Friday, June 28, 2024

ಖಾನಾಪುರ ಯುವಕ ಅರ್ಬಾಜ್ ಮುಲ್ಲಾ ಕೊಲೆ ಕೇಸ್: ಯುವತಿಯ ತಂದೆ, ತಾಯಿ ಸೇರಿ 10 ಮಂದಿ ಬಂಧನ

ಬೆಳಗಾವಿ: ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ (24) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆತ ಪ್ರೀತಿಸುತ್ತಿದ್ದ ಹಿಂದೂ ಯುವತಿಯ ತಂದೆ, ತಾಯಿ ಹಾಗೂ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಖಾನಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ನಾಗಪ್ಪ ಮುತಗೇಕರ ಸೇರಿ 10 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸೆ.28 ರಂದು ಕೊಲೆಯಾದ ಘಟನೆ ನಡೆದಿತ್ತು. ಕೊಲೆಯಾದ ಯುವಕನ ಶವ ಖಾನಾಪುರ ಹೊರವಲಯದ ರೈಲು ಹಳಿಯಲ್ಲಿ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಕೊಲೆಯಾದ ಯುವಕನ ತಾಯಿ ನಾಜಿಮಾ ಶೇಖ್ ನೀಡಿದ ದೂರಿನ ಮೇರೆಗೆ ಸೆ. 29ರಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ.3ರಂದು ಜಿಲ್ಲಾ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಯುವತಿಯ ತಂದೆ ಈರಪ್ಪ ಕುಂಬಾರ, ತಾಯಿ ಸುಶೀಲಾ ಕುಂಬಾರ, ಪುಂಡಲೀಕ ಮುತಗೇಕರ, ಕುತುಬುದ್ದೀನ್ ಬೇಪಾರಿ, ಮಾರುತಿ ಸುಗತೆ, ಮಂಜುನಾಥ ಗೊಂಧಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ,  ಪ್ರವೀಣ ಪೂಜಾರಿ ಮತ್ತು ಶ್ರೀಧರ ಡೋಣಿ ಇವರನ್ನು ಬಂಧಿಸಿದ್ದಾರೆ.

‘ಯುವತಿಯ ತಂದೆ- ತಾಯಿ ಪುಂಡಲೀಕಗೆ ಹಣ ನೀಡಿ ಕೊಲೆ ಮಾಡಲು ತಿಳಿಸಿದ್ದರು. ಸೆ.28ರಂದು ಅರ್ಬಾಜ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ಅವರಿಂದ ಹಣ ಪಡೆದು ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಹಳಿಯ ಮೇಲೆ ಎಸೆದು ಹೋಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಜಿಲ್ಲೆ

ರಾಜ್ಯ

error: Content is protected !!