*ಕಲ್ಮಠದಲ್ಲಿ ಬೂದಿ ಮುಚ್ಚಿದ ಕೆಂಡ!* *ವಿಜಯೋತ್ಸವ ಉದ್ಘಾಟನೆಯಲ್ಲಿ ಅಸಮಾಧಾನ ಸ್ಪೋಟ*

ಉಮೇಶ ಗೌರಿ (ಯರಡಾಲ)

ಕಿತ್ತೂರು: ಕಲ್ಮಠದಲ್ಲಿ ಬೂದಿ ಮುಚ್ಚಿದ ಕೆಂಡ!
ವೀರರಾಣಿ ಚನ್ನಮ್ಮ ಸಂಸ್ಥಾನದ ಮಾರ್ಗದರ್ಶಿಗಳು ಅರಮನೆ-ಗುರುಮನೆ ಪರಂಪರೆಯ ಐತಿಹ್ಯ ಹೊಂದಿರುವ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು ಕಿತ್ತೂರು ವಿಜಯೋತ್ಸವದ ಬೆಳ್ಳಿ ಹಬ್ಬದ ಉದ್ಘಾಟನಾ ಸಂದರ್ಭದಲ್ಲಿ ಕಲ್ಮಠದ ಶ್ರೀಗಳ ನಡೆ ಇದಕ್ಕೆ ಪುಷ್ಠಿ ನೀಡುವಂತಿದೆ.

ಉತ್ಸವದ ಆಮಂತ್ರಣ ಪತ್ರಿಕೆ ಮುದ್ರಣದಲ್ಲಿ ಗಣ್ಯರು ಹಾಗೂ ಪೂಜ್ಯರ ಹೆಸರುಗಳನ್ನು ಮುದ್ರಿಸುವಲ್ಲಿ ಗೊಂದಲ ಸೃಷ್ಟಿಯಾಗಿದ್ದು ಜಿಲ್ಲಾಡಳಿತ ಮೂರು ಬಾರಿ ಆಮಂತ್ರಣ ಪತ್ರಿಕೆ ಮುದ್ರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದು ಸುದ್ದಿಯಾಗಿದೆ.

ಈ ಬಾರಿ ಕಾರ್ಯಕ್ರಮ ಉದ್ಘಾಟನೆಗೆ ಪೂಜ್ಯರಾದ ಬಸವಜಯ ಮೃತ್ಯುಂಜಯ ಶ್ರೀಗಳು,ಪಂಚಮಸಾಲಿ ಪೀಠ ಕೂಡಲ ಸಂಗಮ ಹಾಗೂ ಪೂಜ್ಯ ವಚನಾನಂದ ಶ್ರೀಗಳು ಹರಿಹರ ಪೀಠ ಇವರು ಆಮಂತ್ರಿತರಾಗಿದ್ದು ಕಲ್ಮಠ ಶ್ರೀಗಳ ಅಸಮಾಧಾನಕ್ಕೆ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇಷ್ಟಕ್ಕೂ ಉದ್ಘಾಟನೆಯ ಸಂದರ್ಭದಲ್ಲಿ ಉಭಯ ಶ್ರಿಗಳ ಮಾತುಗಳ ನಂತರದಲ್ಲಿ ಕಲ್ಮಠ ಶ್ರೀಗಳನ್ನು ಆಶೀರ್ವಚನಕ್ಕೆ ಆಹ್ವಾನಿಸಿದಾಗ ಅವರು ನಿರಾಕರಿಸಿದ್ದು ನಂತರ ಶಾಸಕ ದೊಡ್ಡಗೌಡರ ಅವರ ಒತ್ತಾಯದ ಮೇರೆಗೆ ಮಾತನಾಡಲು ಮುಂದಾಗಿರುವುದು ನೋಡುಗರಿಗೆ ಸ್ಪಷ್ಟವಾಗಿ ಕಾಣಿಸುವಂತಿತ್ತು.

ಕಲ್ಮಠ ಶ್ರೀಗಳು ಮಾತನಾಡುತ್ತ ಜನಪ್ರತಿನಿಧಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಕೇವಲ ವೇದಿಕೆಯ ಮೇಲೆ ಭಾಷಣಕ್ಕೆ ಸೀಮಿತವಾಗದೇ ಅಭಿವೃದ್ದಿ ಕಾರ್ಯರೂಪಕ್ಕೆ ಬರುವಂತಾಗಬೇಕು ಅನ್ನೋ ಮಾತುಗಳು ಈ ಅಸಮಾಧಾನಕ್ಕೆ ಸಾಕ್ಷಿಯಂತಿದ್ದವು.

ಕಲ್ಮಠದ ಶ್ರಿಗಳು.

“ಈ ವಿಜಯೋತ್ಸವ ಕೇವಲ ಜಿಲ್ಲೆಗೆ ಸೀಮಿತವಾಗಬಾರದು ರಾಷ್ಟ್ರಮಟ್ಟದಲ್ಲಿ ಕಿತ್ತೂರು ಶಿಖರಪ್ರಾಯವಾಗಿದ್ದು ಚನ್ನಮ್ಮಾಜಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವಂತಾಗಬಾರದು ಅನ್ನೋ ಆಶಯ ನಮ್ಮದು.

ಈ ಸಮಾಜದಲ್ಲಿ ಖಾವಿಧಾರಿಗಳು ಎಲ್ಲರೂ ಒಂದೇ ಹೀಗಾಗಿ ಬೇಧಭಾವ ಉಟಾಗಬಾರದು ಅನ್ನೋ ಹಿನ್ನೆಲೆಯಲ್ಲಿ ಹಿರಿಯ ಜಗದ್ಗುರುಗಳು ಮಾತನಾಡಿದ ಮೇಲೆ ನಾನು ಮಾತನಾಡಬಾರದು ಅಂತ ನಿರಾಕರಿಸಿದ್ದೇ ಅಷ್ಟೇ ಇದಕ್ಕೆ ಯಾವುದೇ ಅನ್ಯ ಅರ್ಥಗಳನ್ನು ಕಲ್ಪಿಸಬಾರದು”

ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು

Share This Article
";