“ಹೃದಯ ಮುರಿದ ಸದ್ದು” ನಾಗೇಶ.ನಾಯಕರ:ಕವಿತೆ

ಹೃದಯ ಮುರಿದ ಸದ್ದು

ನೆಪ ಬೇಕಿತ್ತು ನಿನಗೆ….
ಭೇಟಿಯಾಗದೇ ಇರಲು
ನಾನೋ ಅದೇ ನೆಪ ಹುಡುಕಿ
ಹೊರಟಿದ್ದೆ….
ನಿನ್ನ ಕಣ್ತುಂಬಿಕೊಳ್ಳಲು

ದೂರ ಗಾವುದ ದಾರಿ
ಏರು, ದಿನ್ನೆಗಳ ಹತ್ತಿ
ತಿರುವುಗಳ ತಿರುತಿರುಗಿ
ಸಾಗಿದ ಹಾದಿಯ ತುಂಬ
ನಿನದೇ ನೆನಪ ಹೂಗಳು

ಸರಿರಾತ್ರಿಯಲ್ಲೂ ನಿನ್ನದೇ ಕನವರಿಕೆ
ಕಾಣಲು ತುದಿಗಾಲ ಚಡಪಡಿಕೆ
ಚುಮು ಚುಮು ನಸುಕಲ್ಲಿ
ಕಣ್ಣೆಳೆಯುತ್ತಿದ್ದರೂ….
ದಿಗ್ಗನೇ ಎದ್ದು ಕುಳಿತಿದ್ದೆ
ನಿನ್ನ ಸಾಮೀಪ್ಯದ ಸಂಭ್ರಮಕ್ಕೆ

ತೆಕ್ಕೆ ತುಂಬ ನಿರೀಕ್ಷೆಗಳ ಬಾಚಿ
ನೀ ಬರುವ ದಾರಿಗೆ ಕಣ್ಣು ಹಾಸಿದ್ದೆ
ಕೊನೆಗೂ ನೀ ಬರಲೇ ಇಲ್ಲ….
ಬಂದದ್ದು; ‘ಕ್ಷಮೆ ಇರಲಿ, ಬರಲಾಗುತ್ತಿಲ್ಲ’
ಎಂಬ ಪುಟ್ಟ ಸಂದೇಶ!

ಕಣ್ಣಂಚು ಒದ್ದೆಯಾದದ್ದು
ಯಾರಿಗೂ ಕಾಣಲಿಲ್ಲ
ಹೊರಗೆ ನಿಲ್ಲದೆ ಸುರಿವ ಮಳೆ….
ಹೃದಯ ಮುರಿದ ಸದ್ದಿಗೆ
ಬಿದ್ದ ಭಾರಿ ಸಿಡಿಲು ಸಾಕ್ಷಿಯಾಗಿತ್ತು!

 

ನಾಗೇಶ್ ಜೆ. ನಾಯಕ.
ಕವಿಗಳು, ವಿಮರ್ಶಕರು
ಉಡಿಕೇರಿ, ಬೈಲಹೊಂಗಲ
ಮೊಬೈಲ್-೯೯೦೦೮೧೭೭೧೬

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";