Friday, September 20, 2024

ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ; ಪ್ರಶಾಂತ್ ಕಿಶೋರ್

ಸುದ್ದಿ ಸದ್ದು ನ್ಯೂಸ್

ಲೇಖಕರು: ವಿವೇಕಾನಂದ. ಹೆಚ್.ಕೆ.

ಭಾರತದ ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ.ಪ್ರಶಾಂತ್ ಕಿಶೋರ್…..

ಬಹುಶಃ ಇಲ್ಲಿಯವರೆಗೂ ಈತ ಮಾಡಿದ ಎಲ್ಲಾ ತಂತ್ರಗಳು ಬಹುತೇಕ ಯಶಸ್ವಿಯಾಗಿ ಆ ಪಕ್ಷಗಳು ಚುನಾವಣೆಯಲ್ಲಿ ಗೆದ್ದಿವೆ. ಆತನ ರಾಜಕೀಯ ದೂರದೃಷ್ಟಿಯ ಯೋಚನೆಗಳೋ ಅಥವಾ ಮತದಾರರ ಮನಸ್ಥಿತಿಯ ಸೂಕ್ಷ್ಮತೆ ಅರಿಯುವ ಸಾಮರ್ಥ್ಯವೋ ಅಥವಾ ಜನರ ಮನಸ್ಥಿತಿಯನ್ನು ಒಂದು ದಿಕ್ಕಿಗೆ ತಿರುಗಿಸುವ ಆತನ ಸಂಸ್ಥೆಯ ಯೋಜನೆಗಳೋ ಅಥವಾ ಆತ ಬೆಂಬಲಿಸುವ ಪಕ್ಷದ ಸಂಘಟನೆಗಳೊಂದಿಗೆ ಆತನ ಅತ್ಯುತ್ತಮ ಸಮನ್ವಯವೋ ಅಥವಾ ಭಾರತದ ಮತದಾರರ ಅಪ್ರಬುದ್ದತೆಯ ದುರುಪಯೋಗವೋ…… 

ಹೀಗೆ ಯಾವ ಕಾರಣ ಇರಬಹುದು ಎಂದು ಯೋಚಿಸುತ್ತಾ ಇರುವಾಗ……

ಅನೇಕ ರಾಜಕೀಯ ನಾಯಕರ ಜೊತೆ ಪ್ರಶಾಂತ ಕಿಶೋರ

ಅಪರೂಪದ ಕೆಲವು ಚುನಾವಣಾ ಉದಾಹರಣೆ ಹೊರತುಪಡಿಸಿ ಬಹುತೇಕ ಭಾರತದ ರಾಜಕೀಯದಲ್ಲಿ ಹಣ ಹೆಂಡ ಸೀರೆ ಪಂಚೆ ಜಾತಿ ಧರ್ಮ ‌ಅಜ್ಞಾನ ಸುಳ್ಳು ಭರವಸೆ ಮಾತಿನ ಮೋಡಿ ಮುಂತಾದ ಅಂಶಗಳೇ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುತ್ತವೆ. ಕೆಲವೊಮ್ಮೆ ಮಾತ್ರ ಜನರ ಆಕ್ರೋಶ ಅಥವಾ ಸ್ಪಂದನೆ ಅತ್ಯುತ್ತಮ ರೀತಿಯಲ್ಲಿ ವ್ಯಕ್ತವಾಗಿರುವುದು ಸಹ ಅಷ್ಟೇ ಸತ್ಯ.

ಆದರೆ ಈಗ ಕಾರ್ಪೊರೇಟ್ ತಂತ್ರಗಾರನೊಬ್ಬ ಉದಯಿಸಿದ್ದಾನೆ. ಬಹುತೇಕ ಪಕ್ಷಗಳು ಆತನಿಗೆ ದಂಬಾಲು ಬಿದ್ದಿವೆ. ಆತನು ಸಹ ಭಾರತದ ಚುನಾವಣಾ ಕಣದಲ್ಲಿ ಮುಖ್ಯವಾಹಿನಿಗೆ ಪ್ರವೇಶಿಸಿಯಾಗಿದೆ.

ಮತದಾರರ ಬೌದ್ಧಿಕ ದಿವಾಳಿತನ ತಂತ್ರಗಾರಿಕೆಯ ಮೇಲುಗೈಗೆ ಕಾರಣವೋ ಅಥವಾ ಜನರ ಭೌದ್ಧಿಕ ಮಟ್ಟಕ್ಕೆ ತಕ್ಕ ಯೋಜನೆ ರೂಪಿಸುವ ಆತನ ಕುಶಲತೆ ಕಾರಣವೋ ಇನ್ನೂ ಸ್ಪಷ್ಟವಾಗುತ್ತಿಲ್ಲ. ಇದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೋ ಅಥವಾ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಆಗುವ ಸಾಧ್ಯತೆ ಇದೆಯೇ ಎಂಬುದು ಸಹ ತಿಳಿಯುತ್ತಿಲ್ಲ. 

ಕಾರ್ಪೊರೇಟ್ ತಂತ್ರಗಾರಿಕೆ ಮತದಾರರನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದರೆ ಅದು ಪ್ರಜಾಪ್ರಭುತ್ವದ ವಿನಾಶಕ್ಕೆ ಅಥವಾ ಪ್ರಜಾಪ್ರಭುತ್ವ ಕೇವಲ ಒಂದು ಪ್ರಹಸನ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಏಕೆಂದರೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ತನ್ನ ಪ್ರತಿನಿಧಿಗಳನ್ನು ತಾನೇ ಚುನಾವಣೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತದೆ. ಅನೇಕ ದೌರ್ಬಲ್ಯಗಳ ನಡುವೆ ಕುಂಟುತ್ತಾ ಸಾಗುತ್ತಿದೆ. ಕೆಲವು ಕಡೆ ಹೊಸ ಪ್ರಯೋಗಗಳು ನಡೆಯುತ್ತಿವೆ. ಆದರೂ ಜಾತಿ ಧರ್ಮ ಭ್ರಷ್ಟಾಚಾರ ಕಡಿಮೆ ಏನೂ ಆಗಿಲ್ಲ ನಿಜ. ಆದರೆ ಅದರ ಜಾಗದಲ್ಲಿ ಈ‌ ಕಾರ್ಪೊರೇಟ್ ದಗಲ್ಬಾಜಿಗಳು ಪ್ರವೇಶಿಸಿ ಯಶಸ್ವಿಯಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಅನುಮಾನವಿದೆ.

ಮಾನವೀಯ ಮೌಲ್ಯಗಳ ನಿರಂತರ ಕುಸಿತದ ಈ ಜಾಗತೀಕರಣದ ಉಚ್ಛ್ರಾಯ ಸ್ಥಿತಿಯಲ್ಲಿ ಅಸಹಾಯಕ ಧ್ವನಿ ಕೇಳದೇ ಹೋದರೆ ಏನು ಗತಿ. ಚುನಾವಣೆಯೂ ಸಂಪೂರ್ಣ ವ್ಯಾಪಾರಿಕರಣವಾದರೆ ಮೌಲ್ಯಗಳ ಪರಿಸ್ಥಿತಿ ಏನಾಗಬಹುದು ಊಹಿಸಿ.

ಇದೇ ಪ್ರಶಾಂತ್ ಕಿಶೋರ್ ಒಮ್ಮೆ ಬಲಪಂಥೀಯ ಚಿಂತನೆಯ ಪಕ್ಷದ ಪರವಾಗಿ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾಗಿ ಮತ್ತೊಮ್ಮೆ ಅದಕ್ಕೆ ಸಂಪೂರ್ಣ ವಿರುದ್ಧ ನಿಲುವಿನ ಎಡಪಂಥೀಯ ಚಿಂತನೆಯ ಪಕ್ಷದ ಪರವಾಗಿ ಕೆಲಸ ಮಾಡಿಯೂ ಯಶಸ್ವಿಯಾದರು. ಜಾತಿವಾದಿಗಳು ಭ್ರಷರ ಪರವಾಗಿ ಕೆಲಸ ಮಾಡಿ ಅಲ್ಲಿಯೂ ಜಯಗಳಿಸಿದರು. ಅಂದರೆ ಹಣ ಪಡೆದು ಯಾವ ಪಕ್ಷದ ಪರವಾಗಿ ಬೇಕಾದರೂ ಕೆಲಸ ಮಾಡುತ್ತಾರೆ. ನ್ಯಾಯ ನೀತಿ ಮುಂತಾದ ಮೌಲ್ಯಗಳು ಇಲ್ಲಿ ಗೌಣವಾಗುತ್ತದೆ.

ಹಾಗೆ ನೋಡಿದರೆ ಅನೇಕ ಕಾರ್ಪೊರೇಟ್ ಕುಳಗಳು ಮತ್ತೆ ಕೆಲವೊಮ್ಮೆ ಸಾಮಾನ್ಯ ವ್ಯಾಪಾರಿಗಳು ಸಹ ಇದಕ್ಕಿಂತ ಕೆಳ ಮಟ್ಟದಲ್ಲಿ ಮೌಲ್ಯಗಳನ್ನೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ಕಾಣಬಹುದು. ಪ್ರಶಾಂತ್ ಕಿಶೋರ್ ಮಾಡುವುದು ಹೊಸದೇನಲ್ಲ. ಅನೇಕ ಆಧ್ಯಾತ್ಮಿಕ ಗುರುಗಳು ಅಧ್ಯಾತ್ಮವನ್ನೇ ಕಾರ್ಪೊರೇಟ್ ಶೈಲಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಆದರೆ ಇಡೀ ವ್ಯವಸ್ಥೆಯ ಅಡಿಪಾಯ ಪ್ರಜಾಪ್ರಭುತ್ವದ ಮೌಲ್ಯಗಳೇ ಚುನಾವಣಾ ಗೆಲುವಿನ ಮಾನದಂಡಗಳಾಗಿರುವಾಗ ಅದೂ‌ ಕಾರ್ಪೊರೇಟ್ ಶೈಲಿಯ ವ್ಯಾಪಾರಿಗಳ ಹಿಡಿತಕ್ಕೆ ಸಿಕ್ಕರೆ ಭವಿಷ್ಯದಲ್ಲಿ ತುಂಬಾ ಅಪಾಯಕಾರಿ ಹಂತ ಮುಟ್ಟುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಈಗ ನಮ್ಮೆಲ್ಲರ ಜವಾಬ್ದಾರಿ ‌ಈ ರೀತಿಯ ತಂತ್ರಗಾರಿಕೆಯನ್ನು ಪ್ರಾಮಾಣಿಕರು ದಕ್ಷರು ನಿಸ್ವಾರ್ಥಿಗಳು ಸೇವಾ ಮನೋಭಾವದವರು ಚುನಾವಣೆಗೆ ಸ್ಪರ್ಧಿಸುವ – ಜಯಶಾಲಿಯಾಗುವ – ಮತದಾರರು ಇಂತಹವರಿಗೆ ಬೆಂಬಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಬುದ್ದಿವಂತರಿಗಿಂತ ಹೃದಯವಂತರು ಶಾಸಕಾಂಗದ ನೀತಿ ನಿರೂಪಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತೆ ಮಾಡಬೇಕಿದೆ. ಬುದ್ದಿವಂತರು ಈಗಾಗಲೇ ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಮುನ್ನಡೆಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಹೊಸ ಪ್ರಯೋಗಗಳಿಗೆ ಸದಾ ಅವಕಾಶ ಮತ್ತು ಸ್ವಾಗತ ಇರುತ್ತದೆ. ಆದರೆ ಅದು ಮಾನವೀಯ ಮೌಲ್ಯಗಳ ವಿಕಾಸವಾದಕ್ಕೆ ಪೂರಕವಾಗಿರಬೇಕೆ ಹೊರತು ಮಾರಕವಾಗಿರಬೇಕು. ಈ ಬಗ್ಗೆ ಪ್ರಬುದ್ಧ ಮನಸ್ಸುಗಳು ಮತ್ತಷ್ಟು ಆಳವಾಗಿ ಯೋಚಿಸುವಂತಾಗಲಿ ಎಂಬ ಆಶಯದೊಂದಿಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

ಜಿಲ್ಲೆ

ರಾಜ್ಯ

error: Content is protected !!