ಕಾಂಗ್ರೆಸ್ ಬಂಡಾಯದ ಲಾಭ ಗಿಟ್ಟಿಸಲು ಮತ್ತೇ ಮುಂದಾದ ದೊಡ್ಡಗೌಡರ

ಆರ್ ಎಸ್ ಎಸ್ ಹಿಡಿತದಲ್ಲಿ ಆಕಾಂಕ್ಷಿಗಳ ಟಿಕೇಟ್ !

ಸೋಲು ಗೆಲುವಿನ ಲೆಕ್ಕಾಚಾರದ ಟಾರ್ಗೆಟ್ ಫಿಕ್ಸ್

ಚುನಾವಣೆ ಸಮೀಪಿಸುತ್ತಿರುವಂತೆ ಬೆಳಗಾವಿ ಬಿಜೆಪಿ ರಾಜಕಾರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಂಘ ಸರದಾರರಿಗೆ ಭಯ-ಭಕ್ತಿಯಿಂದ ನಡೆದುಕೊಳ್ಳುವ ವಿಧೇಯರನ್ನು ಮಾತ್ರ ಈ ಬಾರಿ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಗಂಭೀರ ಕಾರ್ಯಾಚರಣೆಗೆ ಆರೆಸ್ಸೆಸ್ ಸೂತ್ರಧಾರರು ಮುಂದಾಗಿದ್ದಾರೆ.

ಶಾಸಕ ಆಗುವ ಏಕೈಕ ಆಸೆಯಿಂದ ಬಿಜೆಪಿಗೆ ವಲಸೆ ಬಂದವರನ್ನು ಚುನಾವಣಾ ಪ್ರಚಾರದ ಚಾಕರಿಗಷ್ಟೆ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಹೆಣೆಯಲಾಗಿದೆ.

ಕೆಲ ಕ್ಷೇತ್ರಗಳಲ್ಲಿ ಒರಿಜಿನಲ್ ಸಂಘಿಗಳು ಅಥವಾ ಹಿಂದುತ್ವದ ತತ್ವಾದರ್ಶಗಳನ್ನು ಕಾಯಾ-ವಾಚಾ-ಮನಸಾ ಮೈಗೂಡಿಸಿಕೊಂಡಿರುವ ’ಪರಿವರ್ತಿತ’ರಿಗಷ್ಟೆ ಕೇಸರಿ ಟಿಕೆಟ್ ಕೊಡಲಾಗುತ್ತದೆ ಎಂಬ ಊಹಾಪೋಹದ ಚರ್ಚೆ ಹಲವು ತಿಂಗಳುಗಳಿಂದ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ನಡೆದಿತ್ತು.

ಕಳೆದೊಂದು ವಾರದಿಂದ ಜಿಲ್ಲೆಯ ಬಿಜೆಪಿ ವಲಯದಿಂದ ಹೊರಬರುತ್ತಿರುವ ಬಾತ್ಮಿಗಳು ಹಲವು ಹಾಲಿ ಶಾಸಕರಾದ ಮಹಾದೇವಪ್ಪ ಯಾದವಾಡ,ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ ಅವರಿಗೆ ಈ ಸಲ ಟಿಕೆಟ್ ಕೊಡಲು ಸಂಘ ಪರಿವಾರ ಸರದಾರರು ಸುತಾರಾಮ್ ಸಿದ್ಧರಿಲ್ಲ; ಇಲ್ಲಿ ಹೊಸಬರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂಬ ಸಂದೇಶವನ್ನು ಸಾರಲಾಗುತ್ತಿತ್ತು.

ಅದೇ ಪ್ರಕಾರ ಬೆಳಗಾವಿ ಉತ್ತರಕ್ಕೆ ಅನಿಲ ಬೆನಕೆ ಬದಲಾಗಿ ಡಾ.ರವಿ ಪಾಟೀಲ ಹಾಗೂ ರಾಮದುರ್ಗಕ್ಕೆ ಮಹಾದೇವಪ್ಪ ಯಾದವಾಡ ಬದಲಾಗಿ ಚಿಕ್ಕ ರೇವಣ್ಣ ಅವರನ್ನು ಬಿಜೆಪಿ ಟಿಕೆಟ್ ನೀಡಿ ಹೊಸಬರಿಗೆ ಮಣೆ ಹಾಕಿದೆ. ಆದರೆ ಕಳೆದ ಚುನಾವಣೆಯಲ್ಲಿ ವಿರೋಧ ಪಕ್ಷದವರ ಮತ ವಿಭಜನೆಯಿಂದ ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಮಹಾಂತೇಶ ದೊಡ್ಡಗೌಡರ 33 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಈ ಬಾರಿ ಆಡಳಿತ ವಿರೋಧಿ ಅಲೆ ಮದ್ಯೆ ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಯಶಸ್ವಿಯಾಗಿದ್ದಾರೆ.

ಪಕ್ಷದೊಳಗಿನ ಅಂತರಿಕ ಬೇಗುದಿ ಈಗಷ್ಟೇ ಶಮನಗೊಂಡಿದ್ದರೂ ಬಂಡಾಯದ ಬಾವುಟ ಹಾರಿಸಲು ಸಜ್ಜಾದ ಇತರೆ ಬಿಜೆಪಿ ಪಕ್ಷದ ಆಕಾಂಕ್ಷಿಗಳ ಮನವೊಲಿಸುವ ಪ್ರಯತ್ನ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದಲ್ಲಿ ಕಾಂಗ್ರೆಸ್ ಬಂಡಾಯದ ಲಾಭ ಗಿಟ್ಟಿಸಲು ಈ ಕ್ಷೇತ್ರದಲ್ಲಿ ಹಾಲಿ ಶಾಸಕ ದೊಡ್ಡಗೌಡರ ಅವರಿಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";