ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಯುವ ಕೃಷಿಕ ಮಹಾಂತೇಶ

ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತೋರಿಸಿಕೊಟ್ಟಿದ್ದಾರೆ ಗೋಕಾಕ್ ತಾಲೂಕು ಬಡಿಗವಾಡ್ ಗ್ರಾಮದ ಯುವ ಕೃಷಿಕ ಮಹಾಂತೇಶ್ ಹಿರೇಮಠ.ತಮಗಿರುವ ಹತ್ತು ಏಕರೆ ಜಮೀನಿನಲ್ಲಿ ಅರಿಶಿಣ, ಕಬ್ಬು, ಗೋವಿನಜೋಳ, ಹೂಕೋಸು, ಎಲೆಕೋಸು, ಟೊಮೇಟೊ ಹೀಗೆ ತರಹೇವಾರಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಇದರ ಜೊತೆ ಮಿಶ್ರಬೆಳೆಯಾಗಿ ತೊಗರಿ ಹೆಸರು ಉದ್ದು ಅಲಸಂದಿ ಬೆಳೆದಿದ್ದು ಕಳೆದ ಹಂಗಾಮಿನಲ್ಲಿ ಕೊತಂಬರಿ ಬೆಳೆಯಲ್ಲಿಯೇ ಐವತ್ತು ಸಾವಿರ ಆದಾಯ ಬಂದಿತ್ತು ನೀರಿಗಾಗಿ ಬಾವಿ ಮತ್ತು ಕೊಳವೆಬಾವಿ ಹೊಂದಿದ್ದು,ಸಂಪೂರ್ಣ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಮಿತಬಳಕೆ ಜೊತೆಗೆ ಮಣ್ಣಿನ ರಕ್ಷಣೆ ಮತ್ತು ಇಳುವರಿ ಹೆಚ್ಚಳಕ್ಕೂ ಕಾರಣವಾಗಿದೆ ಎನ್ನುತ್ತಾರೆ ಮಹಾಂತೇಶ್.

ಉಪಕಸಬು: ಕೃಷಿಯ ಜೊತೆಗೆ ಉಪಕಸಬುಗಳು ಇದ್ದರೆ ಆದಾಯ ಮತ್ತಷ್ಟು ಬಲಬರುವದು ಆ ನಿಟ್ಟಿನಲ್ಲಿ ಉಪಕಸುಬಾಗಿ ಹೈನುಗಾರಿಕೆ ಮತ್ತು ಆಡುಸಾಕಾಣಿಕೆ ಮಾಡಿತ್ತಿದ್ದು, 2 ಎಮ್ಮೆ,4 ಆಕಳುಗಳ ಜೊತೆಗೆ 11 ಆಡುಗಳಿವೆ. ಅದರಿಂದ ಮನೆಗೆ ಹಾಲು ದೊರೆತು ಇನ್ನುಳಿದಿದ್ದನ್ನು ಆದಾಯಕ್ಕೆ ಬಳಸಿಕೊಳ್ಳುತ್ತಾರೆ. ಮೇವಿಗಾಗಿ ಚೋಗಚೆ, ಸುಬಾಬುಲ್, ರೇಷ್ಮೆ, ನೆಪಿಯರ್ ಹುಲ್ಲು ಹಾಕಿದ್ದು ಆಡುಗಳ ಪೌಷ್ಟಿಕ ಮೇವಿಗೆ ಸಹಕಾರಿಯಾಗಿದೆ.

ತಾಜ್ಯ ನಿರ್ವಹಣೆ : ಕೃಷಿಯಲ್ಲಿ ಉಳಿಸಿದ ಒಂದು ರೂಪಾಯಿ ಗಳಿಸಿದ ನೂರು ರೂಪಾಯಿಗೆ ಸಮ ಎಂಬ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಮಹಾಂತೇಶ್ ಪಶುಗಳಿಂದ ಬಂದ ತಾಜ್ಯವನ್ನು ಬಯೋಗ್ಯಾಸ್ ಘಟಕ, ಜೀವಸಾರ ಘಟಕ ಅಳವಡಿಕೊಂಡಿದ್ದು ಇದರಿಂದ ಅಡುಗೆ ಅನಿಲದ ಜೊತೆಗೆ ಉತ್ತಮ ಗುಣಮಟ್ಟದ ಸ್ಲರಿ ಗೊಬ್ಬರ ಕೂಡ ದೊರೆಯುತ್ತಿದೆ. ಜಮೀನಲ್ಲಿರು ತಾಜ್ಯವನ್ನು ಕೂಡಾ ಸೂಕ್ತ ರೀತಿಯಲ್ಲಿ ಬಳಸುತ್ತಾರೆ.

ಬಿ.ಎ ಡಿಗ್ರಿಯಲ್ಲಿ ಡಿಸ್ಟಿಂಕ್ಷಣ ಪಡೆದರೂ ಕೆಲಸಕ್ಕೆ ಅಲೆಯದೆ ಇರುವ ಸ್ವಂತ ಭೂಮಿ, ಉತ್ತಮ ಆರೋಗ್ಯ, ಒಟ್ಟು ಕುಟುಂಬ ದೊಂದಿಗೆ ಇರುವುದು ಕೃಷಿ ಕಡೆಗೆ ಒಲವು ಹೆಚ್ಚಲು ಕಾರಣ.ಎನ್ನುವ ಮಹಾಂತೇಶ್ ಇತ್ತೀಚೆಗೆ ಕನೇರಿಮಠದ ಶ್ರೀ ಕಾಡಸಿದ್ದೇಶ್ವರ ಪೂಜ್ಯರ ಸಾವಯವ ಕೃಷಿ ಕಾರ್ಯಕ್ರಮ ಹಾಗೂ ಕಳೆದ 4 ವರ್ಷದಿಂದ ಗೋಕಾಕ್ ತಾಲೂಕಿನ ರೈತರಲ್ಲಿ ಸಾವಯವ ಕೃಷಿ ಕುರಿತು ರೈತರಿಗೆ ಅರಿವು ಮೂಡಿಸುತ್ತಿರುವ ಐ.ಸಿ.ಐ.ಸಿ.ಐ ಪೌಂಡೇಶನ್ ತರಬೇತಿಗಳಿಂದ ಪ್ರೇರೇಪನೆಗೊಂಡು ಸಾವಯವ ಕೃಷಿಯತ್ತ ವಾಲುತ್ತಿದ್ದು ದಶಪರ್ಣಿ, ವೆಸ್ಟ್ ದಿಕಾಂಪೋಸರ್, ಗೋಕೃಪಾಮೃತ ಹುಳಿಮಜ್ಜಿಗೆ ಕಷಾಯ ಬಳಸಿ ಉತ್ತಮ ಪರಿಣಾಮ ಕಂಡುಕೊಂಡಿದ್ದು ಮುಂಬರುವ ದಿನಗಳಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡುವ ಉದ್ದೇಶ ಹೊಂದಿದ್ದಾರೆ.

ಆದಾಯ: ವಾರ್ಷಿಕ 250 ಟನ್ ರಷ್ಟು ಕಬ್ಬು,60 ಕ್ವಿ. ನಷ್ಟು ಅರಿಷಿನದೊಂದಿಗೆ 10 ಲಕ್ಷದಷ್ಟು ಆದಾಯ ಗಳಿಸುತ್ತಿದ್ದು ಖರ್ಚು ಕಳೆದು 6 ರಿಂದ 7 ಲಕ್ಷದಷ್ಟು ನಿವ್ವಳ ಆದಾಯ ಪಡೆಯುತ್ತಿದ್ದಾರೆ.ಇವರ ಈ ಕೃಷಿ ಕಾಯಕದಲ್ಲಿ ತಮ್ಮ ಸಂತೋಷ, ತಂದೆ ಮಲ್ಲಯ್ಯ ಸೇರಿದಂತೆ ಇಡೀ ಕುಟುಂಬ ಕೈಜೋಡಿಸಿದೆ.

ಚಿತ್ರ ಲೇಖನ :ಆನಂದ ಚೌಗಲಾ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";