ರೈತನ ಆತ್ಮಹತ್ಯೆಗೆ ಅನುಮತಿ ನೀಡಿ ಸ್ವೀಕೃತಿ ಪತ್ರವನ್ನೂ ಕೊಟ್ಟ ಗ್ರಾಪಂ ಪಿಡಿಒ!

ಕೊಪ್ಪಳ: ಕುಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ,ಸಾಯಲು ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಪಿಡಿಒ ಅನುಮತಿ ನೀಡಿದ್ದಲ್ಲದೆ, ಸ್ವೀಕೃತಿ ಪತ್ರವನ್ನೂ ನೀಡಿರುವ ಘಟನೆ ನಡೆದಿದ್ದು ಈ ಬಗ್ಗೆ ರೈತ ಮಂಜುನಾಥ ವಿಷಯ ತಿಳಿಸಿದ್ದಾರೆ.

ನರೇಗಾದಡಿ ಕೃಷಿಹೊಂಡ ನಿಮಿರ್ಸಿಕೊಳ್ಳಲು ಪಿಡಿಒ ಜಿ.ವೀರೇಶ್​ ಅನುಮತಿ ನೀಡಿದ್ದರು. ಬಳಿಕ ಬಿಲ್​ ಮಾಡುವಂತೆ ಕೇಳಿದಾಗ 15 ಸಾವಿರ ರೂ. ಕೇಳಿದ್ದರು. ನೀಡುವುದಿಲ್ಲ ಎಂದಿದ್ದಕ್ಕೆ ಬಿಲ್​ ಮಾಡುತ್ತಿಲ್ಲ. ನನ್ನ ಹೆಂಡತಿ ಒಡವೆ ಒತ್ತೆಯಿಟ್ಟು, ಹೊಂಡ ನಿರ್ಮಿಸಿರುವೆ. 65 ಸಾವಿರ ರೂ. ಖರ್ಚಾಗಿದೆ. ಜಾನುವಾರುಗಳಿಗೆ ನೀರಿನ ಅವಶ್ಯಕತೆ ಇದ್ದುದ್ದರಿಂದ ನೀರು ತುಂಬಿಸಿದ್ದೇವೆ. ಇದನ್ನೇ ನೆಪವಾಗಿಸಿ, ನಿಯಮ ಬಾಹಿರವಾಗಿ ಹೊಂಡ ನಿರ್ಮಿಸಲಾಗಿದೆ ಎನ್ನುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ಅರ್ಜಿ ನೀಡಿದರೆ, ಅದನ್ನು ಅನುಮತಿಸಿ, ಅರ್ಜಿ ಸ್ವೀಕೃತಿ ನೀಡಿದ್ದಾರೆ ಎಂದು ವಿವರಿಸಿದರು.

ನಾವು ಬಡವರಾಗಿದ್ದು, ಕೃಷಿ ಚಟುವಟಿಕೆಗಳಿಗಾಗಿ ಹೊಂಡ ನಿರ್ಮಿಸಿದ್ದೇವೆ. ಬೇರೆ ಕಾಮಗಾರಿಗಳಲ್ಲಿ ಕೆಲಸವಾಗದಿದ್ದರೂ ಬಿಲ್​ ಪಾವತಿ ಆಗುತ್ತಿದೆ. ಅನುಮತಿ ಪಡೆದು ಕೆಲಸ ಮಾಡಿದ್ದರೂ ಬಿಲ ಮಾಡುತ್ತಿಲ್ಲ ಎಂದು ರೈತ ಆರೋಪಿಸಿದ್ದಾರೆ.

ಕೃಷಿಹೊಂಡದ ಹಣ ಬಿಡುಗಡೆ ಮಾಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ರೈತ.

ಈ ಆರೋಪ ನಿರಾಕರಿಸಿರುವ ಮಂಗಳೂರು ಗ್ರಾಪಂ ಪಿಡಿಒ ಜಿ.ವೀರೇಶ್​, ಮಂಜುನಾಥಗೆ ಕೃಷಿಹೊಂಡ ನಿರ್ಮಿಸಿ ಕೊಳ್ಳಲು ಅನುಮತಿ ನೀಡಿಲ್ಲ. ನಮ್ಮ ಸಿಬ್ಬಂದಿಗೆ ಬೆದರಿಸಿ ಆತ್ಮಹತ್ಯೆ ಅರ್ಜಿಗೆ ಸ್ವೀಕೃತಿ ಪಡೆದಿದ್ದಾರೆ. ಬೇರೆಯವರ ಹೊಲದಲ್ಲಿ ಹೊಂಡ ನಿರ್ಮಿಸಿದ್ದು, ಮಾಲೀಕರು ತಕರಾರು ಅರ್ಜಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";