ಸೌಲಭ್ಯ ವಂಚಿತ ವಿರಪನಕೊಪ್ಪ ಶಾಲೆ! ಸೌಕರ್ಯಗಾಗಿ ನೌಕರರ ಮನವಿ

ಉಮೇಶ ಗೌರಿ(ಯರಡಾಲ)

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಯಡ್ಡಿ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತೆ.ಶಾಲೆಗಳ ದುರಸ್ತಿಗಾಗಿಯೂ ಕೂಡ ಅನುದಾನ ನೀಡುತ್ತಿದೆ. ಆದರೂ ಕುಂದಾ ನಗರಿ ಬೆಳಗಾವಿ ಜಿಲ್ಲೆಯ ವಿರಪನಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ.

ಸ್ವಾತಂತ್ರ್ಯ ಪೂರ್ವದಲ್ಲಿ (1938ರಲ್ಲಿ) ಸ್ಥಾಪನೆಯಾದ ಈ ಶಾಲೆ ನಾಲ್ಕು ಕೊಠಡಿ ಹೊಂದಿದ್ದು,1ರಿಂದ 7 ನೇ ತರಗತಿವರೆಗೆ ಸುಮಾರು 110 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಮೂರು ಜನ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ.ಆದರೆ ಈ ಶಾಲೆಗೆ ಎರಡು ದಶಕಗಳಿಂದ ಯಾವುದೇ ಸುಧಾರಣೆ ಕಾಣದೆ ಮೂಲಭೂತ ಸೌಕರ್ಯಗಳಿಂದ ವಂಚತವಾಗಿದೆ.

ಶಿಥಿಲಗೊಂಡಿರುವ ಚಾವಣಿ: ಶಾಲೆಯ ಕಿಟಕಿ-ಬಾಗಿಲುಗಳು ಮುರಿದಿದ್ದು,ಚಾವಣಿಯಲ್ಲಿ ಹೆಂಚುಗಳೇ ಇಲ್ಲವಾಗಿದೆ. ಬಿರುಕುಬಿಟ್ಟ ಗೋಡೆಗಳು, ಶಿಥಿಲಗೊಂಡಿರುವ ಚಾವಣಿಯಲ್ಲಿ ಕಬ್ಬಿಣ ರಾಡ್ ಗಳು ಕಾಣುತ್ತಿದ್ದು  ಕುಸಿಯುವ ಹಂತ ತಲುಪಿದೆ. ಅಲ್ಲದೆ ಶಾಲೆಯ ಅವ್ಯವಸ್ಥೆ ನೋಡಿದ ಮಕ್ಕಳು ಭಯದಲ್ಲಿ ಶಾಲೆಗೆ ಬಂದು ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಮೂಲಭೂತ ಸೌಲಭ್ಯಗಳು ಇಲ್ಲದೆ ಮಳೆ ಬಂದರೆ ಸಾಕು ಶಾಲೆ ಸೋರುತ್ತಿದೆ. ಆವರಣದಲ್ಲಿ ನೀರು ತುಂಬುವ ಸ್ಥಿತಿ ನಿರ್ಮಾಣವಾಗುತ್ತಿದೆ. ಛಾವಣಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.ಇದಲ್ಲದೇ ಈ ಕುಗ್ರಾಮಕ್ಕೆ ಬಸ್ಸಿನ ಸೌಲಭ್ಯ ಕೂಡ ಇಲ್ಲದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

20 ವರ್ಷದಿಂದ ಯಾವುದೇ ಸುಧಾರಣೆ ಕಾಣದೇ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ನಮ್ಮ ಶಾಲೆಗೆ ಖುದ್ದಾಗಿ ಪರಿಶೀಲನೆಯನ್ನು ಮಾಡಿ ಶಾಲಾ ಕಟ್ಟಡ,ಶಾಲಾ ಆವರಣಗೋಡೆ,ಶುದ್ಧವಾದ ಕುಡಿಯುವ ನೀರು, ಆಟದ ಮೈದಾನಕ್ಕೆ ಪೆವರ್ಸ ಮತ್ತು ಮಕ್ಕಳಿಗೆ ಅನುಗುಣವಾಗಿ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಮಕ್ಕಳ ಹಿತದೃಷ್ಟಿಯಿಂದ ಅತಿ ಜರೂರಾಗಿ ಅನುದಾನ ಬಿಡುಗಡೆ ಮಾಡಿ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಕೆಲ ದಿನಗಳ ಹಿಂದೆ ವಿರಪನಕೊಪ್ಪ ಗ್ರಾಮದ ನೌಕರರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಖಾಸಗಿ ಶಾಲೆಗಳ ಭರಾಟೆ ನಡುವೆ ಸರಕಾರಿ ಶಾಲೆಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿವೆ. ಆದರೂ ಸಹ ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ. 

ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವರೇ ಎಂದು ಕಾದು ನೋಡಬೇಕಾಗಿದೆ.

ಶಾಲೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ನಾನೆ ಖುದ್ದು ಶಾಲೆಗೆ ಬೇಟಿ ನೀಡಿ ಪರಿಶೀಲಿಸಿ  ಸೂಕ್ತ ಕ್ರಮ ಕೈಗೊಳ್ಳುತ್ತೇನೆ. 

.ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ.  ಎಮ್‌.ಎಸ್.ಮೇದಾರ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";