Wednesday, July 24, 2024

ಲಿಂಗಾಯತರ ಹಿತಶತೃಗಳು ಯಾರು ?

ಸುದ್ದಿ ಸದ್ದು ನ್ಯೂಸ್

ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಕರ್ನಾಟಕದ ಅಭಿವೃದ್ಧಿಗೆ ವಿವಿಧ ಬಗೆಯಲ್ಲಿ ತನ್ನ ಕೊಡುಗೆಗಳನ್ನು ನೀಡಿದೆ. ಕರ್ನಾಟಕವು ಬಸವಣ್ಣ ˌ ಕನಕದಾಸˌ ಸರ್ವಜ್ಞ ˌ ಷರೀಫˌ ಕುವೆಂಪುರವರ ವಿಚಾರಧಾರೆಯ ನೆಲ. ಕನ್ನಡನಾಡು ಸೌಹಾರ್ದತೆˌ ಸಹಿಷ್ಣತೆ ಮತ್ತು ಸಹೋರತ್ವದ ನೆಲೆಬೀಡು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಸಿಷ್ಟ್ ಶಕ್ತಿಗಳು ಕರ್ನಾಟಕದ ನೆಲದಲ್ಲಿರುವ ಬಹು ಸಂಸ್ಕೃತಿಯ ಮೂಲ ಆಶಗಳನ್ನು ನಾಶಪಡಿಸಲು ಯತ್ನಿಸುತ್ತಿವೆ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಫ್ಯಾಸಿಷ್ಟ್ ಶಕ್ತಿಗಳನ್ನು ಮೊದಲಿನಿಂದಲೂ ದೂರವಿಡುತ್ತಲೆ ಬಂದಿದೆ. ಸ್ವತಂತ್ರಪೂರ್ವಕಾಲದಿಂದಲೂ ಲಿಂಗಾಯತ ಸಮುದಾಯವು ಇಲ್ಲಿನ ಶೂದ್ರ/ಅತಿಶೂದ್ರ ಸಮುದಾಯಗಳ ಹಿತಾಸಕ್ತಿಗೆ ಅನುಗುಣವಾಗಿ ಸ್ಪಂದಿಸುತ್ತ ಬಂದಿದೆ. ಆದರೆ ಇತ್ತೀಚಿನ ಕಾಜಕೀಯ ಕಾರಣಗಳಿಂದ ಲಿಂಗಾಯತ ಸಮುದಾಯ ತನ್ನ ಮೂಲ ಧ್ಯೇಯವನ್ನು ಮರೆತು ಕವಲು ಹಾದಿ ತುಳಿಯುತ್ತಿದೆ. ಈ ಲೇಖನದಲ್ಲಿ ರಾಜ್ಯ ಮತ್ತು ದೇಶಕ್ಕೆ ಲಿಂಗಾಯತ ಸಮುದಾಯದ ಕೊಡುಗೆಗಳು ಮತ್ತು ಅದಕ್ಕೆ ಕಾಲ್ತೊಡಕಾಗಿ ಕಾಡಿದ ಪುರೋಹಿತಶಾಹಿಗಳ ಹುನ್ನಾರಗಳ ಬಗ್ಗೆ ಇತಿಹಾಸ ಕಾಲದಿಂದ ಹಿಡಿದು ಇಲ್ಲಿಯ ತನಕ ಘಟಿಸಿದ ಅನೇಕ ಘಟನೆಗಳನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ.

ಕನ್ನಡ ನೆಲದಲ್ಲಿ ಪುರೋಹಿತಶಾಹಿಗಳಿಗೆ ಪ್ರತಿಧ್ವಂದ್ವಿಯಾಗಿ 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದದ್ದು ಕಲ್ಯಾಣದ ಸಮಗ್ರ ಕ್ರಾಂತಿ. ಸಮಾಜದ ಎಲ್ಲ ರಂಗಗಳಲ್ಲಿ ಸಮಾನತೆ ತರುವ ಉದ್ದೇಶದಿಂದ ನಡೆದ ವಚನ ಚಳುವಳಿಯಲ್ಲಿ ಪಾಲ್ಕೊಂಡದ್ದು ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದ ನೆಲಮೂಲದ ದಮನಿತ ಸಮುದಾಯದ ಶರಣರು. ಅನುಭವ ಮಂಟಪ ಸ್ಥಾಪನೆಯ ಮೂಲಕ ಸ್ತ್ರೀ-ಪುರುಷˌ ಬಡವ-ಬಲ್ಲಿದˌ ಉಚ್ಛ-ನೀಚಗಳ ಭೇದವಿಲ್ಲದೆ ನಡೆದ ವಚನ ಚಳುವಳಿ ಭಾರತದ ಮಣ್ಣಿನಲ್ಲಿ ಘಟಿಸಿದ ಮೊಟ್ಟ ಮೊದಲ ಜಾತ್ಯಾತ್ಯೀತ ಹಾಗು ಜನತಂತ್ರ ವ್ಯವಸ್ಥೆಯ ಬೀಜಾಂಕುರಕ್ಕೆ ಕಾರಣೀಭೂತವಾದ ಚಳುವಳಿ. ಈ ಚಳುವಳಿಯನ್ನು ಹತ್ತಿಕ್ಕಿ ಕೆಡಿಸಿದ್ದು ನಾರಾಯಣ ಕೃಮಿತˌ ಕೃಷ್ಣ ಪೆದ್ದಿ ˌ ಗೋವಿಂದ ಭಟ್ಟ ˌ ವಿಷ್ಣು ಭಟ್ಟ ಮುಂತಾದ ಪುರೋಹಿತಶಾಹಿಗಳು. ಇವರು ವಚನ ಚಳುವಳಿಯನ್ನು ಹತ್ತಿಕ್ಕಲು ಕಂಡುಕೊಂಡ ವಾಮಮಾರ್ಗ ರಕ್ತಪಾತ. ಕಲ್ಯಾಣದಲ್ಲಿ ಅಂದು ಅಸಖ್ಯಾತ ಶರಣರ ಹತ್ಯೆ ಮಾಡಲಾಗಿದ್ದು ಅಪಾರ ಪ್ರಮಾಣದ ವಚನ ಕಟ್ಟುಗಳು ನಾಶಪಡಿಸಲಾಗಿತ್ತು. ಲಿಂಗಾಯತ ಶರಣರ ನಡುವೆ ನಡೆದ ರಕ್ತಸಂಬಂಧವನ್ನು ವರ್ಣಸಂಕರವೆಂದು ಬಿಂಬಿಸಿ ಶರಣರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಕರ್ನಾಟಕದ ರಾಜ ಮನೆತನಗಳಲ್ಲಿ ಕಿತ್ತೂರು ಸಂಸ್ಥಾನಕ್ಕೆ ವಿಶೇಷ ಸ್ಥಾನವಿದೆ. 1765-1816 ರ ಕಾಲಾವಧಿಯಲ್ಲಿ ಕಿತ್ತೂರು ಸಂಸ್ಥಾನ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಕಂಡ ಕಾಲ. ರಾಣಿ ಚೆನ್ನಮ್ಮನ ಆಡಳಿತ ಜಾತ್ಯಾತೀತ ನೆಲೆಗಟ್ಟಿನಲ್ಲಿ ಕಾರ್ಯ ಮಾಡುತ್ತಿತ್ತು. ಅದಕ್ಕೆ ಉದಾಹರಣೆ ಸಂಗೊಳ್ಳಿ ರಾಯಣ್ಣ ರಾಣಿಯ ಅತ್ಯಂತ ವಿಶ್ವಾಸನೀಯ ಭಂಟನಾಗಿದ್ದು. ಹೀಗೆ ಬೆಳೆಯುತ್ತಿದ್ದ ಕಿತ್ತೂರು ಸಂಸ್ಥಾನ ಮುಂದೊಂದು ದಿನ ತಮಗೆ ಪ್ರತಿಸ್ಪರ್ಧಿಯಾಗಬಹುದೆಂದು ಸಂಸ್ಥಾನಕ್ಕೆ ಇನ್ನಿಲ್ಲದಂತೆ ತೊಂದರೆ ಕೊಟ್ಟದ್ದು ಪುಣೆಯ ಪೇಶ್ವೆಗಳುˌ ಅದರನ್ನು ಎರಡನೇ ಬಾಜಿರಾಯ. ಕಿತ್ತೂರಿಗೆ ಬೇಕಾದ ಆಡಳಿತಾತ್ಮಕ ಸಹಕಾರ ನಿಡುವುದು ಹೋಗಲಿˌ ಸಂಸ್ಥಾನದ ಅರಸರನ್ನು ಅಕ್ರಮವಾಗಿ ಬಂಧನಕ್ಕೊಳಪಡಿಸಿದ್ದು ಇದೇ ಪೇಶ್ವೆಗಳು. ಕಿತ್ತೂರಿನ ಗುಟ್ಟುಗಳನ್ನ ಮಲ್ಲಪ್ಪ ಶೆಟ್ಟಿಯ ಮೂಲಕ ಬ್ರಿಟೀಷರಿಗೆ ತಲುಪಿಸಿದ್ದು ಅಂದಿನ ಧಾರವಾಡದ ಡಿಸಿ ಕಚೇರಿಯಲ್ಲಿದ್ದ ವೆಂಕಟರಾವ್ ಹಾವೇರಿ ಎನ್ನುವ ಹೆಡ್ ಗುಮಾಸ್ತ. ಮಲ್ಲಪ್ಪ ಶೆಟ್ಟಿಯನ್ನು ಬಳಸಿಕೊಂಡು ಕಿತ್ತೂರು ಸಂಸ್ಥಾನದ ಮೇಲೆ ತನ್ನ ಹಿಡಿತ ಸಾದಿಸಿದ್ದ ಈ ವೆಂಕಟರಾವ್ ಹಾವೇರಿ. ಕಿತ್ತೂರು ಸಂಸ್ಥಾನವನ್ನು ದುರ್ಬಲಗೊಳಿಸಲು ಮೀರಜˌ ಜಮಖಂಡಿ ಮುಂತಾದ ಕಡೆಗೆ ಸಾಮಂತ ಸಂಸ್ಥಾನಿಕರಾಗಿದ್ದ ಪಟವರ್ಧನಗಳು ಮತ್ತು ಪುಣೆಯ ಪೇಶ್ವೆಗಳು.

ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಶಿಕ್ಷಣವು ಕೇವಲ ಕೆಲವೇ ಕೆಲವು ಜನರ ಕಪಿಮುಷ್ಟಿಯಲ್ಲಿದ್ದಾಗ ಲಿಂಗಾಯತ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಸರ್ವಜನಾಂಗಕ್ಕೆ ಸಿಗುವಂತೆ ಮಾಡಿದ್ದು ಸಣ್ಣ ಮಾತಲ್ಲ. ಆಗ ಲಿಂಗಾಯತರಿಗೆ ಕಾಲ್ತೊಡಕಾಗಿದ್ದು ಇದೇ ಪುರೋಹಿತಶಾಹಿಗಳು. 1930 ರ ದಶಕದಲ್ಲಿ ಬೆಳಗಾವಿಯ ಕೆ ಎಲ್ ಇ ಸಂಸ್ಥೆ ಲಿಂಗರಾಜ್ ಕಾಲೇಜು ಸ್ಥಾಪನೆಗೆ ಅಂದಿನ ಮುಂಬೈ ವಿವಿಗೆ ಅರ್ಜಿ ಹಾಕಿದಾಗ ಅದನ್ನು ಸಕಾರಣವಿಲ್ಲದೆ ಎರಡು ಬಾರಿ ನಿರಾಕರಿಸಿದ್ದು ಅಂದು ವಿವಿಯಲ್ಲಿ ಸೆನೆಟ್ ಸದಸ್ಯರಾಗಿದ್ದ ಪುಣೆಯ ಡೆಕ್ಕನ್ ಶಿಕ್ಷಣ ಸಂಸ್ಥೆಯ ಪದಾದಿಕಾರಿಗಳಾದ ಚಿತ್ಪಾವನ ಬ್ರಾಹ್ಮಣರು. ಅದಕ್ಕೆ ಕಾರಣ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಬ್ರಾಹ್ಮಣೇತರರಿಗೆ ಶಿಕ್ಷಣ ನೀಡುವುದೇ ಆಗಿತ್ತು ಎಂದು ಬೇರೆ ಹೇಳಬೇಕಿಲ್ಲ. ಅದರೊಂದಿಗೆˌ ಬೆಳಗಾವಿಯಂತ ಗಡಿಭಾಗದಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಬಾರದು ಎನ್ನುವುದೂ ಆಗಿತ್ತು. ಈ ಸಮಸ್ಯೆಯನ್ನು ಅಂದಿನ ಮುಂಬೈ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ನಿವಾರಿಸಿದ್ದು ನಾವು ಬಲ್ಲೆವು.

ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿಸಲು ಸಾಕಷ್ಟು ಶ್ರಮಿಸಿದ ಅರಟಾಳ್ ರುದ್ರಗೌಡರುˌ ಸರ್ ಸಿದ್ದಪ್ಪ ಕಂಬಳಿಯವರಿಗೆ ಬೆಂಬಿಡದೆ ಕಾಡಿದ್ದು ರೊದ್ದ ಶ್ರೀನಿವಾಸರಾಯನೆಂಬ ಇನ್ನೊಬ್ಬ ಪುರೋಹಿತ ಎನ್ನುವ ಸಂಗತಿ ನಾವು ನಮ್ಮ ಯುವ ಪೀಳಿಗೆಗೆ ತಿಳಿಸಿ ಹೇಳಬೇಕಿದೆ. ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಮೈಲಾರ ಮಹಾದೇವˌ ಚೆನ್ನಪ್ಪ ವಾಲಿಯಂತವರ ಹೆಸರು ಮುನ್ನೆಲೆಗೆ ಬರದಂತೆ ಈ ಪುರೋಹಿತಶಾಹಿಗಳು ನೋಡಿಕೊಂಡದ್ದು ನಾವು ಮರೆಯುವಂತಿಲ್ಲ. ಅಂದಿನ ದಿನಮಾನದಲ್ಲಿ ದಕ್ಷ ಜಿಲ್ಲಾಧಿಕಾರಿಯಾಗಿದ್ದ ಅರಟಾಳ್ ರುದ್ರಗೌಡರ ಬಗ್ಗೆ ಅಂದಿನ ಕೇಸರಿ ಮತ್ತು ಮರಾಠಿ ಪತ್ರಿಕೆಗಳಲ್ಲಿ ಸರಣಿ ಸುಳ್ಳು ಸುದ್ದಿಗಳು ಪ್ರಕಟಿಸಿ ಮುಖಭಂಗಕ್ಕೀಡಾಗಿದ್ದು ಪುಣೆಯ ಬಾಲಗಂಗಾಧರನಾಥ ಟಿಳಕ್ ಎಂಬ ಮತ್ತೊಬ್ಬ ಚಿತ್ಪಾವನ ಎನ್ನುವ ವಿಷಯ ನಾವು ಇನ್ನೂ ಹೆಚ್ಚೆಚ್ಚು ಯುವಕರಿಗೆ ಮುಟ್ಟಿಸಬೇಕಿದೆ. ಕರ್ನಾಟಕ ಏಕೀಕರಣಕ್ಕಾಗಿ ಧಾರವಾಡ ಜಿಲ್ಲೆಯ ಅದರಗುಂಚಿಯಲ್ಲಿ 23 ದಿನ ಉಪವಾಸ ಸತ್ಯಾಗ್ರಹ ಮಾಡಿ ಆಳುವ ವರ್ಗದ ಗಮನ ಸೆಳೆದದ್ದು ಅದರಗುಂಚಿ ಶಂಕರಗೌಡರು. ಆದರೆ ಶಂಕರಗೌಡರ ಹೆಸರನ್ನು ಹಿನ್ನೆಲೆಗೆ ಸರಿಸಿ ಮತ್ತಿನ್ಯಾರೊ ಕನ್ನಡದ ಕುಲಪುರೋಹಿತರ ಪಟ್ಟ ಅಲಂಕರಿಸಿದರು.

1871 ರ ಜನಗಣತಿಯಲ್ಲಿ ಲಿಂಗಾಯತರು ಮೈಸೂರು ಸಂಸ್ಥಾನದಲ್ಲಿ ಸ್ವತಂತ್ರ ಧರ್ಮಿಯರಾಗಿದ್ದರು. 1981 ರ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದ ಶೂದ್ರರ ಪಟ್ಟಿಗೆ ಸೇರಿಸಿದ್ಡು ಸಂಸ್ಥಾನದಲ್ಲಿ ಪ್ರಾಬಲ್ಯ ಹೊಂದಿದ್ದ ಅಯ್ಯಂಗಾರಿ ದಿವಾನರುಗಳು. ಅಂದಿನ ಮೈಸೂರು ಸಂಸ್ಥಾನದಲ್ಲಿ ರೈತ ವಿರೋಧಿ ಕೃಷಿ ತೆರಿಗೆ ಹಾಕುವ ಸಂಸ್ಥಾನದ ಅಯ್ಯಂಗಾರಿ ದಿವಾನರುಗಳ ನಿರ್ಧಾರವನ್ನು ವಿರೋಧಿಸಿದ್ದವರು ಆ ಭಾಗದ ಲಿಂಗಾಯತ ಜಂಗಮರು. ಮಾತುಕತೆಯ ನೆಪದಲ್ಲಿ ಜಂಗಮರನ್ನು ನಂಜನಗೂಡಿನ ಹಳ್ಳಿಯೊಂದಕ್ಕೆ ಕರೆಸಿ ಅಲ್ಲಿ ಅಸಂಖ್ಯಾತ ಜಂಗಮರ ಸಾಮೂಹಿಕ ಹತ್ಯೆ ಮಾಡಿಸಲಾಗಿತ್ತು. ಹತ್ಯೆ ಮಾಡಲಾದ ಜಂಗಮರ ತಲೆಗಳನ್ನು ಬಾವಿಯೊಂದರಲ್ಲಿ ಎಸೆಯಲಾಗಿತ್ತು. ಆದ್ದರಿಂದ ಆ ಹಳ್ಳಿಗೆ ಶಿರೋಬಾವಿ ಎಂದು ಹೆಸರು ಬಂದಿರುವ ಕುರಿತು ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ವಿಷಯ ತಲುಪಿಸಬೇಕಿದೆ. ಸಾಹಿತ್ಯˌ ಸಂಸ್ಕೃತಿˌ ಕಲೆˌ ಶಿಕ್ಷಣˌ ರಾಜಕೀಯˌ ಸಮಾಜಸೇವೆˌ ಹೀಗೆ ಎಲ್ಲ ರಂಗಗಳಲ್ಲೂ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶೃಮಿಸಿದ ಲಿಂಗಾಯತ ಸಮಾಜಕ್ಕೆ ಹೆಜ್ಜೆ ಹೆಜ್ಜೆಗೆ ಅಡಚಣಿ ಪಡಿಸಿದ್ದು ಪುರೋಹಿತಶಾಹಿ ವರ್ಗ. ಕರ್ನಾಟಕದಲ್ಲಿ ಬ್ರಿಟೀಷ್ ಆಡಳಿತ ಕಾಲದಲ್ಲಿ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗದೆ ಹೋಗಿದ್ದರೆ ರಾಜ್ಯದ ಸ್ಥಿತಿ ಬಹುಶಃ ಉತ್ತರ ಭಾರತದ ಸ್ಥಿತಿಗಿಂತ ಭಿನ್ನವಾಗಿರುತ್ತಿರಲಿಲ್ಲ.

ಸ್ವಾತಂತಾನಂತರ ಕರ್ನಾಟಕದ ರಾಜಕೀಯ ಕ್ಷೇತ್ರದ ಮೇಲೆ ಲಿಂಗಾಯತ ಮತ್ತು ವಕ್ಕಲಿಗ ಸಮುದಾಯಗಳ ಹಿಡಿತ ಬಹಳಷ್ಟು ದಿನ ಇತ್ತು. ಅದರೊಂದಿಗೆ ಹಿಂದುಳಿದ ವರ್ಗಗಳ ರಾಜಕೀಯ ನಾಯಕರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬೆಳೆದುಬಂದರು. ಆದರೆ ಜನತಾ ಪರಿವಾರ ಛಿದ್ರಗೊಂಡ ಮೇಲೆ ಲಿಂಗಾಯತ ಸಮುದಾಯದ ಸ್ವಾರ್ಥಿ ರಾಜಕಾರಣಿಗಳಿಗೆ ಫ್ಯಾಸಿಷ್ಟರು ಗಾಳ ಹಾಕಿದರು. ಲಿಂಗಾಯತ ರಾಜಕಾರಣಿಗಳು ಮತ್ತು ತತ್ವರಹಿತ ಮಠಾಧೀಶರ ಮೂಲಕ ಕರ್ನಾಟಕದಲ್ಲಿ ಫ್ಯಾಸಿಷ್ಟರು ಬಾಲ ಬಿಚ್ಚಲು ಆರಂಭಿಸಿದರು. ಆನಂತರ ಲಿಂಗಾಯತ ಸಮುದಾಯವನ್ನು ಅಧಿಕಾರ ರಾಜಕೀಯದ ಹನಿಟ್ರ್ಯಾಪ್ ಮೂಲಕ ತತ್ವಹೀನರನ್ನಾಗಿಸಲಾಯಿತು. ಕೇವಲ ರಾಜಕೀಯ ಹುದ್ದೆಗಳಲ್ಲಿ ಲಿಂಗಾಯತ ರಾಜಕಾರಣಿಗಳನ್ನು ಪ್ರತಿಷ್ಟಾಪಿಸಿ ನೀತಿ ನಿರೂಪಣೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡ ಪುರೋಹಿತಶಾಹಿಗಳು ಲಿಂಗಾಯತ ಸಮುದಾಯದ ಮೇಲೆ ನೈಜ ಸೇಡು ತೀರಿಸಿಕೊಳ್ಳಲಾರಂಭಿಸಿದರು.

ಈ ನಡುವೆ ಕನ್ನಡದ ಹೆಮ್ಮೆಯ ಸಂಸೋಧಕ ಡಾ. ಎಂ ಎಂ ಕಲಬುರಗಿ ಮತ್ತು ದಿಟ್ಟ ಪತ್ರಕರ್ತೆ ಹಾಗು ಸಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆಗಳು ಸಂಭವಿಸಿದವು. ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಹೋರಾಟ ಆರಂಭಗೊಂಡಾಗ ಅಕ್ಷರಶಃ ಕಂಗಾಲಾಗಿದ್ದು ಇದೇ ಪುರೋಹಿತಶಾಹಿಗಳು. ಡಾ. ಕಲಬುರಗಿಯವರು ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯದ ಕುರಿತು ಅಪಾರ ಪ್ರಮಾಣದ ಸತ್ಯಸೋಧನೆ ಜನರೆದುರಿಗೆ ತೆರೆದಿಟ್ಟಿದ್ದರು. ಸಾಹಿತಿ ಅನಂತಮೂರ್ತಿ ಬರೆದ ಕಥೆಯನ್ನು ಭಾಷಣವೊಂದರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದ ಡಾ. ಕಲಬುರಗಿಯವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಪುರೋಹಿತಶಾಹಿ ಮಾಧ್ಯಮಗಳು ಯಶಸ್ವಿಯಾದವು. ಈ ಮಾಧ್ಯಮಗಳ ಅತಿರಂಚಿತ ವರದಿಗಳೇ ಡಾ. ಕಲಬುರಗಿ ಮತ್ತು ಗೌರಿ ಕೊಲೆಗೆ ಪ್ರಚೋದನೆಯಾದವು ಎನ್ನುವ ಸಂಗತಿ ನಾವು ಮರೆಯಲೇಬಾರದು. ಡಾ. ಕಲಬುರಗಿ ಮತ್ತು ಗೌರಿ ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು ಮತ್ತು ಇವರ ಕೊಲೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಆಗಿದ್ದವು. ಇವರ ಕೊಲೆಗೆ ಪ್ರಚೋದನೆ ಮಾಡಿದ್ದ ಮಾಧ್ಯಮಗಳು ಕೊಲೆಯ ನಂತರ ತನಿಖೆಯ ದಿಕ್ಕು ತಪ್ಪಿಸಲು ಅನೇಕ ವಿಧದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಗೊಳಿಸಿದ್ದು ನಾವು ಮರೆಯಬಾರದು.

ಕರ್ನಾಟಕˌ ಮಹಾರಾಷ್ಟ್ರ ˌ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ 2017 ರಲ್ಲಿ ಆರಂಭಗೊಂಡಿದ್ದ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಬೇಡಿಕೆಯ ಚಳುವಳಿಯನ್ನು ಆರಂಭದಲ್ಲೇ ಹತ್ತಿಕ್ಕಲು ಹವಣಿಸಿದ್ದು ಇದೇ ಪುರೋಹಿತಶಾಹಿಗಳು. ರಾಷ್ಟ್ರೀಯತೆ ಹೆಸರಿನಲ್ಲಿ ಕಟ್ಟಲಾದ ಸಂಸ್ಥೆಯೊಂದು ತನ್ನ ಪ್ರಾಂತೀಯ ಪ್ರತಿನಿಧಿಗಳ ಮೂಲಕ ತಾನು ನಿಯಂತ್ರಿಸುವ ರಾಜಕೀಯ ಪಕ್ಷದ ಜೊತೆಗೆ ಮತ್ತು ತನ್ನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಲಿಂಗಾಯತ ನಾಯಕರು/ಪ್ರಮುಖ ಕಾರ್ಯಕರ್ತರ ಗುಪ್ತ ಸಭೆಗಳನ್ನು ಕರೆದು ಲಿಂಗಾಯತ ಧರ್ಮ ಹೋರಾಟ ಬೆಂಬಲಿಸದಂತೆ ಆದೇಶಿಸಿತ್ತು. ಸಂಸ್ಥೆಯ ಮುಖ್ಯಸ್ಥರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವ್ಯವಸ್ಥಿತವಾಗಿ ಹಾಗು ಒತ್ತಾಯಪೂರ್ವಕವಾಗಿ ಲಿಂಗಾಯತರನ್ನು ಹೋರಾಟದಿಂದ ದೂರವಿಡಲಾಯಿತು. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೆ ಸಮುದಾಯದ ಹಿಡಿತದಲ್ಲಿರುವ ಧಾರ್ಮಿಕ ಸಂಸ್ಥೆಗಳು(ಮಠ) ಮತ್ತು ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಸಧೃಡಗೊಳ್ಳುತ್ತವೆ ಎನ್ನುವ ಮತ್ಸರ ಮತ್ತು ಆತಂಕ ಪುರೋಹಿತಶಾಹಿಗಳನ್ನು ಕಂಗಾಲಾಗಿಸಿತ್ತು. ಇದನ್ನು ಪ್ರಶ್ನಿಸಿದ ಕೆಲವು ಕಾರ್ಯಕರ್ತರನ್ನು ಪಕ್ಷ ಹಾಗು ಸಂಘಟನೆಯ ಚಟುವಟಿಕೆಗಳಿಂದ ದೂರವಿಡಲಾಯಿತು.

ಕರ್ನಾಟಕದಲ್ಲಿ ಲಿಂಗಾಯತರ ಶಿಕ್ಷಣ ಸಂಸ್ಥೆಗಳು ಹಾಗು ಮಠಗಳು ನಡೆಸುವ ಶಾಲಾ ಕಾಲೇಜುಗಳು ಬೆಂಗಳೂರನ್ನು ಸಾಫ್ಟವೇರ್ ತಂತ್ರಜ್ಞಾನದ ತವರು ಅಥವಾ ಸಿನಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳಲು ಕಾರಣೀಭೂತವಾಗಿದ್ದು ನಾವು ಅಲ್ಲಗಳೆಯಲಾಗದು. ಒಂದಿಲ್ಲ ಒಂದು ರೀತಿಯಲ್ಲಿ ಇದೇ ಲಿಂಗಾಯತರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಟೆಕ್ಕಿಗಳಾಗಿರುವ ಈ ಪುರೋಹಿತಶಾಹಿಗಳು ದೇಶ ವಿದೇಶಗಳಿಗೆ ಹೋಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೂ ಇವರಿಗೆ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವುದು ಬೇಕಿಲ್ಲ. ಅನೇಕ ಜನ ಪುರೋಹಿತಶಾಹಿಗಳು ಇದೇ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿಯೂ ಲಿಂಗಾಯತರನ್ನು ದ್ವೇಷಿಸುತ್ತಿರುವುದು ಲಿಂಗಾಯತರ ಮೂರ್ಖತನ ಎನ್ನಲೇಬೇಕು. ಲಿಂಗಾಯತ ಸಮುದಾಯವನ್ನು ನಖಶಿಖಾಂತ ದ್ವೇಷಿಸುವ ಈ ಪುರೋಹಿತಶಾಹಿಗಳು ನಡು ಬಗ್ಗಿಸಿˌ ಕೈಕಟ್ಟಿಕೊಂಡು ಗುಲಾಮರಂತೆ ನಿಲ್ಲುವ ತನ್ನ ಪರಂಪರಾಗತ ನರಿ ಬುದ್ದಿಯಿಂದ ಲಿಂಗಾಯತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರನ್ನು ಮೆಚ್ಚಿಸಿ ಆಯಕಟ್ಟಿನ ಸ್ಥಾನಗಳು ಆಕ್ರಮಿಸಿ ಕುಂತಿದ್ದಷ್ಟೇ ಅಲ್ಲದೆ ಅಲ್ಲಿ ಇನ್ನೊಬ್ಬ ಪ್ರತಿಭಾವಂತ ಲಿಂಗಾಯತ ಅಭ್ಯರ್ಥಿ ಬರದಂತೆ ಕುಟಿಲ ಹುನ್ನಾರಗಳನ್ನು ಮಾಡುತ್ತಿದ್ದಾರೆ.

ಇಂದು ಕರ್ನಾಟಕದಲ್ಲಿ ಲಿಂಗಾಯತರು ನಡೆಸುವ ಬಹುತೇಕ ಶಿಕ್ಷಣ ಸಂಸ್ಥೆಗಳ ಅನುದಾನಿತ ಮತ್ತು ಅನುದಾನ ರಹಿತ ತಾಂತ್ರಿಕ ಮತ್ತು ವೃತ್ತಿಪರ ಕಾಲೇಜುಗಳ ಆಯಕಟ್ಟಿನ ಸ್ಥಾನಗಳಾದ ಆಡಳಿತಾಧಿಕಾರಿˌ ಪ್ರಾಚಾರ್ಯˌ ವಿಭಾಗ ಮುಖ್ಯಸ್ಥ ˌ ಅಕೌಂಟ್ ನಿಭಾಯಿಸುವ ಹುದ್ದೆಗಳಲ್ಲಿ ಪುರೋಹಿತಶಾಹಿಗಳೇ ತುಂಬಿದ್ದಾರೆ. ಲಿಂಗಾಯತ ಸಮುದಾಯವನ್ನು ಐತಿಹಾಸಿಕ ಕಾಲದಿಂದಲೂ ವಿರೋಧಿಸುತ್ತ ಹಾಗು ದ್ವೇಷಿಸುತ್ತ ಬಂದಿರುವ ಪುರೋಹಿತಶಾಹಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಲಿಂಗಾಯತ ರಾಜಕಾರಣಿಗಳು ಮತ್ತು ಮಠಾಧೀಶರು ಲಿಂಗಾಯತ ಸಮುದಾಯಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಸಮುದಾಯದ ಜನಸಾಮಾನ್ಯರು ಎಚ್ಚರಗೊಳ್ಳದಿದ್ದರೆ ಮುಂದೊಂದು ದಿನ ಲಿಂಗಾಯತ ಸಮುದಾಯದ ಉತ್ಕೃಷ್ಟ ಸಂಸ್ಕೃತಿˌ ಸೌಹಾರ್ದ ಪರಂಪರೆˌ ಜಾತ್ಯಾತೀತ ಹಣೆಪಟ್ಟಿ ಕಳೆದು ಹೋಗಿ ಲಿಂಗಾಯತರು ಅನಾಥರಾಗುವ ಕಾಲ ದೂರವಿಲ್ಲ.

 ಡಾ. ಜೆ ಎಸ್ ಪಾಟೀಲ.

ಜಿಲ್ಲೆ

ರಾಜ್ಯ

error: Content is protected !!