ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಬಿಸಿನೀರು ಎರಚಿದ ಶಿಕ್ಷಕ

ಉಮೇಶ ಗೌರಿ (ಯರಡಾಲ)

ರಾಯಚೂರು: ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಬಿಸಿನೀರು ಎರಚಿ ವಿಕೃತಿ ಮೆರೆದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶಾಲಾ ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಸಂತೆಕಲ್ಲೂರು ಶ್ರೀಘನಮಠೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಿಗೆಪ್ಪ ಎಂಬಾತ ವಿದ್ಯಾರ್ಥಿಯ ಮೇಲೆ ಬಿಸಿ ನೀರು ಎರಚಿ ಅಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕಲ್ಲೂರು ಶ್ರೀಘನಮಠೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 2 ರಂದು ಘಟನೆ ನಡೆದಿತ್ತು.

ತರಗತಿಯಲ್ಲಿ 2ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಶಿಕ್ಷಕ ಹುಲಿಗೆಪ್ಪ ಬಿಸಿ ನೀರು ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಬಿಸಿನೀರಿನ ತಾಪಕ್ಕೆ ವಿದ್ಯಾರ್ಥಿಯ ದೇಹದ ಶೇ 40% ರಷ್ಟು ಭಾಗ ಸುಟ್ಟು ಹೋಗಿದೆ. ಘಟನೆ ನಡೆದ ಬೆನ್ನಲ್ಲೇ ಗಂಭೀರ ಆರೋಪ ಹೊತ್ತಿರುವ ಶಿಕ್ಷಕ ಶಾಲೆಗೆ ಗೈರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳು ಬಾಲಕನಿಗೆ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದು ವಾರವಾದರೂ ಈವರೆಗೆ ಪ್ರಕರಣ ದಾಖಲಾಗಿಲ್ಲ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ದೂರು ದಾಖಲಿಸದಂತೆ ಪ್ರಭಾವಿಗಳಿಂದ ಬಾಲಕನ ಪೋಷಕರಿಗೆ ಒತ್ತಡ ಹೇರಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

Share This Article
";