ಯೋಗೀಶಗೌಡ ಕೊಲೆ ಪ್ರಕರಣ: ಸಾಕ್ಷ್ಯ ನಾಶ ಆರೋಪ; ವಿನಯ್‌ ಕುಲಕರ್ಣಿಗೆ ಮತ್ತೊಂದು ಸಂಕಷ್ಟ

ಧಾರವಾಡ (ಸೆ.30): ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ಸಾಕ್ಷ್ಯ ನಾಶ ಕೇಸ್‌ನ ಬಿ ರಿಪೋರ್ಟ್ ಮರು ತನಿಖೆಗೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. 

2016ರ ಜೂನ್ 15ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ಈಗಾಗಲೇ ಸಿಬಿಐ ತನಿಖೆಯಲ್ಲಿ ವಿನಯ್‌ ಕುಲಕರ್ಣಿ ಜೈಲಿಗೆ ಹೋಗಿ ಬಂದಿದ್ದಾರೆ. ಸಾಕ್ಷ್ಯನಾಶದ ಕೇಸ್‌ನಲ್ಲಿ ವಿನಯ್‌ ಕುಲಕರ್ಣಿ ಆರೋಪಿ ಆಗಿದ್ದಾರೆ. ವಿನಯ್‌ ಕುಲಕರ್ಣಿ ಈಗಾಗಲೇ ಸಿಬಿಐ ಕೇಸ್‌ನಲ್ಲಿ ಜಾಮೀನಿನ ಮೇಲಿದ್ದು ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧದಲಿದ್ದಾರೆ.

ಜಿಲ್ಲಾ ಪ್ರವೇಶಕ್ಕೆ ಕಸರತ್ತು ನಡೆಸಿರುವಾಗಲೇ ವಿನಯ್‌ ಕುಲಕರ್ಣಿ ಇದೀಗ ಮತ್ತೊಂದು ಹಿನ್ನಡೆಯಾಗಿದೆ. 2018ರ ಸಾಕ್ಷ್ಯನಾಶದ ಕೇಸ್‌ನಲ್ಲಿ ಬಿ ರಿಪೋರ್ಟ್ ಆಗಿತ್ತು.  ಧಾರವಾಡ ಉಪನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಗುರುನಾಥಗೌಡ ಮೇಲೆ ರಾಜಿ ಒತ್ತಡ ಹಾಕಿ ಸಾಕ್ಷ್ಯ ನಾಶ ಮಾಡಿರೋ ಆರೋಪ ವಿನಯ್‌ ಕುಲಕರ್ಣಿ ಮೇಲಿದೆ. 

ಗುರುನಾಥಗೌಡ, ಮೃತ ಯೋಗೀಶಗೌಡ ಸೋದರರಾಗಿದ್ದಾರೆ. ಕೆಲ ಪೊಲೀಸ್ ಅಧಿಕಾರಿಗಳ ಮೂಲಕ ರಾಜಿ ಸಂಧಾನ ಯತ್ನ ನಡೆದಿತ್ತು. ಈ ಬಗ್ಗೆ ಗುರುನಾಥಗೌಡ ಆಡಿಯೋ, ವಿಡಿಯೋ ಸಾಕ್ಷಿ ಕಲೆ ಹಾಕಿದ್ದರು. ಅದನ್ನೇ ಮುಂದಿಟ್ಟುಕೊಂಡು ಗುರುನಾಥಗೌಡ ಕೋರ್ಟ್‌ಗೆ ಹೋಗಿದ್ದರು. ಅದರ ಬಗ್ಗೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚಿಸಿತ್ತು.  

ವಿನಯ್‌ ಕುಲಕರ್ಣಿ, ಡಿವೈಎಸ್ಪಿ ಸುಲ್ಪಿ ಸೇರಿ ಅನೇಕ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಬಗ್ಗೆ ಡಿಸಿಪಿ ಗುನಾರೆ ನೇತೃತ್ವದ ತಂಡ ತನಿಖೆ ನಡೆಸಿದೆ. ಗುನಾರೆ ನೇತೃತ್ವದ ತಂಡದಿಂದ  ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಈ ಬಿ ರಿಪೋರ್ಟ್ ವಿರುದ್ಧ ಗುರುನಾಥಗೌಡ ಪುನಃ ಕೋರ್ಟ್ ಮೊರೆ ಹೋಗಿದ್ದರು. ಗುರುನಾಥಗೌಡ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಪುನಃ ತನಿಖೆ ನಡೆಸುವಂತೆ ಆದೇಶ ನೀಡಿದೆ. 

ಈ ಕೇಸ್ ಸಹ ಸಿಬಿಐಗೆ ವಹಿಸಲು ಯೋಗೀಶಗೌಡ ಕುಟುಂಬದ ಪರ ಹೋರಾಟಗಾರ ಬಸವರಾಜ್ ಕೊರವರ ಆಗ್ರಹಿಸಿದ್ದಾರೆ. ಸಿಬಿಐಗೆ ಕೊಡದೇ ಹೋದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ. 

 

 

 

 

 

ಕೃಪೆ:ಸುವರ್ಣಾ ಟಿವಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";