ಗ್ರಾ.ಪಂ.ಚುನಾವಣೆ: ಒಂದು ವರ್ಷ ಹತ್ತು ತಿಂಗಳು ಬಳಿಕ ಮರು ಮತ ಎಣಿಕೆ! ಸೋತ ಅಭ್ಯರ್ಥಿಗೆ ಮತ್ತೆ ಸೋಲು.

ಬೆಳಗಾವಿ :ಒಂದು ವರ್ಷ ಹತ್ತು ತಿಂಗಳು ಹಿಂದೆ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಸೋತು ಮರು ಮತ ಎಣಿಕೆಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮತ್ತೆ ಸೋಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಸರಿಯಾಗಿ ಆಗಿಲ್ಲ ಎಂದು ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ ಅವರು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದರು. ಇಂದು ಸಂಕೇಶ್ವರದ ಜೆಎಂಎಪ್​ಸಿ ನ್ಯಾಯಾಲಯದಲ್ಲಿ ಜಡ್ಜ್ ಹಾಗೂ ಹುಕ್ಕೇರಿ ತಹಶೀಲ್ದಾರ ಡಾ‌.ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮತ್ತೊಮ್ಮೆ ಮರು ಮತ ಎಣಿಕೆ ನಡೆಯಿತು. ಮರು ಮತ ಎಣಿಕೆಯಲ್ಲೂ ರಾವಸಾಹೇವ್ ಪಾಟೀಲ್ ಅವರಿಗೆ ಒಂದು ಮತ ಕಡಿಮೆ ಬಂದಿದೆ. ಪರಿಣಾಮ ಜಯದ ನಿರೀಕ್ಷೆಯಲ್ಲಿದ್ದ ರಾವಸಾಹೇಬ್​ ನಿರಾಶೆಗೊಂಡಿದ್ದಾರೆ.

2020ರ ಡಿಸೆಂಬರ್ 30ರಂದು ಗ್ರಾ.ಪಂ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದಿತ್ತು. ಈ ವೇಳೆ 505 ಮತ ಪಡೆದಿದ್ದ ರಾವಸಾಹೇಬ್ ಪಾಟೀಲ್ ಅವರು 506 ಮತ ಪಡೆದ ತವನಪ್ಪ ಹೊಸೂರ ಎಂಬ ಅಭ್ಯರ್ಥಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋಲುಂಡಿದ್ದರು. ಆಗ ಮತ ಎಣಿಕೆ ಸರಿಯಾಗಿಲ್ಲ ಎಂದು ಪರಾಜಿತ ಅಭ್ಯರ್ಥಿ ರಾವಸಾಹೇಬ್ ಸಂಕೇಶ್ವರ ಆರೋಪಿಸಿ, ಸಂಕೇಶ್ವರ್ ಜೆಎಂಎಫ್​ಸಿ ಕೋರ್ಟ್ ಮೊರೆ ಹೋಗಿದ್ದರು.


Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";