“ಸ್ವಚ್ಛ ವಿಧಾನಸಭೆ” ಅಭಿಯಾನ ಬೆಳಗಾವಿಗೆ ಆಗಮನ! ಹಣ, ಹೆಂಡ ಆಮಿಷಗಳಿಗೆ ಮಾರಿಕೊಳ್ಳಬೇಡಿ.

ಬೆಳಗಾವಿ (ಅ.11):  2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ  ಬಾಗಲಕೋಟೆಯಿಂದ ಬೆಂಗಳೂರು ವರಗೆ ಎಂ.ಎಸ್ಸಿ,ಎಂ.ಟೆಕ್ ಪದವೀಧರ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ ಕಲಕುಟಕರ್ ಆರಂಭಿಸಿರುವ  “ಸ್ವಚ್ಛ ವಿಧಾನಸಭೆ” ಅಭಿಯಾನ ಪಾದಯಾತ್ರೆ  ಸದ್ಯ ನಮ್ಮ ಕುಂದಾನಗರಿ ಬೆಳಗಾವಿಗೆ ಕಾಲಿಟ್ಟಿದೆ.

ಬಾಗಲಕೋಟೆಯಿಂದ ಜೂನ್ 9ರಂದು ಆರಂಭಿಸಿರುವ ಈ ಅಭಿಯಾನ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿ ಇದೀಗ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ರಾಜ್ಯದ 31 ಜಿಲ್ಲೆಗಳ ಎಲ್ಲ 224 ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ಜನವರಿ 26ರಂದು ಬೆಂಗಳೂರು ತಲುಪಲಿದೆ.

ಈ ಕುರಿತು ಮಾತನಾಡಿದ ನಾಗರಾಜ ಕಲಕುಟುಕರ, ಪಾದಯಾತ್ರೆ ಮೂಲಕ ರಾಜ್ಯದ ಲಕ್ಷಾಂತರ ಮತದಾರರನ್ನು ಭೇಟಿಯಾಗಿ ತಮ್ಮ ಅಮೂಲ್ಯ ಮತವನ್ನು ದಕ್ಷರು, ಕಳಂಕ ರಹಿತರು, ಭ್ರಷ್ಟಾಚಾರ ರಹಿತರು, ಜಾತ್ಯತೀತ, ಪ್ರಬುದ್ಧರಿಗೆ, ಜನಪರ ಚಿಂತನೆ ಉಳ್ಳವರಿಗೆ ಹಾಗೂ ಪ್ರಾಮಾಣಿಕರಿಗೆ ಮತ ಹಾಕುವ ಮೂಲಕ
ಶಾಸಕರನ್ನಾಗಿ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು.

ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧವನ್ನು ಭ್ರಷ್ಟರು, ಮತಾಂದರು ಮತ್ತು ಲೂಟಿಕೋರರಿಂದ ಮುಕ್ತಗೊಳಿಸಬೇಕು. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.

ಹಣ, ಹೆಂಡ,ಸೀರೆ, ಪಂಚೆ, ನಿಕ್ಕರ್, ಕುಕ್ಕರ್ ಹಾಗೂ ಜಾತಿ-ಮತ-ಪಂಥ ಸೇರಿದಂತೆ ಮತ್ತಿತರರ ಆಮಿಷಗಳಿಗೆ ಮತವನ್ನು ಮಾರಿಕೊಳ್ಳಬಾರದು ಎಂದು ಮತದಾರರನ್ನು ಕೋರುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿ ವ್ಯಕ್ತವಾಗುತ್ತಿದೆ. ಇದರಿಂದ ಒಂದಷ್ಟು ಜನರು ಬದಲಾವಣೆಯಾಗುತ್ತಾರೆ ಎಂಬ ವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಾದಯಾತ್ರೆ ಮೂಲಕ ಸಂಚರಿಸಿ ಪ್ರಜ್ಞಾವಂತ ಜನರನ್ನು ಭೇಟಿಯಾಗಿ ಮತದಾನದ ಮಹತ್ವ, ಅರಿವು, ಸದ್ಯದ ಕಲುಷಿತ ರಾಜಕಾರಣದ ಬಗ್ಗೆ ತಿಳಿ ಹೇಳಿ ಅರ್ಹರನ್ನು ಚುನಾಯಿಸುವಂತೆ ಕೋರುತ್ತಿದ್ದೇನೆ ಎಂದರು. ‘ಸ್ವಚ್ಛ ವಿಧಾನಸಭೆ’ ಅಭಿಯಾನದಲ್ಲಿ ಆಸಕ್ತರು ಭಾಗಿಯಾಗಿ ಬೆಂಬಲ ನೀಡಬಹುದು ಎಂದು ಅವರು ಮನವಿ ಮಾಡಿದರು.

ಒಟ್ಟಿನಲ್ಲಿ ಸ್ವಚ್ಛ ವಿಧಾನಸಭೆಗಾಗಿ ಪಾದಯಾತ್ರೆ ಕೈಗೊಂಡಿರುವ ನಾಗರಾಜ ಕಲಕುಟಕರ್ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ಮತ ಮಾರಾಟ ಮಾಡುವುದು ನಮ್ಮ ಮಗಳನ್ನು ಮಾರಾಟ ಮಾಡಿದಂತೆ ಎಂಬ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಮಾತನ್ನು ಎಲ್ಲರೂ ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕಿದೆ. ಈ ಮೂಲಕ ಭ್ರಷ್ಟಾಚಾರ ಮುಕ್ತ ರಾಜ್ಯ, ದೇಶ ನಿರ್ಮಾಣ ಮಾಡುವ ಕೆಲಸ ಮಾಡಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";