ಕಬ್ಬು ನುರಿಸುವ ಹಂಗಾಮು: ರೈತ ಪ್ರತಿನಿಧಿಗಳ ಸಭೆ ನ.1 ರ ಬಳಿಕ ಹಂಗಾಮು ಆರಂಭ; ತೂಕ ವಂಚನೆ ಕಂಡುಬಂದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ

 

ವರದಿ: ಬಸವರಾಜ ಚಿನಗುಡಿ

ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರ ಬಳಿಕವೇ ಆರಂಭಿಸಬೇಕು. ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ (ಎಫ್.ಆರ್.ಪಿ.) ದರಗಳನ್ನು ಆಯಾ ಕಾರ್ಖಾನೆಯ ನೋಟಿಸ್ ಬೋರ್ಡಿಗೆ ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ತೂಕದಲ್ಲಿ ಮೋಸ ಕಂಡುಬಂದರೆ ಅಂತಹ ಕಾರ್ಖಾನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ 2023-24 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ಶನಿವಾರ ನಡೆದ ರೈತ ಪ್ರತಿನಿಧಿಗಳ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು.

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಕಾನೂನಾತ್ಮಕ ವ್ಯಾಪ್ತಿಯಲ್ಲಿ ಈಡೇರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ರಾಜ್ಯ ಅಥವಾ ಕೇಂದ್ರ ಸರಕಾರದ ಮಟ್ಟದಲ್ಲಿ ಇರುವ ವಿಷಯಗಳನ್ನು ಸಂಬಂಧಿಸಿದವರ‌ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ ನೀಡಿದರು.

ರೈತ ಪ್ರತಿನಿಧಿಗಳು ನೀಡಿದ ಸಲಹೆಗಳನ್ನು ಹಾಗೂ ಪರಿಹಾರ ಕ್ರಮಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಕರಡು ಎಫ್.ಆರ್.ಪಿ. ದರಗಳ ಪ್ರತಿಗಳನ್ನು ಎಲ್ಲ ರೈತ ಪ್ರತಿನಿಧಿಗಳಿಗೆ ನೀಡುವುದರ ಜತೆಗೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತೂಕ ವಂಚನೆ-ಕಾನೂನು ಕ್ರಮ:

ತೂಕ ಮತ್ತು ಅಳತೆಯಲ್ಲಿ ಏನೇ ಲೋಪದೋಷಗಳು ಅಥವಾ ವ್ಯತ್ಯಾಸ ಕಂಡುಬಂದಾಗ ರೈತರು ದೂರು ನೀಡಿದಾಗ ಎಲ್ಲರ ಸಮಕ್ಷಮದಲ್ಲಿ ಪರಿಶೀಲಿಸಿ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ನಿತೇಶ್ ಪಾಟೀಲ ತಿಳಿಸಿದ ಅವರು ರೈತರೇ ಸರಕಾರದ ಸಹಾಯಧನ ಪಡೆದುಕೊಂಡು ತೂಕಯಂತ್ರ (ವೇಬ್ರಿಡ್ಜ್) ಸ್ಥಾಪಿಸಿಕೊಳ್ಳಬಹುದು. ಈ ಬಗ್ಗೆಯೂ ರೈತ ಪ್ರತಿನಿಧಿಗಳು ಚಿಂತನೆ ಮಾಡಬಹುದು ಎಂದು ಸಲಹೆ ನೀಡಿದರು.

ಒಂದು ವೇಳೆ ಕಬ್ಬು ಪೂರೈಕೆದಾರರು ಹೊರಗಡೆ ತೂಕ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಕಬ್ಬು ನಿರಾಕರಿಸುವಂತಿಲ್ಲ; ಆದರೆ ಕಾರ್ಖಾನೆಯ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಸಭೆಯಲ್ಲಿ ರೈತ ಪ್ರತಿನಿಧಿಗಳು ನೀಡಿದ ಎಲ್ಲ ಸಲಹೆಗಳನ್ನು ಆಧರಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈಗಾಗಲೇ ಆರಂಭಿಸಲಾಗಿರುವ ಅಳಗವಾಡಿಯ ಕಾರ್ಖಾನೆಯ ಕುರಿತು ಪರಿಶೀಲಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಮಾತನಾಡಿ ಕಾರ್ಖಾನೆ ಆರಂಭಿಸುವಾಗ ಕಡ್ಡಾಯವಾಗಿ ಪ್ರತಿದಿನ ಒಂದೊಂದು ಕಾರ್ಖಾನೆಯ ತೂಕ ಯಂತ್ರಗಳನ್ನು ಪರಿಶೀಲಿಸಬೇಕು. ಕಬ್ಬು ಪೂರೈಕೆದಾರ ರೈತರು ಹೊರಗಡೆ ತೂಕ‌ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಅವರನ್ನು ಒಳಗೆ ಬಿಡದಿದ್ದರೆ ಅಂತಹ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ಡಾ.ಖಂಡಗಾವಿ, ಸಕ್ಕರೆ ಇಳುವರಿ, ಎಚ್ ಆ್ಯಂಡ್ ಟಿ ನಿಗದಿ ಮತ್ತಿತರ ವಿಷಯಗಳನ್ನು ತಿಳಿಸಿದರು.

ಸರಕಾರಿ ತೂಕಯಂತ್ರ ಸ್ಥಾಪನೆಗೆ ರೈತ ಪ್ರತಿನಿಧಿಗಳ ಸಲಹೆ:

ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರನ್ನು ಕೂಡ ಸಭೆಗೆ ಕರೆಸಿ ಚರ್ಚಿಸಿದಾಗ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಎಲ್ಲರ ಉಪಸ್ಥಿತಿಯಲ್ಲಿಯೇ ಸಭೆ ನಡೆಸಲು ರೈತರು ಮನವಿ ಮಾಡಿಕೊಂಡರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ರೈತ ಪ್ರತಿನಿಧಿಗಳ ಜತೆ ಚರ್ಚಿಸಿ ಸದರಿ ನಡಾವಳಿಯನ್ನು ಮಂಡಳಿಗೆ ಕಳಿಸಲಾಗುವುದು. ಮಂಡಳಿ ರಚನೆಗೆ ಕೂಡ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದರು.

   ಸಭೆಯಲ್ಲಿ ಸೇರಿದ ರೈತ ಪ್ರತಿನಿಧಿಗಳು

ವಿವಿಧ ಮುಖಂಡರು ಸಭೆಯಲ್ಲಿ ಮಾತನಾಡಿ, ಕೆಲ ಕಾರ್ಖಾನೆಗಳು ದರ, ತೂಕದಲ್ಲಿ ಮೋಸ ಮಾಡುತ್ತಿರುವುದರಿಂದ ಕಾರ್ಖಾನೆಯ ಬದಲಾಗಿ ಪ್ರತ್ಯೇಕ ಸರಕಾರಿ ತೂಕ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು; ಅಂತಹ ಕೇಂದ್ರಗಳಲ್ಲಿ ನಿಗದಿಪಡಿಸಿದ ತೂಕದ ಪ್ರಕಾರವೇ ಕಾರ್ಖಾನೆಗಳು ಬಿಲ್ ಪಾವತಿಸಬೇಕು ಅಂದಾಗ ಮಾತ್ರ ತೂಕದಲ್ಲಿನ ಮೋಸವನ್ನು ತಡೆಗಟ್ಟುವುದು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ರೈತ ಮುಖಂಡರಾದ ಸುಭಾಷ್ ಶಿರಬೂರ ಅವರು, ಅವೈಜ್ಞಾನಿಕ ಎಫ್.ಆರ್.ಪಿ. ನಿಗದಿ, ಅವೈಜ್ಞಾನಿಕ ಕಬ್ಬು ಮತ್ತು ಕಟಾವು ಪದ್ಧತಿಯಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಪ್ರತಿಪಾದಿಸಿದರು.

ರೈತ ಮುಖಂಡರಾದ ಜೋಶಿ ಅವರು ರಿಕವರಿ ಯಂತ್ರಗಳನ್ನು ಅಳವಡಿಸಬೇಕು; ಕಬ್ಬು ಕಟಾವು ಆದ ತಕ್ಷಣವೇ ತೂಕ‌ ಮಾಡಬೇಕು; ತೂಕ ವ್ಯವಸ್ಥೆ ಡಿಜಿಟಲ್ ಆಗಬೇಕು ಎಂದು ಒತ್ತಾಯಿಸಿದರು.

ರಾಮನಗೌಡ ಪಾಟೀಲ, ಜಯಶ್ರೀ ಗುರಣ್ಣವರ, ಲಿಂಗರಾಜ ಪಾಟೀಲ, ಚೂನಪ್ಪ‌ ಪೂಜಾರಿ, ಶಿವಶಿಂಗ್ ಮೊಖಾಶಿ ಮತ್ತಿತರ ರೈತ ಮುಖಂಡರು ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಪ್ರೊಬೋಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಆಹಾರ, ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುಪಾಲನೆ ಹಾಗೂ ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್, ಪಡೆಪ್ಪ ಬೋಗೂರ, ಈರಣ್ಣ ಅಂಗಡಿ, ಸಂಜೀವಕುಮಾರ ತಿಲಗರ, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ, ಉಪ ನಿರ್ದೇಶಕರು ರೇಷ್ಮೆ ಇಲಾಖೆ, ಜಂಟಿ ನಿರ್ದೇಶಕರು ಕೈಗಾರಿಕಾ ಇಲಾಖೆ, ಸಹಾಯಕ ನಿಯಂತ್ರಕರು ತೂಕ ಮಾಪನ ಇಲಾಖೆ, ಜಿಲ್ಲಾ ಪರಿಸರ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";