Thursday, July 25, 2024

ಕೆ. ಆರ್. ನಾರಾಯಣನ್ : ಮರೆಯಲಾಗದ ರಾಷ್ಟ್ರಪತಿ 

ಕೆ. ಆರ್. ನಾರಾಯಣನ್ ಭಾರತದ 10ನೆಯ ರಾಷ್ಟ್ರಪತಿಗಳಾಗಿದ್ದವರು. 1997ರ ಜುಲೈ 27ರಂದು ಅಧಿಕಾರ ವಹಿಸಿಕೊಂಡು 2002ರ ಜುಲೈ 25ರವರೆಗೆ ಸೇವೆ ಸಲ್ಲಿಸಿದರು. ಅವರು ಪತ್ರಕರ್ತ, ಪ್ರಾಧ್ಯಾಪಕ, ವಿದ್ವಾಂಸ, ರಾಜತಾಂತ್ರಿಕ ಮತ್ತು ರಾಜಕಾರಿಣಿಗಳಾಗಿಯೂ ಹೆಸರಾಗಿದ್ದರು

ಕೊಛೇರಿಲ್ ರಾಮನ್ ನಾರಾಯಣನ್ 1921ರ ಅಕ್ಟೋಬರ್ 27ರಂದು ಕೇರಳದ ಕೊಟ್ಟಾಯಂ ಜಿಲ್ಲೆ ಉಯವೂರ್ ಗ್ರಾಮದಲ್ಲಿ ಜನಿಸಿದರು. ತಂದೆ ನಾಟಿ ಔಷಧಿ ವೈದ್ಯ ರಾಮನ್‍ವೈದ್ಯನ್. ದಿನಂಪ್ರತಿ ಹತ್ತುಮೈಲು ನಡೆದು ಕೆ.ಆರ್. ನಾರಾಯಣನ್ ಶಾಲೆಗೆ ಹೋಗತ್ತಿದ್ದರು. ಆದರೆ ಅವರ ಜನ್ಮದಿನಾಂಕ ಸರಿಯಾಗಿ ತಿಳಿಯದ ಅವರ ಚಿಕ್ಕಪ್ಪ ಶಾಲೆಗೆ ಸೇರಿಸುವಾಗ 1920, ಅಕ್ಟೋಬರ್ 27ಎಂದು ದಾಖಲಿಸಿದರು. ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ಮೊದಲಿಗರಾಗಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರು.

ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ರ್‍ಯಾಂಕ್ ಪಡೆದರೂ ಅವರು ನಿಮ್ನ ವರ್ಗದವರೆಂಬ ಕಾರಣಕ್ಕೆ ಉಪನ್ಯಾಸಕ ಹುದ್ದೆಯನ್ನು ಅವರಿಗೆ ನಿರಾಕರಿಸಲಾಯಿತು. ಮುಂದೆ ಅವರಿಗೆ ಆಹ್ವಾನ ಬಂದಿತಾದರೂ ಕೋಪ-ಅಸಮಾಧಾನಗೊಂಡ ನಾರಾಯಣ್ ಆ ಹುದ್ದೆಯನ್ನು ನಿರಾಕರಿಸಿದರು. 50 ವರ್ಷಗಳ ನಂತರ ಕೆ.ಆರ್.ಎನ್. ಉಪರಾಷ್ಟ್ರಪತಿಗಳಾಗಿ ಅದೇ ವಿಶ್ವವಿದ್ಯಾಲಯ ಪದವಿ ಸ್ವೀಕರಿಸುವಂತೆ ಕೋರಿದಾಗ ಸಂತೋಷದಿಂದ ಒಪ್ಪಿದರು.

ನಾರಾಯಣನ್ ರಾಜ್ಯಶಾಸ್ತ್ರದಲ್ಲಿ ವಿಶೇಷ ಪ್ರಾವಿಣ್ಯತೆಯೊಡನೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಬಿ.ಎಸ್‍ಸಿ (ಎಕನಾಮಿಕ್ಸ್) ವಿಷಯದಲ್ಲಿ ಫಸ್ಟ್ ಕ್ಲಾಸ್ ಆನರ್ಸ್ ಪದವಿ ಪಡೆದರು. 1944-45ರ ಅವಧಿಯಲ್ಲಿ ಚೆನ್ನೈನ ‘ದಿ ಹಿಂದೂ’ ಹಾಗೂ ಮುಂಬೈದ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದರು. ಲಂಡನಿನಲ್ಲಿ ವಿದ್ಯಾರ್ಥಿಯಾಗಿರುವಾಗಲೇ 1945-48ರ ಸಮಯದಲ್ಲಿ ಕೆ ಎಂ ಮುನ್ಷಿ ಅವರ ಸಂಪಾದಕತ್ವದ ಮುಂಬೈ ವಾರಪತ್ರಿಕೆ ‘ಸೋಷಿಯಲ್ ವೆಲ್‍ಫೇರ್‍ಗೆ ಲಂಡನ್ ವರದಿಗಾರರಾಗಿ ಕೆಲಸ ಮಾಡಿದರು.

1949ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ಕೆ ಆರ್ ನಾರಾಯಣನ್, ವಿದೇಶಾಂಗ ಸಚಿವ ಖಾತೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ರಂಗೂನ್, ಟೋಕಿಯೋ, ಲಂಡನ್, ಕ್ಯಾನ್ಬೆರಾ ಮತ್ತು ಹನಾಯ್‍ಗಳಲ್ಲಿನ ಭಾರತೀಯ ದೂತಾವಾಸಗಳಲ್ಲೂ ಸೇವೆ ಸಲ್ಲಿಸಿದರು. ಇದರ ನಡುವೆ 1954ರಿಂದ 1955ರವರೆಗೆ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಆರ್ಥಿಕ ಆಡಳಿತ ವಿಷಯ ಬೋಧಿಸಿದರು. ಸೆಂಟ್ರಲ್ ಫಾರ್ ಫಾರಿನ್ ಟೆಕ್ನೀಷಿಯನ್ಸ್‍ನಲ್ಲಿ ಜಂಟಿನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು.

ನಾರಾಯಣನ್ 1967-69ರಲ್ಲಿ ಥಾಯ್ಲೆಂಡಿನಲ್ಲಿ, 1973-75ರಲ್ಲಿ ತುರ್ಕಿಯಲ್ಲಿ, 1976-78ರಲ್ಲಿ ಚೀಣಾದಲ್ಲಿ ಭಾರತದ ರಾಯಭಾರಿ ಅಗಿದ್ದರು. 1976ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾದರು. 1978ರಲ್ಲಿ ಸೇವೆಯಿಂದ ನಿವೃತ್ತರಾದರು.

ನಾರಾಯಣನ್ ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ 1979ರ ಜನವರಿಯಲ್ಲಿ ನೇಮಕಗೊಂಡರು. 1980ರ ಅಕ್ಟೋಬರ್‍ವರೆಗೆ ಈ ಹುದ್ದೆಯಲ್ಲಿ ಮುಂದುವರೆದರು. 1980-84ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಹುದ್ದೆ ನಿರ್ವಹಿಸಿ ಸ್ವದೇಶಕ್ಕೆ ಮರಳಿದ ನಂತರ ಇಂದಿರಾಗಾಂಧಿಯವರ ಮನವಿಗೆ ಓಗೊಟ್ಟು ರಾಜಕಾರಣಕ್ಕೆ ಪ್ರವೇಶ ಮಾಡಿದರು. 1984, 1989 ಹಾಗೂ 1991ರಲ್ಲಿ ಕೇರಳದ ಒಟ್ಟಪಳಂ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡರು 1985ರಿಂದ 1992ರವರೆಗೆ ಲೋಕಸಭಾಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ಯೋಜನಾಖಾತೆ ರಾಜ್ಯಸಚಿವರಾಗಿ, ವಿದೇಶಾಂಗ ಖಾತೆ ಸಚಿವರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ, ಅಣುಶಕ್ತಿ, ಬಾಹ್ಯಾಕಾಶ, ವಿದ್ಯುನ್ಮಾನ, ಸಾಗರ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದರು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದರು.

1992 ಆಗಸ್ಟ್ 21 ಕೆ ಆರ್ ನಾರಾಯಣನ್ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ರಾಜ್ಯಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ. 1997ರ ಜುಲೈ 25ರಂದು ರಾಷ್ಟ್ರಪತಿಯಾಗಿ ಆಯ್ಕೆಯಾಗುವವರೆಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿಯಾಗಿ ಅಧಿಕಾರ ನಿರ್ವಹಿಸಿದ ಕಾಲದಲ್ಲಿ ದಿವಂಗತ ಕೆ.ಆರ್. ನಾರಾಯಣನ್ ದೇಶಕಂಡ ಅತ್ಯಂತ ಕ್ರಿಯಾಶೀಲ ರಾಷ್ಟ್ರಪತಿಗಳ ಪೈಕಿ ಒಬ್ಬರಾಗಿದ್ದರು. ತಮ್ಮ ವಿಶಿಷ್ಟ ನಡವಳಿಕೆಯಿಂದ ಪ್ರಸಿದ್ಧಿ ಪಡೆದರು. ನೇರವಾಗಿ ತಮ್ಮ ಅಭಿಪ್ರಾಯಮಂಡನೆ, ಸೂಕ್ತ ಪರಾಮರ್ಶೆಯಿಲ್ಲದೆ ಯಾವುದನ್ನೂ ಒಪ್ಪದ ನಿಲುವು, ದಲಿತರು, ಅಸಹಾಯಕರ ಬಗ್ಗೆ ಅನನ್ಯಕಾಳಜಿ, ತಮ್ಮ ನಿರ್ಧಾರಗಳಲ್ಲಿ ಪಾರದರ್ಶಕತೆ ಅವರ ವಿಶಿಷ್ಟ ಗುಣವೆನಿಸಿದ್ದವು.

1998 ಸಾರ್ವತ್ರಿಕ ಚುನಾವಣೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ರಾಷ್ಟ್ರಪತಿಗಳಾಗಿದ್ದಾಗ ಪೂಜಾ, ಪ್ರಾರ್ಥನಾ ಸ್ಥಳಗಳಿಗೆ, ಮಠಾಧಿಪತಿಗಳು, ದೇವಮಾನವರೆಂದು ಹೇಳಿ ಕೊಳ್ಳುವವರಬಳಿ ಹಾಯಲಿಲ್ಲ. ವಿದೇಶಗಳಿಗೆ ತೆರಳಿದ ಹಲವಾರು ಭಾರತೀಯ ನಿಯೋಗಗಳಲ್ಲಿ ಸದಸ್ಯರಾಗಿ, ವಿವಿಧ ಪುರಸ್ಕಾರ ಆಯ್ಕೆ ಸಮಿತಿಗಳಲ್ಲಿ ಅವರು ಕೆಲಸ ಮಾಡಿದ್ದರು. ಲೇಖಕ ವಿದ್ವಾಂಸ ಕೆ ಆರ್ ನಾರಾಯಣನ್, `ಇಂಡಿಯಾ ಅಂಡ್ ಅಮೆರಿಕ, `ಇಮೇಜಸ್ ಅಂಡ್ ಇನ್‍ಸೈಟ್ಸ್, `ನೆಹರೂ ಅಂಡ್ ಹಿಸ್ ಮಿಷನ್ ಸೇರಿದಂತೆ ನಾಲ್ಕು ಗ್ರಂಥಗಳನ್ನು ರಚಿಸಿದರು. ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟೋರೆಟ್ ಪಡೆದರು. ರಾಜಕೀಯ ವಿಚಾರ, ಅಂತಾರಾಷ್ಟ್ರೀಯ ವ್ಯವಹಾರ, ಶಿಕ್ಷಣ, ದರ್ಶನ, ವಿಜ್ಞಾನ, ತಂತ್ರಜ್ಞಾನ, ಕಾವ್ಯ, ಸಾಹಿತ್ಯ, ಲಲಿತಕಲೆಗಳಲ್ಲಿ ಅವರಿಗೆ ಆಸಕ್ತಿ ಇತ್ತು.

ರಾಷ್ಟ್ರಪತಿ ಹುದ್ದೆಯನ್ನು ರಬ್ಬರ್ ಸ್ಟಾಂಪ್ ಎನ್ನುತ್ತಿದ್ದ ಕಾಲದಲ್ಲಿ , ಸಂವಿಧಾನಬದ್ಧವಾಗಿ ದತ್ತಕವಾಗಿದ್ದ ಅಧಿಕಾರವನ್ನು ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಮತ್ತು ಕ್ರಿಯಾಶೀಲತೆಯಿಂದ ಚಲಾಯಿಸಿ Working President ಎಂದು ಕರೆಯಲ್ಪಟ್ಟರು.

ಕೆ ಆರ್  ನಾರಾಯಣನ್ ಅವರು 2005 ನವೆಂಬರ್ 9 ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.

ಜಿಲ್ಲೆ

ರಾಜ್ಯ

error: Content is protected !!