Tuesday, September 17, 2024

ಚನ್ನಮ್ಮನ ಕಿತ್ತೂರಿನಲ್ಲಿ ಅಸ್ತಂಗತವಾದ ಸೂರ್ಯಮುಳುಗದ ಸಾಮ್ರಾಜ್ಯ

ಸೂರ್ಯ ಮುಳಗದ ಸಾಮ್ರಾಜ್ಯ ಬ್ರಿಟಿಷ ಸಂಸ್ಥಾನ ಜಗತ್ತಿನ ಅನೇಕ ರಾಷ್ಟ್ರಗಳನ್ನು ತನ್ನ ಆಳ್ವಿಕೆಯ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಬ್ರಿಟಿಷರು ಸೋತಿದ್ದು ಮಾತ್ರ ಭಾರತ ದೇಸದ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮಾಜಿ ಅಂಗಳದಲ್ಲಿ. ಹಾಗಾದರೆ ಈ ಕುರಿತು ಒಂದು ಅವಲೋಕನವನ್ನು ಕಿತ್ತೂರು ವಿಜಯೋತ್ಸವದ ಸ್ಮರಣೆಯಲ್ಲಿ ಮೆಲುಕು ಹಾಕೋಣ.

ಕಿತ್ತೂರು ಸಂಸ್ಥಾನದ ಹಿನ್ನೆಲೆ: 1585 ರಿಂದ 1824 ರ ವರೆಗೆ  12 ರಾಜರ ಆಳ್ವಿಕೆಯನ್ನು ನಂತರ ಸಂಸ್ಥಾನದ ಸಂದಿಗ್ದತೆಯಲ್ಲಿ ರಾಣಿ ಚನ್ನಮ್ಮಾಜೀಯ ಸೂಕ್ತ ನಾಯಕತ್ವ ಕಿತ್ತೂರು ಸಂಸ್ಥಾನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಸಿತು.

ರಾಣಿ ಚನ್ನಮ್ಮಾ ಇವತ್ತಿನ ಬೆಳಗಾವಿ ಜಿಲ್ಲೆಯ ಕಾಕತಿಯ (ಸಾಂಗ್ಲಿ ಸಂಸ್ಥಾನ) ದೂಳಪ್ಪಗೌಢ ದೇಸಾಯಿಯ ಮಗಳಾಗಿ ಜನ್ಮ ತಾಳಿದಳು. ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿಯ ಕೈ ಹಿಡಿದು ಕಿತ್ತೂರಿನ ಸಂಸ್ಥಾನಕ್ಕೆ ರಾಜ ಕಳೆ ತಂದುಕೊಟ್ಟಳು.  1816 ರಲ್ಲಿ ದೊರೆ ಮಲ್ಲಸರ್ಜ ದೇಸಾಯಿ ನಿಧನದ ನಂತರ ಸಂಸ್ಥಾನದಲ್ಲಿ ಯಾರನ್ನು ಪಟ್ಟಕ್ಕೆ ತರಬೇಕು ಎಂಬ ಸಂದಿಗ್ದತೆ ಏರ್ಪಟ್ಟಿತು.

ಬೈರವಿ ಕಂಕಣ: ಮಲ್ಲಸರ್ಜ ದೇಸಾಯಿಯ ನಿಧನ ನಂತರ ಸಂಸ್ಥಾನದಲ್ಲಿ ರಾಣಿ ರುದ್ರಮ್ಮಳ ಮಗ ಶಿವಲಿಂಗರುದ್ರ ಸರ್ಜ ಮತ್ತು ರಾಣಿ ಚನ್ನಮ್ಮಾಜೀಯ ಮಗ ಶಿವಬಸವರಾಜ ರಾಜ ಪಟ್ಟಕ್ಕೆ ಅರ್ಹರಿದ್ದರು. ಆಗ ಚನ್ನಮ್ಮಾಜೀ ತನ್ನ ಮಗನಾದ ಶಿವಬಸವರಾಜನಗೆ ಬೈರವಿ ಕಂಕಣ ಕಟ್ಟಿ ( ಬೈರವಿ ಕಂಕಣ ಕಟ್ಟಿಕೊಂಡವರು ರಾಜರಾಗುವಂತಿಲ್ಲ) ರಾಜ ಪದವಿಯಿಂದ ದೂರವಿಟ್ಟು ತನ್ನ ಅಕ್ಕ ರಾಣಿ ರುದ್ರಮ್ಮಳ ಮಗ ಶಿವಲಿಂಗರುದ್ರಸರ್ಜನಿಗೆ ಪಟ್ಟ ಕಟ್ಟಿದಳು. ಚನ್ನಮ್ಮಾಜೀಯ ಮಗ ಶಿವಲಿಂಗರುದ್ರಸರ್ಜನ ಅಂಗರಕ್ಷಕನಾಗಿ ಕಾರ್ಯನಿರ್ವಹಿಸುತ್ತಾ 1818 ರ ಮೂರನೇ ಆಂಗ್ಲೋ-ಮರಾಠ ಯುದ್ದದಲ್ಲಿ ಸಂಸ್ಥಾನದ ಪರವಾಗಿ ಭಾಗವಹಿಸಿ ನಿಧನ ಹೊಂದಿದನು. ಈತನ ಸಮಾಧಿ ಕಿತ್ತೂರಿನಲ್ಲಿ ಇವತ್ತಿಗೂ ಕಾಣಬಹುದು.

ಇದರಿಂದ ರಾಣಿ ಚನ್ನಮ್ಮಾಜೀಯ ನಾಯಕತ್ವದ ಜೊತೆಗೆ ತ್ಯಾಗದ ವ್ಯಕ್ತಿತ್ವ ಅನಾವರಣವಾಗುವುದು. ಬಹುಶ ಜಗತ್ತಿನ ಯಾವ ರಾಣಿಯರು ತನ್ನ ಮಗನನ್ನು ಅಧಿಕಾರದಿಂದ ದೂರವಿಟ್ಟು ಅಕ್ಕನ ಮಗನಿಗೆ ಪಟ್ಟಕಟ್ಟಿರುವುದು ವಿರಳ.
ಹಾಗಾಗಿ ಮಲ್ಲಸರ್ಜ ದೇಸಾಯಿ ನಂತರ ರಾಣಿ ರುದ್ರಾಮ್ಮಾಜಿಯ ಮಗ ಶಿವಲಿಂಗ ರುದ್ರಸರ್ಜ ಅಧಿಕಾರಕ್ಕೆ ಬಂದು 1816 ರಿಂದ 1824 ರ ವರೆಗೆ ಆಳ್ವಿಕೆ ಮಾಡಿದ.

ಈ ಸಂದರ್ಭದಲ್ಲಿ ಧಾರವಾಡದ ಜಿಲ್ಲಾಧಿಕಾರಿ ಥ್ಯಾಕರೆ ಕಿತ್ತೂರನ್ನು ಕಬಳಿಸಲು ಸದಾ ಹೊಂಚುಹಾಕುತ್ತಿದ್ದ. ಥ್ಯಾಕರೆ 1822 ರಲ್ಲಿ ಶಿವಲಿಂಗರುದ್ರಸರ್ಜನಿಗೆ ಪತ್ರ ಬರೆದು ಕಿತ್ತೂರು ದರೋಡೆಕೋರರ ಆಶ್ರಯತಾಣವಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ. ಇದರರ್ಥ ಕಿತ್ತೂರಿನ ಮೇಲೆ ಬಿದ್ದ ಆತನ ವಕ್ರ ದೃಷ್ಟಿ. ಇದೇ ಸಂದರ್ಭದಲ್ಲಿ ಕಿತ್ತೂರಿನ ದೊರೆ ಶಿವಲಿಂಗರುದ್ರಸರ್ಜ ಅನಾರೋಗ್ಯಕ್ಕಿಡಾಗಿದ್ದ. ಅವನ ಆರೋಗ್ಯ ವಿಚಾರಿಸಲು 1824 ಮೇ 18 ರಂದು ಥ್ಯಾಕರೆ ಕಿತ್ತೂರಿಗೆ ಬೇಟಿ ನೀಡಿದ್ದ.

ಶಿವಲಿಂಗರುದ್ರಸರ್ಜ ಮಕ್ಕಳಿಲ್ಲದ ಕಾರಣ ದತ್ತಕ ತೆಗೆದುಕೋಳ್ಳುವ ನಿರ್ಧಾರವನ್ನು ಮಾಡಿದ್ದ ಆದರೆ ಥ್ಯಾಕರೆಗೆ ತಿಳಿಸಲಿಲ್ಲ.1824 ಜುಲೈ 10ರಂದು ಥ್ಯಾಕರೆಗೆ ದತ್ತಕ ತೆಗೆದುಕೋಳ್ಳುವ ಕುರಿತು ಪತ್ರ ಬರೆದಿದ್ದ ಆದರೆ ಆರೋಗ್ಯದಲ್ಲಿ ಮತ್ತೆ ಚೇತರಿಕೆ ಕಂಡಿದ್ದರಿಂದ ಪತ್ರವನ್ನು ರವಾನಿಸಲಿಲ್ಲ. ಸರದಾರ್ ಗುರುಸಿದ್ದಪ್ಪ ಆಯ್ಕೆ ಮಾಡಿ ತಂದ ಮಾಸ್ತಮರಡಿ ಬಾಳನಗೌಡನ ಮಗ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಳ್ಳಲಾಗಿತ್ತು ಆದರೆ ಬ್ರಿಟಿಷ್ ಸರ್ಕಾರಕ್ಕೆ ಮಾತ್ರ ತಿಳಿಸಿರಲಿಲ್ಲ.

1824 ಸೆಪ್ಟೆಂಬರ 11 ರಂದು ಶಿವಲಿಂಗರುದ್ರಸರ್ಜನ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ ತಾನು ಬದುಕುವುದಿಲ್ಲ ಎಂದು ಖಾತ್ರಿ ಆದಮೇಲೆ ಅದೇ ದಿನ ಮದ್ಯಾಹ್ನ ಅವಸರವಾಗಿ ದತ್ತಕದ ಔಪಚಾರಿಕ ಕಾರ್ಯಕ್ರಮ ಮುಗಿಸಿದನು.1824ಸೆಪ್ಟೆಂಬರ 12 ರಂದು ಬೆಳಿಗ್ಗೆ 4 ಗಂಟೆಗೆ ನಿಧನಹೊಂದುತ್ತಾನೆ. ಜುಲೈ 10 ರಂದು ದತ್ತಕ ಕುರಿತು ಬರೆದ ಪತ್ರವನ್ನ ಶಿವಲಿಂಗರುದ್ರಸರ್ಜ ದೇಸಾಯಿ ತೀರಿದ ದಿನವೆ ಸಂಸ್ಥಾನದ ಸಿಬ್ಬಂದಿ ಆ ಪತ್ರವನ್ನ ಥ್ಯಾಕರೆಗೆ ಮುಟ್ಟಿಸುತ್ತಾರೆ. ಪತ್ರದಲ್ಲಿ ಜುಲೈ 10 ಇದ್ದಿದ್ದನ್ನು ಕಂಡು ಸಂಶಯಗೊಂಡು ಈ ಪತ್ರ ಬೇರೆಯವರಿಂದ ಬರೆಯಲ್ಪಟ್ಟಿರಬೇಕು ಅಥವಾ ದೇಸಾಯಿ ವಿಚಾರ ಶಕ್ತಿ ಕಳೆದುಕೊಂಡಾಗ ಆತನ ರುಜು ಪಡೆದಿರಬೇಕು ಎಂದು ಥ್ಯಾಕರೆ ನಿರ್ಧರಿಸಿದ.

ಧಾರವಾಡದ ವೈದ್ಯಾಧಿಕಾರಿ ಹೆಚ್ ಜಿ ಬೆಲ್‌ನನ್ನು ಕಿತ್ತೂರಿಗೆ ಕಳುಹಿಸಿ ದೇಸಾಯಿಯ ದೇಹಸ್ಥಿತಿ ವರದಿ ಮಾಡಲು ಥ್ಯಾಕರೆ ತಿಳಿಸಿದ. ಹೆಚ್.ಜಿ ಬೆಲ್‌ನ ಪ್ರಕಾರ ಅಕ್ಟೋಬರ 12 ರ 3ಗಂಟೆಗೆ ಮುಂಚೆ ನಿಧನರಾಗಿದ್ದಾರೆ ಎಂದು ವರದಿ ಮಾಡಿದ.

ಈ ಎಲ್ಲ ಘಟನೆಗಳನ್ನು ತಿಳಿಯಲು ಸೆಪ್ಟೆಂಬರ 14ರಂದು ಥ್ಯಾಕರೆ ಕಿತ್ತೂರಿಗೆ ಬೇಟಿ ಮಾಡಿದನು ಅರಮನೆ ಸಿಬ್ಬಂದಿ ಹೆದರಿಸಿ ಸಂಸ್ಥಾನವನ್ನ ಕೈವಶಮಾಡಿಕೊಳ್ಳುವ ಸಿದ್ಧತೆ ಪ್ರಾರಂಭಿಸಿದ ಮತ್ತು ಈ ವಿಷಯವನ್ನು ಕುರಿತು ಡೆಕ್ಕನ್ ಕಮಿಷನರ್ ಚಾಪ್ಲಿನ್ನನಿಗೆ ಪತ್ರ ಬರೆದನು. ಆ ಪತ್ರವನ್ನು ಅವಲೋಕಿಸಿದರೆ ಕಿತ್ತೂರು ಕುರಿತು ಆತನ ದುರಹಂಕಾರದ ನಡೆ ತಿಳಿಯುವುದು.

ಕಿತ್ತೂರು ಸಂಸ್ಥಾನದ ಕುರಿತು ಪತ್ರದಲ್ಲಿರುವ ಸುಳ್ಳು ಆರೋಪಗಳು
• ಪತ್ರದಲ್ಲಿ ಚನ್ನಮ್ಮನನ್ನು ಮೇಲಿಂದ ಮೇಲೆ ‘ಮಲತಾಯಿ’ ಎಂದು ಕರೆದಿರುವನು.•

*ವಿಧವೆ ಪತ್ನಿ ಮಾತ್ರ ವಾರಸುದಾರಳು ಎಂದು ಹೇಳಿ ಚನ್ನಮ್ಮಳನ್ನು ನಿರ್ಲಕ್ಷಿಸಿದೆ.

• ದತ್ತಕ ತೆಗೆದಕೊಂಡ ಮಗು ಸಂಸ್ಥಾನದ ಹತ್ತಿರದ ಸಂಬಂಧಿಯಲ್ಲ.
• ದತ್ತಕ ಪ್ರಕ್ರಿಯೆ ದೇಸಾಯಿಯ ನಿಧನದ ನಂತರ ನೆಡದಿರಬಹುದು.
• ದೇಸಾಯಿ ಅನುಯಾಯಿಗಳು ಆಸ್ತಿನುಂಗಲು ಮಾಡಿದ ತಂತ್ರವೇ ದತ್ತಕ ಪ್ರಕ್ರಿಯೆ ಎಂದನು.
• ದತ್ತಕ ಕಾಯಿದೆ ಪ್ರಕಾರ ಆಗಿರದೆ ಇರವುದರಿಂದ ಮತ್ತು ದೇಸಾಯಿ ಪತ್ನಿ (ವೀರಮ್ಮ) ಅಲ್ಪವಯಿ ಆಗಿರುವುದರಿಂದ ಯಾರು ಪಟ್ಟಕ್ಕೆ ಬರಬೇಕು ಎಂಬುದನ್ನು ಸರಕಾರ ನಿರ್ಧಾರ ಮಾಡುವುದು.
• ದತ್ತಕ ತೆಗೆದುಕೋಳ್ಳಲು ಕಿತ್ತೂರು ದೇಸಾಯಿ ಬ್ರೀಟಿಷ ಸರಕಾರಕ್ಕೆ ಅರ್ಜಿ ಸಲ್ಲಿಸಿರಲಿಲ್ಲ
• ಕಿತ್ತೂರಿನ ಖಜಾನೆಯನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದ.

ಇದೆ ಸಂದರ್ಭದಲ್ಲಿ ಥ್ಯಾಕರೆ ಕಛೇರಿಯ ಮುಖ್ಯ ಗುಮಾಸ್ತ ಮುಂಬೈ ಕಮೀಶನರ್ ಚಾಪ್ಲಿನ್ನನಿಗೆ ಗುಪ್ತ ಪತ್ರ ಬರೆದು ಅದರಲ್ಲಿ “ದೇಸಾಯಿ ಸೆಪ್ಟಂಬರ 11 ರಂದು ರಾತ್ರಿ 10 ಗಂಟೆಗೆ ತಿರಿಕೊಂಡನು. ದತ್ತಕ ಕಲ್ಪನೆ ರಾಜಮನೆತನದ ನೌಕರರ ಕಟ್ಟುಕತೆ ಮತ್ತು ಸಂಸ್ಥಾನದ ಆಸ್ತಿ ಲಪಟಾಯಿಸುವುದು ಇದರ ಉದ್ದೇಶ” ಎಂದು ತಪ್ಪು ಮಾಹಿತಿ ನೀಡಿದ. 1824 ಸೆಪ್ಟಂಬರ 14ರಂದು ಥ್ಯಾಕರೆ ಸಂಸ್ಥಾನ ನೋಡಿಕೊಳ್ಳಲು 30 ಜನ ಬ್ರಿಟೀಷ ಕಾವಲುಗಾರರನ್ನು ಕೋಟೆಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಕಾಯಲು ನೇಮಿಸಿದ. ಇದರಿಂದ ರೋಸಿ ಹೋದ ಚನ್ನಮ್ಮ ಸಂಸ್ಥಾನದ ವಕೀಲರಾದ ರಾಚಪ್ಪ ಮತ್ತು ಲಿಂಗೋಪಿತರನ್ನು ಮುಂಬೈ ಗವರ್ನರ್ ಎಲ್ಟಿನಸ್ಟನನ್ನ ಬೇಟಿಯಾಗಿ ತಕರಾರು ಮಾಡಲು ಕಳುಹಿಸಿದಳು ಆತನಿಂದ ಸಹಾನುಭೂತಿ ಸಿಗಲಿಲ್ಲ.

ಥ್ಯಾಕರೆ ಅರಮನೆ ತುಂಬ ಗೂಡಾಚಾರರನ್ನು ನೇಮಿಸಿದ. ಕಿತ್ತೂರಿನ ರಾಣಿಯರನ್ನು ಕಾಣದಂತೆ ಸಂಸ್ಥಾನದ ಸಿಬ್ಬಂದಿಗೆ ನಿರ್ಭಂದ ಹೇರಿದ.ದತ್ತಕ ತೆಗೆದುಕೊಂಡ ಶಿವಲಿಂಗಪ್ಪನನ್ನು ಕೂಡಲೆ ಕಿತ್ತೂರು ಬಿಟ್ಟು ಹೋಗಬೇಕೆಂದು ಥ್ಯಾಕರೆ ಆದೇಶ ಮಾಡಿದನು. ಕಾರಣ ಶಿವಲಿಂಗಪ್ಪ ಕಿತ್ತೂರಲ್ಲಿದ್ದರೆ ಸಂಸ್ಥಾನದ ಮೇಲೆ ಹಿಡಿತ ಸಾದಿಸಲು ಸಾದ್ಯವಾಗದು ಎಂಬ ಆತಂಕ ಥ್ಯಾಕರೆಯನ್ನು ಕಾಡುತಿತ್ತು ರಾಜನಿಗೆ ( ಶಿವಲಿಂಗಪ್ಪ ಉರ್ಪ ಸವಾಯಿ ಮಲ್ಲಸರ್ಜ) ಕಿತ್ತೂರಿನಲ್ಲಿ ಇರಲು ಅವಕಾಶ ಇಲ್ಲ ಎಂದು ಘರ್ಜಿಸಿದ.ಇದನ್ನು ಸಹಿಸಲಾರದೆ ರಾಣಿ ಚನ್ನಮ್ಮಾಜಿ ಮತ್ತು ರಾಣಿ ವೀರಮ್ಮಾ ಡೆಕ್ಕನ್ ಕಮೀಷನರ್ ಚಾಪ್ಲಿನ್ನನಿಗೆ ಪತ್ರ ಬರೆದು ಥ್ಯಾಕರೆಯ ದುಷ್ಟ ನಡೆಯನ್ನು ತಿಳಿಸಿದರು.

ರಾಣಿ ಚನ್ನಮ್ಮಾಜಿಯ ಪತ್ರಕ್ಕೆ ಚಾಪ್ಲಿನ್ನ ಉದಾಸೀನ ತೋರಿದ. ಕೊನೆಗೆ ಬ್ರಿಟೀಷರನ್ನು ಎದುರಿಸಲು 18ನೇಯ ಅಕ್ಟೋಬರ 1824 ರಂದು ಸರದಾರರ ಮತ್ತು ಅಧಿಕಾರಿಗಳ ಸಭೆ ನಡೆಸಿ ಸಂದಿಗ್ದ ಪರಿಸ್ಥಿತಿ ವಿವರಿಸಿದಳು. ಅಕ್ಟೋಬರ 19ರಂದು ಸರದಾರ ಗುರುಸಿದ್ದಪ್ಪ ಅವರೊಡನೆ ಅಂತಿಮ ಸಬೆ ನಡೆಸಿ ಯುದ್ದಕ್ಕೆ ಅನಿಯಾಗಲು ತಿಳಿಸಿದಳು. ಈ ಸಂದರ್ಭದಲ್ಲಿ ಕಿತ್ತೂರು ಸೈನ್ಯದಲ್ಲಿ  7ಸಾವಿರ ಕಾಲ್ದಳ, ಸಾವಿರ ಕುದುರೆದಳ,  ಸಾವಿರ ಒಂಟೆ, 50 ಆನೆ, 24 ಪೌಂಡಿನ 2 ಹಿತ್ತಾಳೆ ತೋಪುಗಳು, ಇತರ 14 ತೋಪುಗಳು ಸೇರಿದಂತೆ 6 ಸಾವಿರ ಶೇತ ಸನದಿಗಳು ಇದ್ದರು.19 ರಂದು ರಾಣಿ ಚನ್ನಮ್ಮಾಜಿ ಬಂಡಾಯವೇಳುವ ಮನಸ್ಥಿತಿಯಲ್ಲಿದ್ದಾರೆ ಎಂದು ಥ್ಯಾಕರೆಗೆ ಗುಪ್ತಚರರು ವರದಿಮಾಡಿದರು.

ಬಾಗಲಕೋಟೆಯ ಕಲಾದಗಿಯಿಂದ ಬೆಳಗಾವಿಗೆ ಬರುತ್ತಿದ್ದ ಬ್ರೀಟಿಸರ  5 ನೇಯ ನ್ಹೇಟಿವ್ ಇನ್ಪೆಂಟ್ರಿಯ ಸೈನೈವನ್ನು ಮಾರ್ಗ ಬದಾಲಾಯಿಸಿ ಕಿತ್ತೂರಿಗೆ ಬರಲು ಥ್ಯಾಕರೆ ತಿಳಿಸಿದ.

ಅಕ್ಟೋಬರ  21 ರ ಮುಂಜಾನೆ ಥ್ಯಾಕರೆ, ಸ್ಟೀವನ್ಸನ್ ಮತ್ತು ಇಲಿಯಟ್ ಕಿತ್ತೂರಿನ ಖಜಾನೆ ಸುರಕ್ಷತೆ ಕರಾರು ಪತ್ರಕ್ಕೆ ಸಹಿ ಹಾಕಲು ಕಳುಹಿಸಿದನು. ಆದರೆ ರಾಣಿ ಚನ್ನಮ್ಮನ ಒಪ್ಪಿಗೆ ಇಲ್ಲದೆ ಕರಾರು ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದರು. ಸಿಟ್ಟಾದ ಥ್ಯಾಕರೆ ತನ್ನ ಕುದರೆ ಪಡೆಗೆ ದಾಳಿಮಾಡಲು ಸೂಚಿಸಿದ.

ಬಂದೂಕು ದಾರಿ ದಳದ ಮುಖಂಡ ಕ್ಯಾಪ್ಟನ  ಬ್ಲ್ಯಾಕ್ ನನ್ನು ಕೋಟೆಯ ದ್ವಾರ ಬಾಗಿಲದೆಡೆಗೆ ತೋಪಿನ ಗಾಡಿ ಚಲಿಸಲು ಆದೇಶಿಸಿದ. ಅಕ್ಟೋಬರ 22 ರಂದು ಥ್ಯಾಕರೆ ಕಿತ್ತೂರು ಸೈನ್ಯಕ್ಕೆ ಶರಣಾಗಿ ಇಲ್ಲದೆ ಆಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದ.

ಅಕ್ಟೋಬರ 23 ರಂದು ಕೋಟೆಗೆ ಕಾವಲಿದ್ದ ಬ್ರಿಟಿಷ ಸೈನಿಕರನ್ನು ಬದಲಾವಣೆ ಮಾಡಲು ಕ್ಯಾಪ್ಟನ್ ಬ್ಲ್ಯಾಕ್ನನ್ನು ಕರೆದುಕೊಂಡು ಹೋದ. ಆದರೆ ಕಿತ್ತೂರು ಕೋಟೆ ಕಾವಲುಗಾರರು ಒಳಗಿದ್ದ ಬ್ರಿಟಿಷ ಪರ ಸೈನಿಕರನ್ನು ಹೊರಗೆ ಹೋಗಲು ಮತ್ತು ಹೊರಗೆ ಇದ್ದವರನ್ನು ಒಳಗೆ ಹೋಗಲು ಅವಕಾಶ ಕೊಡಲಿಲ್ಲ. ಸೀಟ್ಟಿನಿಂದ ಮತ್ತೇರಡು ತೋಪುಗಳನ್ನ ಕೋಟೆಯ ಮಹಾದ್ವಾರಕ್ಕೆ ತಂದು ನಿಲ್ಲಿಸಲು ಆದೇಶಿಸಿದ.

ಕೊನೆಗೆ ಥ್ಯಾಕರೆ ಕಿತ್ತೂರು ಸೈನ್ಯಕ್ಕೆ ಕೋಟೆಯ ಬಾಗಿಲವನ್ನ ತೆರೆಯಲು ಹೇಳಿ ಕಳುಹಿಸಿದ. ಕೋಟೆಯ ದ್ವಾರದ ಎದುರು ನಿಲ್ಲಿಸಿದ ಬ್ರಿಟೀಷರು ಸೈನ್ಯವನ್ನು ಸುರಕ್ಷಿತವಾಗಿ ದೂರಕ್ಕೆ ಸರಿಸದ ವಿನಹ: ಬಾಗಿಲವನ್ನ ತೆರೆಯುವುದಿಲ್ಲ ಎಂದು ಕಿತ್ತೂರು ಸೈನಿಕರು ಹೇಳಿದರು.
ಥ್ಯಾಕರೆ 1 ಘಡಿ (24) ನಿಮಿಷದಲ್ಲಿ ಕೋಟೆಯ ಬಾಗಿಲ ತೆರಿಯದಿದ್ದಲ್ಲಿ ಕೋಟೆಯ ಬಾಗಿಲವನ್ನು ತೋಪಿನಿಂದ ಸ್ಪೋಟಿಸಿ ಒಡೆದು ತೆಗೆಯಲಾಗುದು ಎಂದು ಹೇಳಿ ಕಳುಹಿಸಿದ. 1 ಘಡಿಯ ನಂತರ ಕೋಟಿಯ ಬಾಗಿಲುಗಳು ಒಳಗಿನಿಂದ ಹೊರಗೆ ತೆಗೆದವು. ಕಿತ್ತೂರು ಸೈನಿಕರು ಬ್ರಿಟಿಷ ಸೈನಿಕರ ಮೇಲೆ ಸುನಾಮಿಯಂತೆ ಅಪ್ಪಳಿಸಿದರು.
ತೋಪಿಗೆ ಬೆಂಕಿ ಇಡುತ್ತಿದ್ದ ಕ್ಯಾಪ್ಟನ್ ಬ್ಲ್ಯಾಕ್ ಮತ್ತು ಡಯಟನ್‌ನಿಂದ ತೋಪುಗಳನ್ನ ಕಿತ್ತೂರ ಸೈನಿಕರು ವಶಪಡಿಸಿಕೊಂಡರು.

ಬ್ಲ್ಯಾಕ್ ಮತ್ತು ಡಯಟನ್ನನ ತಲೆ ಕತ್ತರಿಸಿದರು. ಅಮಟೂರು ಬಾಳಪ್ಪ ಥ್ಯಾಕರೆಯನ್ನು ಕೊಂದನು. ರಾಮಹಸಬಿ ಎಂಬ ನಿಗ್ರೋ ಸೈನಿಕ ಸತ್ತ .ಥ್ಯಾಕರೆಯ ರುಂಡವನ್ನ ಕತ್ತರಿಸಿ ಭರ್ಚಿಗೆ ಸಿಕ್ಕಿಸಿಕೊಂಡು ವಿಜಯ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದ. ಡಯಟಿನ್ ಮತ್ತು ಲೆಪ್ಟಿನೇಂಟ ಸಿವೆಲ್ ಸೇರಿದಂತೆ 80 ಜನ ಬ್ರಿಟಿಷ ಸೈನಿಕರು ಸತ್ತರು ಹಾಗೂ 40 ಜನ ಬ್ರಿಟಿಷ ಸೈನಿಕರು ಸೆರೆ ಆದರು.
ಕಿತ್ತೂರಿನ ಖಾಸಗಿ ಮನೆಗಳಲ್ಲಿ ಅಡಗಿ ಕುಳಿತ ಥ್ಯಾಕರೆನ ರಾಜಕೀಯ ಸಲಹೆಗಾರ ಸ್ಟೀವನ್ಸನ್ ಮತ್ತು ಇಲಿಯಟ್ ಶಿರಸ್ಥೆದಾರ ಶ್ರೀನಿವಾಸರಾವನನ್ನು ಕೊಲ್ಲಲು ಕಿತ್ತೂರು ಸೈನಿಕರು ನಿರ್ಧರಿಸಿದರು ಆದರೆ ರಾಣಿ ಚನ್ನಮ್ಮ ಇದನ್ನ ತಡೆದಳು.

ಇಕ್ಕಟ್ಟಿನಲ್ಲಿ ಸಿಕ್ಕ ವೈರಿಗಳನ್ನು ಔದರ‍್ಯದಿಂದ ಕಾಣುವ ಗುಣಗಳು ರಾಣಿ ಚನ್ನಮ್ಮಾಜಿಯಲ್ಲಿ ಇದ್ದವು. ಆ ಕಾರಣದಿಂದ ರಾಣಿ ಚನ್ನಮ್ಮ ಭಾರತ ಇತಿಹಾಸದಲ್ಲಿ ಮಹಾರಾಣಿ ಆಗಿದ್ದಾಳೆ. ಅಷ್ಟೆ ಅಲ್ಲದೆ “ವೈರಿಗಳ ಮಕ್ಕಳು ವೈರಿ ಅಲ್ಲ’’ ಎಂದು ತಿಳಿದು ಸತ್ತ ಥ್ಯಾಕರೆಯ ಮಕ್ಕಳನ್ನು ಜತನದಿಂದ ನೋಡಿಕೊಳ್ಳಲು ಸಂಸ್ಥಾನದ ಹಣಕಾಸು ಅಧಿಕಾರಿ ಬಸಲಿಂಗಪ್ಪ ಜಕಾತಿ ಅವರಿಗೆ ವಹಿಸಿಕೊಟ್ಟಿದರು.

ಕಿತ್ತೂರು ವಿಜಯೋತ್ಸವದ ಸಂದರ್ಭದಲ್ಲಿ ರಾಣಿ ಚನ್ನಮ್ಮಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗೋಣ.
——ಹರಹರ ಮಹಾದೇವ—–

 

ಲೇಖನ: ಬಸವರಾಜ ಶಂ ಚಿನಗುಡಿ
ಚನ್ನಮ್ಮನ ಕಿತ್ತೂರು.

ಜಿಲ್ಲೆ

ರಾಜ್ಯ

error: Content is protected !!