ಬೆಳಗಾವಿಯ ನಾಲ್ಕೈದು ಹಾಲಿ ಶಾಸಕರು ಸೇರಿದಂತೆ 16 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್‌ ಡೌಟ್?

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. 

ಈಗಾಗಲೇ ಬಿಜೆಪಿ ವರಿಷ್ಠರ ಜೊತೆ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಆದರೆ ಇತ್ತ ರಾಜ್ಯದಲ್ಲಿ ಈಗಾಗಲೇ ಹಲವಾರು ಸಮೀಕ್ಷೆಗಳನ್ನ ನಡೆಸಿರುವ ಬಿಜೆಪಿಗೆ ಸರ್ವೆಯಿಂದ ದೊಡ್ಡ ಅಘಾತ ಉಂಟಾಗಿದೆ.  

ಪ್ರತಿ ಕ್ಷೇತ್ರದಲ್ಲಿಯೂ ಗೆಲ್ಲುವ ಕುದುರೆ ಹುಡುಕಾಟವನ್ನ ಬಿಜೆಪಿ ನಡೆಸುತ್ತಿದ್ದು, ಪ್ರತಿ ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕು ಎನ್ನುವ ಲೆಕ್ಕಾಚಾರವನ್ನ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ. ಸದ್ಯ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿನ 16 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದು, ಕಮಲ ಪಾಲಯದಲ್ಲಿ ಬಣ ಬಡಿದಾಟ ಪ್ರಾರಂಭವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಸಚಿವರು ಸೇರಿದಂತೆ 16 ಶಾಸಕರಿಗೆ ಬರುವ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ದೆಹಲಿ ಬಿಜೆಪಿ ವರಿಷ್ಕರು ಯೋಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈ ನಾಯಕರಿಗೆ ಟಿಕೆಟ್‌ ಡೌಟ್‌ ?  ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ, ಅಥಣಿ ಕ್ಷೇತ್ರದ ಮಹೇಶ ಕುಮಠಳ್ಳಿ,ಬೆಳಗಾವಿ ಉತ್ತರ ಕ್ಷೇತ್ರದ ಅನೀಲ ಬೆನಕೆ, ರಾಮದುರ್ಗ ಕ್ಷೇತ್ರದ ಮಹಾದೇವಪ್ಪ ಯಾದವಾಡ ಸೇರಿದಂತೆ ಲಂಚ ಪ್ರಕರಣದ ಆರೋಪ ಕೇಳಿ ಬಂದಿರುವ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಇನ್ನೂ ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ವರ್ಚಸ್ಸು ಕಡಿಮೆಯಾಗಿದ್ದು ಈ ಕಾರಣಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಲಾಗಿದೆ. ಮಹಿಳಾ ದೌರ್ಜನ್ಯ ಆರೋಪ ಹೊತ್ತಿರುವ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ನೆಹರೂ ಓಲೇಕಾರ್, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಚಿವ ಗೋವಿಂದ ಕಾರಜೋಳ ಅವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ. ಇನ್ನೂ ವಯಸ್ಸಿನ ಕಾರಣಕ್ಕೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಟಿಕೆಟ್ ನಿರಾಕರಿಸಲಿದ್ದು ಸುರೇಶ್ ಕುಮಾರ್, ಬಸವನಗೌಡ ಪಾಟೀಲ್ ಯತ್ನಾಳ್, ಕೆ.ಜಿ ಬೋಪಯ್ಯ ಸೇರಿದಂತೆ ವಲಸೆ ಬಂದ ಶಾಸಕರಲ್ಲಿ ಮೂರ್ನಾಲ್ಕು ಜನರಿಗೆ ಟಿಕೆಟ್ ಕೊಡುವುದು ಅನುಮಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾವ ಮಾನದಂಡದ ಮೇಲೆ ಟಿಕೆಟ್: ಈ ಬಾರಿ ವಿಧಾನಸಭಾ ಚುನಾವಣೆಯ ಮೂಲಕ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸು ಕಂಡಿರುವ ಬಿಜೆಪಿ ಅಳೆದು ತೂಗಿ ಟಿಕೆಟ್ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಒಂದು ಕಡೆ ಟಿಕೆಟ್ ನೀಡುವ ಮಾನತಂಡದ ಕುರಿತು ಸಾಕಷ್ಟು ಊಹಪೋಹಗಳು ಸೃಷ್ಟಿಯಾಗಿದ್ದು, ಈ ಬಾರಿ ಟಿಕೆಟ್ ನೀಡುವ ಕುರಿತು ಕೆಲವು ಮಾನದಂಡಗಳನ್ನ ಬಿಜೆಪಿ ಹಾಕಿಕೊಂಡಿದೆ. ಈಗಾಗಾಲೇ ಭ್ರಷ್ಟಾಚಾರ ಆರೋಪ ಎದರಿಸುತ್ತಿರುವ ರಾಜ್ಯ ಬಿಜೆಪಿ ಶಾಸಕರು ಯಾವುದೇ ಕಳಂಕಗಳು, ಆರೋಪಗಳು, ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ, ವಯಸ್ಸು ಹಾಗೂ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಟಿಕೆಟ್ ನೀಡುವ ಮಾನದಂಡಗಳನ್ನ ಹೈಕಮಾಂಡ್ ಹಾಕಿಕೊಂಡಿದೆ.

ಗೆಲುವೊಂದೆ ಮಾನದಂಡ, ಹೊಸಬರಿಗೆ ಟಿಕೆಟ್: 2023ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸಿದೆ. ಟಿಕೆಟ್ ಯಾರಿಗೆ ಕೊಡಬೇಕು. ಅನ್ನೋ ಬಗ್ಗೆಯೂ ಚರ್ಚೆ ಆಗ್ತಿದೆ. ವಿಧಾನಸಭಾ ಚುನಾವಣೆಯ ಹೊತ್ತಲ್ಲೆ ಟಿಕೆಟ್ ನೀಡುವ ಮಾನದಂಡದ ಕುರಿತು ಊಹಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ. ಸದ್ಯ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಅನ್ನೋದು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಗೆಲುವೊಂದೆ ಮಾನದಂಡ ಅಂತ ಹೈಕಮಾಂಡ್ ಈಗಾಗಲೇ ಕಡ್ಡಿಮುರಿದಂತೆ ಹೇಳಿದ್ದು, ಹೊಸ ಮುಖಗಳಿಗೆ ಟಿಕೆಟ್ ನೀಡುವ ಚಿಂತನೆಯನ್ನ ಹೈಕಮಾಂಡ್ ಹಾಕಿಕೊಂಡಿದೆ.

ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ್ದು, ಯಾವ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಹಾಲಿ ಶಾಸಕರ ಬದಲಿಗೆ ಹೊಸ ಹಾಗೂ ಯುವ ಮುಖಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಹೈಕಮಾಂಡ್ ಪ್ಲಾನ್ ನಡೆಸಿದ್ದು ಈ ಬಾರಿ ಹೊಸ ಮುಖ್ಯಗಳನ್ನ ಹಾಗೂ ಆರ್ ಎಸ್ ಎಸ್ ಹಿನ್ನೆಲೆ ಉಳ್ಳವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಕೆಲ ಹಾಲಿ ಶಾಸಕರುಗಳಿಗೆ ಆತಂಕ ಎದುರಾಗಿದ್ದು ಟಿಕೆಟ್ ಕೈ ತಪ್ಪುವ ಭೀತಿಯಲ್ಲೇ ಟಿಕೆಟ್ ಗಾಗಿ ಪ್ರಯತ್ನವನ್ನ ನಡೆಸುತ್ತಿದ್ದು, ಈ ಬಾರಿ ಚುನಾವಣೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಬದಲಾವಣೆಯನ್ನ ತರುವನಿಟ್ಟಿನಲ್ಲಿ ಹೈಕಮಾಂಡ್ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಬಾರಿ 16 ಮಂದಿ ಹಾಲಿ ಶಾಸಕರಿಗೆ ಕೈ ತಪ್ಪಲಿದ್ದು ಎಂದು ಹೇಳಲಾಗುತ್ತಿದ್ದು ಯಾರಿಗೆ, ಯಾವ ಮಾನದಂಡ ಮೇಲೆ ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್ ನೀಡುತ್ತೇ ಅಂತ ಕಾದುನೋಡಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";