Friday, September 20, 2024

ಕಿತ್ತೂರು ಚನ್ನಮ್ಮನ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈಶ್ವರ ಹೋಟಿಯವರಿಗೆ ಸನ್ಮಾನ

ಬೈಲಹೊಂಗಲ: ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಂಗಸಂಸ್ಥೆಯಾದ ಹಾಗೂ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ಏಕೈಕ ಬೃಹತ್ ಪ್ರಮಾಣದ ಪತ್ರಕರ್ತರ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿ (ಲೇಖನ)ಗಳಿಗೆ ಕೊಡಮಾಡುವ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಗರದ ಗಣಾಚಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರು ಚನ್ನಮ್ಮನ 193 ನೆಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲ್ಲಿ ಬದ್ಧತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಸಾಮಾಜಿಕ ಕಳಕಳಿ ಹೊಂದಿದ ವಿಭಿನ್ನ ಹಾಗೂ ವಿಶಿಷ್ಟ ವರದಿಗಳಿಗೆ ಹೆಸರುವಾಸಿಯಾಗಿರುವ ಈಶ್ವರ ಹೋಟಿಯವರ ಸೇವೆ ಹಾಗೂ ಸಾಧನೆಗಾಗಿ ಸತ್ಕರಿಸಿ ಗೌರವಿಸಲಾಯಿತು.

ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾಧಕರನ್ನು ಅಭಿನಂದಿಸಿ ಮಾತನಾಡಿ ನಾಡಿನ ಹೆಮ್ಮೆಯ ವೀರ ವನಿತೆ ಕಿತ್ತೂರು ಚನ್ನಮ್ಮನ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಅತ್ಯಂತ ಅರ್ಥಪೂರ್ಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಳವಡಿ ಸೋಮೇಶ್ವರ ಕಾರ್ಖಾನೆಯ ಉಪಾಧ್ಯಕ್ಷರಾದ ರಾಜು ಕುಡಸೋಮಣ್ಣವರ, ಪುರಸಭೆ ಸದಸ್ಯೆ, ಪಿಕೆಪಿಎಸ್ ನಂ.1 ರ ಅಧ್ಯಕ್ಷರಾದ ಪ್ರೇಮಾ ಇಂಚಲ, ಉಪಾಧ್ಯಕ್ಷರಾದ ನಿವೃತ್ತ ಯೋಧ ಶಶಿಧರ ಮೂಗಿ, ವಿಜಯಲಕ್ಷ್ಮೀ ಸಹಕಾರಿ ಪತ್ತಿನ ಅಧ್ಯಕ್ಷ, ನ್ಯಾಯವಾದಿಗಳಾದ ಮಹಾಂತೇಶ ಏಣಗಿ, ಉಪಾಧ್ಯಕ್ಷರಾದ ಕುಮಾರಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು. ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ, ಕಾಡಾ ಅಧ್ಯಕ್ಷರಾದ ಡಾ.ವಿಶ್ವನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ, ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಉದ್ಯಮಿ, ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಶಾಸಕ, ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಅಧ್ಯಕ್ಷರಾದ ಪಂಚನಗೌಡ ದ್ಯಾಮನಗೌಡರ, ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ಬೋಳಣ್ಣವರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಶಂಕರ ಮಾಡಲಗಿ, ರೋಹಿಣಿ ಪಾಟೀಲ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ, ದಾವಣಗೆರೆ ಮಾಜಿ ಮೇಯರ್ ಅಜಯಕುಮಾರ, ಅಶೋಕ ಗೋಪನಾಳ, ಮುರಗೇಶ ಗುಂಡ್ಲೂರ,ಮಹೇಶ ಹರಕುಣಿ  ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸ್ವಾತಿ ಢವಳೆ ಪ್ರಾರ್ಥಿಸಿದರು. ಎಫ್.ಎಸ್ ಸಿದ್ಧನಗೌಡರ ಸ್ವಾಗತಿಸಿದರು. ಮಂಜುಳಾ ಹುದಲಿ ನಿರೂಪಿಸಿದರು.

ಜಿಲ್ಲೆ

ರಾಜ್ಯ

error: Content is protected !!