ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್

ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ 5 ತಿಂಗಳ ಹಿಂದೆ ಸ್ಕೆಚ್ ಹಾಕಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ. ಮಾದನಾಯನಹಳ್ಳಿಯಲ್ಲಿರುವ ಗೋಪಾಲಕೃಷ್ಣ ಮನೆಯಲ್ಲಿ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಹತ್ಯೆ ಮಾಡಲು ನಡೆಸಿದ್ದ ಮಾತುಕತೆ ವಿಡಿಯೋ ಬಹಿರಂಗವಾಗಿದ್ದು, ಈ ಬಗ್ಗೆ ಸಿಎಂ ಮತ್ತು ಗೃಹಸಚಿವರಿಗೆ ಇಂದು ಬೆಳಗ್ಗೆ ವಿಶ್ವನಾಥ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಶ್ವನಾಥ್ ವಿರುದ್ಧ ಸೋತಿದ್ದ ಗೋಪಾಲಕೃಷ್ಣ ಮಾತುಕತೆ ನಡೆಸಿದ್ದು :ವಿಶ್ವನಾಥ್ ವಿರುದ್ಧ ಗೆಲ್ಲಲು ನೂರು ಕೋಟಿ ಮಾಡಬೇಕು. ಐದು ಕೋಟಿ ರೂ. ಕೊಡ್ತೀನಿ ನೀವೇ ಹೊಡೆದು ಹಾಕಿಬಿಡಿ. ಆಂಧ್ರದಿಂದ ಶಾರ್ಪ್ ಶೂಟರ್​​ಗಳ ಕರೆಸಿ ಹೊಡೆಸೋಣ. ಬೆಳಗ್ಗೆ ತೋಟಕ್ಕೆ ವಿಶ್ವನಾಥ್ ಒಬ್ಬನೇ ಹೋಗುತ್ತಿರುತ್ತಾನೆ. ಆಗ ಹೊಡೀಬಹುದು. ಸ್ಕೆಚ್ ಹಾಕಿದ್ರೆ ಮಿಸ್ ಆಗಬಾರದು. ಒಂದು ವೇಳೆ ಹೊಡೆದು ಹಾಕಿದ್ರೆ ಸುಲಭವಾಗಿ ಗೆಲ್ಲಬಹುದು ಅಂತ ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ಮಾತುಕತೆ ನಡೆಸಿದ್ದ ವಿಡಿಯೋ ಬಹಿರಂಗವಾಗಿದೆ.

ವಿಶ್ವನಾಥ್ ವಿರುದ್ಧ ಸೋತಿದ್ದ ಗೋಪಾಲಕೃಷ್ಣ

ಕೊಲೆಗೆ ಸ್ಕೆಚ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಒಂದು‌ ವಿಷಯದ ಸಲುವಾಗಿ ಬಂದಿದ್ದಾರೆ. ಏನು ಕ್ರಮ ತೆಗೆದುಕೊಳ್ಳುತ್ತೇವೆ. ಏನು ಸರಿ ಅನಿಸುತ್ತೋ ಅದನ್ನ ಮಾಡುತ್ತೇವೆ. ಮುಂದೇನು ಕ್ರಮ ತೆಗೆದುಕೊಳ್ಳಬೇಕು ತೆಗೊತ್ತೀವಿ. ಘಟನೆ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯಿಂದ ಏನು ಬಹಿರಂಗ ಆಗತ್ತೊ ಹಾಗೆ ಕ್ರಮ ತೆಗೆದುಕೊಳ್ಳುತ್ತೀವಿ ಅಂತ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ
ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ವಿಶ್ವನಾಥ್ ಹತ್ಯೆ ಬಗ್ಗೆ ಮಾತಾಡಿದ್ದಾರೆಂಬ ಹಿನ್ನೆಲೆ ವಶಕ್ಕೆ ಪಡೆಯಲಾಗಿತ್ತು. ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣನನ್ನು ಸಿಸಿಬಿ ಕರೆತಂದಿತ್ತು. ಗೋಪಾಲಕೃಷ್ಣನ ಸ್ಟಿಂಗ್ ವಿಡಿಯೋವನ್ನು ದೇವರಾಜ ಮಾಡಿದ್ದ. ವಿಡಿಯೋ ಪರಿಶೀಲನೆಯ ವೇಳೆ ಪ್ರಚೋದನೆ ಬೆಳಕಿಗೆ ಬಂದಿದೆ.

ಕುಳ್ಳ ದೇವರಾಜ

ದೇವರಾಜ್ ಸ್ಟಿಂಗ್ ವಿಡಿಯೋ ಬಳಸಿ ಶಾಸಕ ವಿಶ್ವನಾಥ್‌ಗೆ ಆಪ್ತನಾಗಲು ಬಯಸಿದ್ದ. ವಿಡಿಯೋ ವಿಚಾರ ತಿಳಿಯುತ್ತಿದ್ದಂತೆ ವಿಶ್ವನಾಥ್‌ ಸಿಸಿಬಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹೇಳಿದ್ದರು. ಹೀಗಾಗಿ ಗೋಪಾಲಕೃಷ್ಣ, ದೇವರಾಜನನ್ನು ಸಿಸಿಬಿ ಕರೆತಂದಿದ್ದರು. ಇನ್ನು ಸಿಸಿಬಿ ಗೋಪಾಲಕೃಷ್ಣನನ್ನು ನಿನ್ನೆಯೇ ಬಿಟ್ಟು ಕಳಿಸಿದ್ದಾರೆ.

ಪೊಲೀಸ್ ಮೂಲಗಳು ಹೇಳೊದೇನು?
ವಿಶ್ವನಾಥ್ ಆಗಲಿ ಅಥವಾ ಯಾರೇ ಆಗಲಿ ಈ ಬಗ್ಗೆ ದೂರು ನೀಡಿಲ್ಲ. ಇದು 6 ತಿಂಗಳು ಹಿಂದೆ ನಡೆದಿರುವ ಘಟನೆ. 15 ದಿನದ ಹಿಂದೆ ಬೆಳಕಿಗೆ ಬಂದಿದೆ. ಕುಳ್ಳ ದೇವರಾಜ ವಿಶ್ವನಾಥ್ ಜೊತೆ ಗುರುತಿಸಿಕೊಂಡಿದ್ದ. ವಿಶ್ವನಾಥ್ ಮುಗಿಸುವ ಬಗ್ಗೆ ದೇವರಾಜ ಗೋಪಾಲಕೃಷ್ಣ ಜೊತೆ ಪ್ರಸ್ತಾಪ ಮಾಡಿದ್ದಾನೆ. ಈ ವೇಳೆ ನಾನು ಸಾಥ್ ನೀಡೋದಾಗಿ ಗೋಪಾಲಕೃಷ್ಣ ಹೇಳಿದ್ದ. ಈ ಮಾತುಕತೆ ಕುಳ್ಳ ದೇವರಾಜ ವಿಡಿಯೋ ಮಾಡಿದ್ದಾನೆ. ಕುಳ್ಳ ದೇವರಾಜ ಡಬಲ್ ಗೇಮ್ ಆಡುತ್ತಿರುವ ಬಗ್ಗೆ ಸಂಶಯ ಇದೆ. ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ಆಂಧ್ರದ ಸುಪಾರಿ ಗ್ಯಾಂಗ್ ಬೆಂಗಳೂರಿಗೆ ಬಂದಿತ್ತಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈವರೆಗೂ ಆಂಧ್ರ ಗ್ಯಾಂಗ್ ಬೆಂಗಳೂರಿಗೆ ಬಂದಿರುವ ಅಥವಾ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಯಾವುದೇ ಮಾಹಿತಿ, ಸಾಕ್ಷಿ ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..

ಡಿಕೆಶಿ ಹೇಳಿದ್ದು.
ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಿ. ಗೋಪಾಲಕೃಷ್ಣ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಯಾರೋ 4-5 ಜನ 6-7 ತಿಂಗಳ ಹಿಂದೆ ಮಾತಾಡಿದ್ದರಂತೆ. ನಾನು ವಿಡಿಯೋ ನೋಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಇದೆಲ್ಲಾ ರಾಜಕೀಯದಲ್ಲಿ ಇದ್ದೇ ಇದೆ. ಎಲ್ಲ ರೌಡಿಗಳು ಎಸ್ಆರ್ ವಿಶ್ವನಾಥ್ ಜೊತೆಗೆ ಇದ್ದಾರೆ. ಎಲ್ಲ ರೌಡಿಗಳು ಜತೆಗಿರುವ ಲಿಸ್ಟ್ ಕೊಡುತ್ತೇನೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";