆ ಬೇಕೆ?
ನೆಹರೂರವರು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಅಬುಲ್ ಕಲಾಂ ಆಜಾದ್(ಅವಧಿ: ಆಗಸ್ಟ್ 1947 – ಫೆಬ್ರವರಿ 1958) ಅವರನ್ನು ನೇಮಿಸಿಕೊಂಡರು. ಸುಮಾರು 11 ವರ್ಷಗಳ ಕಾಲ ನೆಹರೂ ಮಂತ್ರಿಮಂಡಲದಲ್ಲಿ ಅವರು ಶಿಕ್ಷಣಮಂತ್ರಿಗಳಾಗಿದ್ದರು. ಇದಿಷ್ಟೇ ಅಲ್ಲದೆ 1947-77 ರ ನಡುವಿನ 30 ವರ್ಷಗಳ ಅವಧಿಯಲ್ಲಿ 20 ವರ್ಷಗಳು ಅಲ್ಪಸಂಖ್ಯಾತರೇ ನಮ್ಮ ದೇಶದ ಶಿಕ್ಷಣ ಮಂತ್ರಿಗಳಾಗಿದ್ದರು.
ಮೌಲಾನಾ ಅಬುಲ್ ಕಲಾಂ ಆಜಾದ್ (ಅವಧಿ: ಆಗಸ್ಟ್ 1947 – ಫೆಬ್ರವರಿ 1958)
ಹುಮಾಯೂನ್ ಕಬೀರ್ (ಅವಧಿ: ಸೆಪ್ಟೆಂಬರ್ 1963 ರಿಂದ ನವೆಂಬರ್ 1963)
ಮೊಹಮ್ಮದಾಲಿ ಕರೀಮ್ ಚಾಗ್ಲಾ (ಅವಧಿ: ನವೆಂಬರ್ 1963 ರಿಂದ ನವೆಂಬರ್ 1966)
ಫಕ್ರುದ್ದೀನ್ ಅಲಿ ಅಹ್ಮದ್ (ಅವಧಿ: ನವೆಂಬರ್ 1966 ರಿಂದ ಮಾರ್ಚ್ 1967)
ಸೈಯಿದ್ ನೂರುಲ್ ಹಸನ್ (ಅವಧಿ: ಮಾರ್ಚ್ 1972 ರಿಂದ ಮಾರ್ಚ್ 1977)

ನೆರೆಯ ರಾಷ್ಟ್ರ ಹಿಂದೂ ಮಂತ್ರಿಯೊಬ್ಬರನ್ನು ಇನ್ನಿಲ್ಲದಂತೆ ಅಪಮಾನಗೊಳಿಸಿ, ಬಂಧನದ ವಾರಂಟ್ ಹೊರಡಿಸಿ, ದೇಶಭ್ರಷ್ಟರನ್ನಾಗಿ ಮಾಡಿದರೂ, ನೆಹರು ರವರಿಗೆ ಅದೇನೂ ಮಹತ್ವದ ವಿಚಾರವಾಗಿ ಕಾಣಿಸಲಿಲ್ಲ. ಹಾಗೂ ತಮ್ಮ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಬಿಡಲಿಲ್ಲ. ಅಲ್ಪಸಂಖ್ಯಾತರೆಡೆಗೆ ಈ ಪರಿಯ ಕುರುಡು ಪ್ರೀತಿ ನೆಹರೂರವರ ಆಂತರ್ಯದಲ್ಲಿ ಹುಟ್ಟಲು ಕಾರಣವೇನೆಂಬ ಒಗಟು ಇಂದಿಗೂ ಉಳಿದುಕೊಂಡಿದೆ,ಮೂಲದಲ್ಲಿ ನೆಹರೂರವರೂ ಕೂಡ ಮುಸ್ಲಿಮರೇ ಆಗಿರಬೇಕು ಎಂಬಷ್ಟು ಗಾಢವಾಗಿ.

ಇಷ್ಟೆಲ್ಲದರ ನಡುವೆಯೂ ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೊಂದಿದೆ. ದೇಶಭ್ರಷ್ಟರಾಗಿ ಈ ದೇಶಕ್ಕೆ ಮರಳಿದ ಮಂಡಲ್ ರವರನ್ನು, ಪ್ರಧಾನಿ ನೆಹರೂರವರು ಗೌರವಪೂರ್ಣವಾಗಿ ಸ್ವಾಗತಿಸಿ, ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಪಾಕಿಸ್ತಾನಕ್ಕೊಂದು ಸ್ಪಷ್ಟ ಸಂದೇಶವನ್ನು ಏಕೆ ಕೊಡಲಿಲ್ಲ? ಎಂಬುದು. ಹಾಗೆಯೇ ದಲಿತ ಜನಾಂಗದ ಬಗ್ಗೆ ನೆಹರೂರವರಿಗಿದ್ದ ಒಲವೆಷ್ಟು? ಎಂಬುದೂ ಕೂಡ. ಅಷ್ಟೇ ಏಕೆ? ಜೋಗೇಂದ್ರನಾಥ ಮಂಡಲ್ ಎಂಬ ಅಪ್ರತಿಮ ದಲಿತ ಹೋರಾಟಗಾರನನ್ನು ಇತಿಹಾಸದ ಅಜ್ಞಾತ ನಾಯಕನನ್ನಾಗಿಸಿದ್ದು ಏಕೆ? ಎಂಬುದೂ ಕೂಡ. ನೆಹರೂರವರ ಸಣ್ಣತನ,ಗೋಸುಂಬೆತನ ನಮಗೆಲ್ಲರಿಗೂ ವೇದ್ಯವಾಗುವುದು ಇಲ್ಲಿಯೇ.

ಈ ಎಲ್ಲಾ ನೋವುಗಳಲ್ಲಿ ಕೊರಗುತ್ತಲೇ ಮಂಡಲ್ ಅವರು 5 ಅಕ್ಟೋಬರ್ 1968 ರಂದು ಭಾರತದ ಪಶ್ಚಿಮ ಬಂಗಾಳದಲ್ಲಿ ದೇಶಭ್ರಷ್ಟರಾಗಿ ನಿಧನರಾದರು. ಸ್ವಾತಂತ್ರಾ ನಂತರ ಭಾರತದ ದುರಂತ ರಾಜಕಾರಣದ ಅಣಕವಾಗಿ ಇತಿಹಾಸದಿಂದ ಮರೆಮಾಚಲ್ಪಟ್ಟರು. ಸ್ವಾತಂತ್ರ್ಯ ಪಡೆದು 75 ವರ್ಷಗಳ ನಂತರವೂ ಇಂದಿಗೂ ಕೂಡ ದಲಿತ- ಮುಸ್ಲಿಂ ಸಮೀಕರಣದ ಸೂತ್ರ ಪಠಿಸುತ್ತಿರುವ ಕೆಲವು ಕುತಂತ್ರಿ ಕಾಂಗಿ-ಕಮ್ಯುನಿಸ್ಟ್ ರಾಜಕಾರಣಿಗಳಿಗೆ, ಸೋ ಕಾಲ್ಡ್ ಬು(ಲ)ದ್ದಿ ಜೀವಿಗಳಿಗೆ ಮಂಡಲ್ ರವರ ಜೀವನಗಾಥೆ ರಾಜಕಾರಣದ ಪಾಠವಾಗಲಿ ಎಂಬುದೇ ನಮ್ಮ ಆಶಯ.

 

ಲೇಖಕರು-ಮಣ್ಣೆ ಮೋಹನ್
M-6360507617
[email protected]

ಜಿಲ್ಲೆ

ರಾಜ್ಯ

error: Content is protected !!