Friday, September 20, 2024

ಪಂಚಮಸಾಲಿ ಸ್ವಾಮೀಜಿಗೆ ಬಸವಣ್ಣನವರ ಹೆಸರು ಹೇಳುವ ನೈತಿಕತೆಯೇ ಇಲ್ಲ: ಪುಟ್ಟಸಿದ್ಧಶೆಟ್ಟಿ.

ಹುಬ್ಬಳ್ಳಿ: ಪಂಚಮಸಾಲಿ ಪೀಠದ ಸ್ವಾಮೀಜಿಯಾಗಿರುವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಬಸವಣ್ಣನವರ ಹೆಸರು ಹೇಳುವ ನೈತಿಕತೆಯೇ ಇಲ್ಲ. ಅಲ್ಲದೇ ಸ್ವಾಮೀಜಿ ಆದವರು ಅನ್ನದಾಸೋಹ ಮಾಡಬೇಕು ವಿನಃ ಅನ್ನ ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜ ಒಕ್ಕೂಟದ ಅಧ್ಯಕ್ಷ ಹಾಗೂ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಸ್ವಾಮೀಜಿ ಆದವರು ಅನ್ನದಾಸೋಹದ ಮೂಲಕ ಮತ್ತೊಬ್ಬರಿಗೆ ಅನ್ನಹಾಕುವ ಕೆಲಸ ಮಾಡಬೇಕು. ಅದನ್ನು ಬಿಟ್ಟು 2ಎ ಸೇರ್ಪಡೆಗೆ ಹೋರಾಟ ಮಾಡುವ ಮೂಲಕ 102 ಜಾತಿಯ ಕಾಯಕ ಸಮಾಜದ ಅನ್ನವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಸಮಾಜ ಬಾಹಿರ ಕಾರ್ಯವಾಗಿದೆ‌ ಎಂದರು.

ಪಂಚಮಸಾಲಿ ಸಮಾಜದವರು ಈಗ 5% ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನು ಹೆಚ್ಚಿಸಿಕೊಳ್ಳಲಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ 2ಎ ಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡಲು ನೀವು ನಡೆಸುತ್ತಿರುವ ಹೋರಾಟ ಇದು ಬಡ ಜಾತಿಗಳ ಬದಕುವ ಹಕ್ಕನ್ನು ಕಿತ್ತುಕೊಳ್ಳುವ ಷಡ್ಯಂತ್ರ ಮಾಡಿದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಸಿಎಂ ಬಸವರಾಜ ಬೊಮ್ಮಾಯಿಯವರು ಪಂಚಮಸಾಲಿ ಸ್ವಾಮೀಜಿಯ ರಾಜಕೀಯ ತಂತ್ರಗಾರಿಕೆ ಮಾತುಗಳಿಗೆ ಒಳಗಾಗಿ ಯಾವುದೇ ರೀತಿಯಲ್ಲಿ 2ಎ ಸೇರ್ಪಡೆ ಮಾಡಕೂಡದು. ಒಂದು ವೇಳೆ ಮಾಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

 

ಜಿಲ್ಲೆ

ರಾಜ್ಯ

error: Content is protected !!